ಉಪ ಚುನಾವಣೆ: ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರ ತ್ಯಾಗ?
ಬೆಂಗಳೂರು, ನವೆಂಬರ್ 28: ಉಪಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ಎಲ್ಲಾ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿ ಪರ ಪ್ರಚಾರದಲ್ಲಿ ಮುಳುಗಿದ್ದಾರೆ.
ಆದರೆ ಯಶವಂತಪುರದಲ್ಲಿ ಮಾತ್ರ ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರಾಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಅವರೇ ಜಯ ಗಳಿಸಿದ್ದರು. ಆದರೆ ಈ ಅನರ್ಹತೆ ಎನ್ನುವ ಬಿಸಿ ಅವರನ್ನು ಬಿಜೆಪಿಗೆ ಹೋಗುವಂತೆ ಮಾಡಿದ್ದು ಈಗ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಹಾಗಾಗಿ ಹೇಗೂ ಸೋಮಶೇಖರ್ ಅವರೇ ಗೆಲುವು ಸಾಧಿಸುತ್ತಾರೆ ಎನ್ನುವ ನಂಬಿಕೆಯೋ ಏನೋ ಕಾಂಗ್ರೆಸ್ ನಾಯಕರು ಅತ್ತ ಪ್ರಚಾರಕ್ಕೆ ತೆರಳುತ್ತಿಲ್ಲ.

ಸಿದ್ದರಾಮಯ್ಯ ಒಂದು ದಿನದ ಪ್ರಚಾರ
ಸಿದ್ದರಾಮಯ್ಯ ಕೇವಲ ಒಂದು ದಿನ ಬಂದು ಪ್ರಚಾರ ಮಾಡಿದ್ದರು, ಇನ್ನುಳಿದ ಯಾವ ರಾಜ್ಯ ನಾಯಕರೂ ಯಶವಂತಪುರ ಕ್ಷೇತ್ರದತ್ತ ತಲೆ ಹಾಕಲೇ ಇಲ್ಲ. ಸ್ವತಃ ಉಪ ಚುನಾವಣೆ ಉಸ್ತುವಾರಿ ಹೊತ್ತ ಎಂ ಕೃಷ್ಣಪ್ಪ ಕೂಡ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಪರ ಪ್ರಚಾರಕ್ಕೆ ಬಂದಿಲ್ಲ.

ಜೆಡಿಎಸ್ ಜೊತೆಗೆ ಒಳ ಒಪ್ಪಂದ
ಜೆಡಿಎಸ್ ಜೊತೆಗಿನ ಒಳ ಒಪ್ಪಂದವೇ ಕಾಂಗ್ರೆಸ್ ಪ್ರಚಾರದ ನಿರಾಸಕ್ತಿಗೆ ಕಾರಣವಾಗಿರಬಹುದು. ಇನ್ನು ಮುದ್ದಯ್ಯನಪಾಳ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯೀಗೌಡ ಪ್ರಚಾರ ನಡೆಸಿದ್ದಾರೆ. ಮನೆಮನೆಗೂ ತೆರಳಿ ಮತಯಾಚನೆ ಮಾಡಿದ್ದಾರೆ. ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದ್ದಾರೆ.

ಯಶವಂಪುರ ಪುರ ಚುನಾವಣಾ ಕಣದಲ್ಲಿರುವವರು ಯಾರು?
ಯಶವಂತಪುರ ಉಪ ಚುನಾವಣೆಯ ಕಣದಲ್ಲಿ ಕಾಂಗ್ರೆಸ್ನಿಂದ ಪಾಳ್ಯ ನಾಗರಾಜ್, ಬಿಜೆಪಿಯಿಂದ ಎಸ್ಟಿ ಸೋಮಶೇಖರ್, ಜೆಡಿಎಸ್ನಿಂದ ಜವರಾಯೀಗೌಡ ಕಣದಲ್ಲಿದ್ದಾರೆ. ಡಿಸೆಂಬರ್ 5ರಂದು ಯಶವಂತಪುರ ಸೇರಿ ಒಟ್ಟು 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಜಗ್ಗೇಶ್
ಬಿಜೆಪಿ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ನಿರ್ಧರಿಸಿ ಜಗ್ಗೇಶ್ ಅವರನ್ನು ನಿಲ್ಲಿಸಿದ ಪರಿಣಾಮವಾಗಿ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಇದರಿಂದ ಯಶವಂತಪುರದಲ್ಲಿ ಬಿಜೆಪಿ ಪ್ರಭಾವ ಕುಗ್ಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿತ್ತು.












Click it and Unblock the Notifications