ಕೆಪಿಎಸ್ಸಿಗೆ ಡಿ.26ರವರೆಗೆ ಗಡುವು: ನೇಮಕಾತಿ ಪೂರ್ಣಗೊಳಿಸಲು ಆಗ್ರಹ
ಬೆಂಗಳೂರು, ಡಿಸೆಂಬರ್ 4:ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಿರುವ ಶೀಘ್ರ ಬೆರಳಚ್ಚುಗಾರರು, ಅಬಕಾರಿ ನಿರೀಕ್ಷರು ಹಾಗೂ ಮತ್ತಿತರೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ 26ರ ಒಳಗೆ ಪೂರ್ಣಗೊಳಿಸುವಂತೆ ನೂರಾರು ಪದವೀಧರರು ಕೆಪಿಎಸ್ಸಿಗೆ ಗಡುವು ವಿಧಿಸಿದ್ದಾರೆ.
ಕೆಪಿಎಸ್ಸಿಯ ವಿಳಂಬ ಧೋರಣೆ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ವಿರೋಧಿಸಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಉದ್ಯೋಗಸೌಧದೆದುರು ಕೆಪಿಎಸ್ಸಿ ಕದ ತಟ್ಟುವ ಚಳವಳಿ ನಡೆಸಿದ ಪದವೀಧರರು ಕೆಪಿಎಸ್ಸಿ ಕಾರ್ಯವೈಖರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಸಾಕಷ್ಟು ವಿಳಂಬವಾಗಿರುವ ವಿವಿಧ ಹುದ್ದೆಗಳ ನೇಮಕಾತಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನಿಸಬೇಕೆಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದರು.

ಈ ವೇಳೆ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸುದೀರ್ಘ ಮನವಿ ಪತ್ರವನ್ನು ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ಭಟ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್ ,ಕರ್ನಾಟಕ ಲೋಕಸೇವಾ ಆಯೋಗ ನಮ್ಮ ರಾಜ್ಯದ ಉದ್ಯೋಗಾಕಾಂಕ್ಷಿಗಳನ್ನು ಹತಾಶರನ್ನಾಗಿಸಿದೆ. ಅವರ ವಿಳಂಬ ನೀತಿಯಿಂದ ಜೊತೆಗೆ ಸಂವೇದನಾರಹಿತ ನಡವಳಿಕೆಯಿಂದ ಹತಾಶರನ್ನಾಗಿಸಿದೆ ಎಂದರು.

ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಕೆಪಿಎಸ್ಸಿ ವಿಚಾರ ತಿಳಿಸಿ ಪತ್ರವನ್ನು ಬರೆದಿದ್ದೆ, ಅವತ್ತೇ 4 ನೇ ತಾರೀಕಿನಂದು ಕೆಪಿಎಸ್ಸಿಯ ಕದ ತಟ್ಟುತ್ತೇನೆ ಎಂದು ಹೇಳಿದರು.
ವಿಶೇಷವಾಗಿ ಕೆಎಎಸ್ ಡಿಸೆಂಬರ್ 2017ರಲ್ಲಿ ಪರೀಕ್ಷೆಯಾಗಿದೆ. ಇದುವರೆಗೂ ಫಲಿತಾಂಶ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಬೆರಳಚ್ಚುಗಾರರು 661 ಮಂದಿ ಇದ್ದಾರೆ, ಅಬಕಾರಿ ನಿರೀಕ್ಷಕರಲ್ಲಿ ಮಹಿಳೆಯರು ಹಾಗೂ ಪುರುಷರು ಕಾಯುತ್ತಿದ್ದಾರೆ. ಆರೋಗ್ಯ ಅಧಿಕಾರಿಗಳು, ಜ್ಯೂನಿಯರ್ ಎಂಜಿನಿಯರ್ಗಳು ಬೇರೆ ಬೇರೆ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳಿಗೆ ಡಿಸೆಂಬರ್ 26ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications