ಬೆಂಗಳೂರಿನ ಸ್ಮಶಾನದಲ್ಲೂ ಶವಗಳ ಸರತಿ, ಇದು ಪ್ರಸ್ತುತ ಕೊರೊನಾ ಪರಿಸ್ಥಿತಿ
ಬೆಂಗಳೂರು, ಏಪ್ರಿಲ್ 15: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ, ಇಡೀ ರಾಜ್ಯದಲ್ಲಿರುವ ಒಟ್ಟು ಕೊರೊನಾ ಸೋಂಕಿತರಲ್ಲಿ ಮುಕ್ಕಾಲು ಭಾಗದಷ್ಟು ಸೋಂಕಿತರು ಬೆಂಗಳೂರಿನಲ್ಲಿಯೇ ಇದ್ದಾರೆ.
ಕಠಿಣ ಕ್ರಮಗಳು, ನೈಟ್ ಕರ್ಫ್ಯೂ ಇದ್ಯಾವುದರಿಂದಲೂ ಸೋಂಕು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ, ಸಾವು-ನೋವಿನ ಪ್ರಮಾಣ ಕಣ್ಣೀರುಕ್ಕಿಸುತ್ತಿದೆ, ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ, ಚಿಕಿತ್ಸೆ ಸಿಗದೆ ಸೋಂಕಿತರ ನರಳಾಟ ನಿಜಕ್ಕೂ ಅತಂತ್ರ ಪರಿಸ್ಥಿತಿಯಾದಂತಾಗಿದೆ.
ವೆಂಟಿಲೇಟರ್ ಕೊರತೆ, ಆಂಬ್ಯುಲೆನ್ಸ್ ಇಲ್ಲ ಎನ್ನುವುದು ಸಾಮಾನ್ಯ ಆಗಿಬಿಟ್ಟಿದೆ, ಇನ್ನು ಆಸ್ಪತ್ರೆಗಳ ಜತೆಗೆ ಸ್ಮಾಶಾನ ಕೂಡ ತುಂಬಿರುವುದನ್ನು ನೋಡಿದರೆ ಪರಿಸ್ಥಿತಿ ಕರಾಳತೆ ಅರ್ಥವಾಗುತ್ತದೆ.

ಇನ್ನು ಶವಗಳನ್ನು ಹೊತ್ತು ಬಂದಿರುವ ವಾಹನಗಳು ಸ್ಮಾಶಾನದಲ್ಲಿ ಸರತಿಯಲ್ಲಿ ನಿಲ್ಲುತ್ತಿವೆ. ಕೋವಿಡ್ ನಿಯಮದಂತೆ ಶವ ಸಂಸ್ಕಾರ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಸ್ಮಶಾನಗಳಿಗೆ ನಿತ್ಯ ಕನಿಷ್ಠ 20 ಶವಗಳು ಬರುತ್ತಿವೆ, ಸ್ಮಶಾನದ ಸಿಬ್ಬಂದಿ ಪ್ರತಿ ಶವದ ಸಂಸ್ಕಾರದ ಬಳಿಕ ಒಂದೊಂದು ಪಿಪಿಇ ಕಿಟ್ ಬದಲಾಯಿಸಬೇಕಾಗುತ್ತದೆ. ಕೆಂಗೇರಿ ಸ್ಮಾಶಾನದಲ್ಲಿ 2 ಯಂತ್ರಗಳಿದ್ದು, ಒಂದು ಯಂತ್ರ ಕೈಕೊಟ್ಟಿರುವ ಕಾರಣ ನಿಧಾನವಾಗಿ ಕೆಲಸ ನಡೆಯುತ್ತಿದೆ.
ಹಾಗೆಯೇ ಸ್ಮಶಾನಗಳಿಗೆ ಪಿಪಿಇ ಕಿಟ್ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲದ ಕಾರಣ, ಒಂದೇ ಪಿಪಿಇ ಕಿಟ್ ಧರಿಸಿ ಮೂರರಿಂದ ನಾಲ್ಕು ಶವಗಳ ಸಂಸ್ಕಾರ ನಡೆಸಲಾಗುತ್ತಿದೆ. ನಿತ್ಯ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಡುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಸ್ಮಶಾನದ ಕೊರತೆಯೂ ಕಾಡುತ್ತಿದೆ.
ಬೆಂಗಳೂರಿನಲ್ಲಿ 12 ವಿದ್ಯುತ್ ಚಿತಾಗಾರಗಳಿವೆ, ಇನ್ನು ಲಕ್ಷ್ಮೀಪುರ ಕ್ರಾಸ್, ಸುಮನಹಳ್ಳಿ, ಕೆಂಗೇರಿ, ಬೊಮ್ಮನಹಳ್ಳಿ ಹಾಗೂ ಪಣತ್ತೂರು ಸೇರಿ 5 ಕಡೆ ಇರುವ ಚಿತಾಗಾರವನ್ನು ಕೋವಿಡ್ 19ನಿಂದ ಮೃತಪಟ್ಟಿರುವವರಿಗೆ ಮೀಸಲಿಡಲಾಗಿದೆ.
ಕೋವಿಡ್ 19 ನಿಂದ ಮೃತಪಟ್ಟಿರುವ ಓರ್ವ ವ್ಯಕ್ತಿಯ ಶವ ಸಂಸ್ಕಾರಕ್ಕೆ ಬಿಬಿಎಂಪಿ 500 ರೂ. ನೀಡಲಿದೆ. ಕೆಲವು ದಿನಗಳಿಂದ ನಗರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು ಶವ ಸಂಸ್ಕಾರ ಮಾಡಲು ಕೂಡ ಸರತಿಯಲ್ಲಿ ನಿಲ್ಲಬೇಕಾಗಿದೆ.












Click it and Unblock the Notifications