ಲೋಕಸಭೆಗೆ ಸ್ಪರ್ಧಿಸಲು ದೇವೇಗೌಡರೇ ಕಾರಣ ಎಂದ ಕಾಂಗ್ರೆಸ್ ಸಚಿವ
ಬೆಂಗಳೂರು, ಮಾರ್ಚ್ 28: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದೇವೇಗೌಡರೇ ಪ್ರಮುಖ ಕಾರಣ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರಪೂರ್ವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿ ನನ್ನನ್ನು ಸ್ಪರ್ಧೆ ಮಾಡುವಂತೆ ಸೂಚಿಸಿದರು ಎಂದರು. ಬೆಂಗಳೂರಿನ ಉತ್ತರದಲ್ಲಿ 10 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಯಾವ ಕೆಲಸವನ್ನೂ ಮಾಡಿಲ್ಲ. ಬೆಂಗಳೂರು ಕೇಂದ್ರ ಹಾಗೂ ಉತ್ತರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.

ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರ ಸಲಹೆಯಂತೆಯೇ ನಾನು ಲೋಕಸಭಾ ಅಖಾಡಕ್ಕಿಳಿದಿದ್ದೇನೆ. ನನಗೆ ಅರ್ಹತೆಗಿಂತ ಹೆಚ್ಚಿನ ಅಧಿಕಾರ ಈವರೆಗೂ ಸಿಕ್ಕಿದೆ. ಸಚಿವನಾಗಿರಬೇಕು ಎಂಬ ದೊಡ್ಡ ಆಸೆ ನನಗಿಲ್ಲ.
ಕೇಂದ್ರದಲ್ಲಿ ಬೇರೆ ಅಧಿಕಾರ ಗಿಟ್ಟಿಸುವ ಆಸೆಯೂ ಇಲ್ಲ ಎಂದು ಹೇಳಿದರು. ದೇವೇಗೌಡರನ್ನು ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದೆವು. ಆದರೆ ಅವರು ತುಮಕೂರನ್ನು ಆಯ್ಕೆ ಮಾಡಿಕೊಂಡರು.
ಕೇಂದ್ರ ಸರ್ಕಾರದಿಂದ ಎಚ್.ಎಂ.ಟಿ, ಐಟಿಪಿಎಲ್ ನಂತರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚುವ ಸ್ಥಿತಿ ಬಂದಿದೆ. ನನ್ನನ್ನು ಗೆಲ್ಲಿಸಿದರೆ ಅವುಗಳ ಪುನರುಜ್ಜೀವನಗೊಳಿಸಲಾಗುವುದು.
ನಾನು ಅಭ್ಯರ್ಥಿಯಾಗಿದ್ದು, ನಾಮಪತ್ರ ಸಲ್ಲಿಸುವ ಕೊನೆ ದಿನದ ಹಿಂದಿನ ದಿನ ಈ ಕ್ಷೇತ್ರದಲ್ಲಿ 27ಲಕ್ಷ ಮತದಾರರಿದ್ದು, ರಾಜ್ಯದಲ್ಲೇ ಹೆಚ್ಚು ಮತದಾರರಿರುವ ಈ ಕ್ಷೇತ್ರ ಭೌಗೋಳಿಕವಾಗಿಯೂ ದೊಡ್ಡದಿದೆ.
ನಾನು ಆಕಾಂಕ್ಷಿಯಾಗಿರದ ಹಿನ್ನೆಲೆಯಲ್ಲಿ ಪ್ರವಾಸ ಮಾಡಿರಲಿಲ್ಲ. ಇಂದಿನಿಂದಲೇ ಪ್ರಚಾರ ಆರಂಭಿಸುತ್ತೇನೆ. ಗೆದ್ದರೆ ಇಲ್ಲೇ ಇರುತ್ತೇನೆ. ಈಗಿನ ಸಂಸದರಂತೆ ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.












Click it and Unblock the Notifications