ಐಟಿ ದಾಳಿ: ಮಾಧ್ಯಮಗಳಿಗೆ ಡಿ ಕೆ ಸುರೇಶ್ ನೀಡಿದ ಎಚ್ಚರಿಕೆ
ಡಿ ಕೆ ಶಿವಕುಮಾರ್ ನಿವಾಸಗಳ ಮೇಲೆ ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಸದ ಡಿ ಕೆ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಆ 4: ಇಂಧನ ಸಚಿವ ಡಿ ಕೆ ಶಿವಕುಮಾರ್ ನಿವಾಸಗಳ ಮೇಲೆ ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಮತ್ತು ಡಿಕೆಶಿ ಸಹೋದರ ಡಿ ಕೆ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳು ಆಧಾರರಹಿತವಾಗಿದ್ದು, ಡಿ ಕೆ ಶಿವಕುಮಾರ್ ಅವರ ತೇಜೋವಧೆ ಮಾಡುತ್ತಿವೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿಯ ಬಗ್ಗೆ ಇದುವರೆಗೆ ಯಾವುದೇ ವಿಷಯವನ್ನು ಬಹಿರಂಗ ಪಡಿಸಲಿಲ್ಲ. ಆದಾಗ್ಯೂ, ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿವೆ.
ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಎದುರಾದ ವಿಚಿತ್ರ ಸಮಸ್ಯೆಗಳು
ನಮ್ಮ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿದ್ದು, ಆದಾಯ ತೆರಿಗೆ ದಾಳಿ ಮುಗಿದ ಮೇಲೆ ಎಲ್ಲಾ ಸತ್ಯ ಹೊರಬರಲಿದೆ. ನಮ್ಮ ವಿರುದ್ದ ಸುಳ್ಳು ಸುದ್ದಿ ಪ್ರಸಾರ ಮಾಡಲು ಕೆಲವರ ಷಡ್ಯಂತ್ರವೇ ಕಾರಣ. ಇಂತಹ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಡಿ ಕೆ ಸುರೇಶ್ ತಿಳಿಸಿದ್ದಾರೆ.
ಶಿವಕುಮಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ನಮ್ಮ ತಾಯಿ ಚಿಂತೆಗೀಡಾಗಿದ್ದಾರೆ. ಡಿ ಕೆ ಶಿವಕುಮಾರ್ ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಹಾಗಾಗಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬಂದಿದ್ದೇನೆಂದು ಡಿ ಕೆ ಸುರೇಶ್ ಹೇಳಿದ್ದಾರೆ.
ನಮ್ಮ ನಾಯಕರು, ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಪ್ರತೀಕಾರದ ದಾಳಿ, ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಾಗಿದ್ದೇವೆ ಎಂದು ಡಿಕೆ ಸುರೇಶ್, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಡಿ ಕೆ ಶಿವಕುಮಾರ್ ಭೇಟಿಯಾಗಲು ಐಟಿ ಅಧಿಕಾರಿಗಳು ಡಿ ಕೆ ಸುರೇಶ್ ಅವರಿಗೆ ಅವಕಾಶ ನೀಡಲಿಲ್ಲ.