ಕಳ್ಳರ ಹಿಡಿದು ಪ್ರಶಸ್ತಿ ಪಡೆದ ಪೇದೆ: ಅತ್ಯಾಚಾರ ಮಾಡಿ ಜೈಲು ಸೇರಿದ
ಬೆಂಗಳೂರು, ನವೆಂಬರ್ 20: ಸರಗಳ್ಳರನ್ನು ಹಿಡಿದು ಪ್ರಶಸ್ತಿ ಪಡೆದಿದ್ದ ಪೇದೆ ಗೃಹ ರಕ್ಷಕ ದಳದ ಸಿಬ್ಬಂದಿ ಮೇಲೆ ಅತ್ಯಾಚಾರ ವೆಸಗಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಇತ್ತೇಚೆಗಷ್ಟೇ ಸರಗಳ್ಳರನ್ನು ಹಿಡಿದು ಬೈಕ್ ಬಹುಮಾನವಾಗಿ ಜ್ಞಾನಭಾರತಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೆಬಲ್ ಚಂದ್ರ ಕುಮಾರ್ ಬಹುಮಾನ ಪಡೆದಿದ್ದರು. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಚಂದ್ರಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಕರ್ತವ್ಯ ಮುಗಿಸಿದ ಬಳಿಕ ಸಂತ್ರಸ್ತೆಯ ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಮಾಡಿದ್ದ ಎಂದು ದೂರಲಾಗಿದೆ.
ಒಂದೇ ಕಡೆ ಕೆಲಸ ಮಾಡುತ್ತಿದ್ದುದರಿಂದ ಗೃಹ ರಕ್ಷಕ ಸಿಬ್ಬಂದಿಗೆ ಹೆಡ್ ಕಾನ್ಸ್ಟೆಬಲ್ ಚಂದ್ರಕುಮಾರ್ ಪರಿಚಯವಿತ್ತು. ಈ ಗೆಳೆತನದಲ್ಲೇ ಆತ ಜ್ಞಾನಭಾರತಿ ವಿಶ್ವವಿದ್ಯಾಯದ ಆವರಣದಲ್ಲಿ ಭದ್ರತಾ ಕರ್ತವ್ಯ ಮುಗಿಸಿದ ಬಳಿಕ ಆಕೆಯನ್ನು ಮನೆಗೆ ಡ್ರಾಪ್ ಮಾಡಿದ್ದ. ಹೀಗೆ ಅವರಿಬ್ಬರ ಮಧ್ಯೆ ಆತ್ಮೀಯತೆ ಮೂಡಿತ್ತು ಎನ್ನಲಾಗಿದೆ.

ಇದಾದ ನಂತರ ನವೆಂಬರ್ 16ರಂದು ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗೃಹ ರಕ್ಷಕ ಸಿಬ್ಬಂದಿಯನ್ನು ಅಡ್ಡಗಟ್ಟಿ ಚಂದ್ರಕುಮಾರ್ ಅಸಭ್ಯವಾಗಿ ನಡೆದುಕೊಂಡಿದ್ದ, ಈ ನಡವಳಿಕೆಯಿಂದ ಬೇಸರಗೊಂಡಿದ್ದ ಸಂತ್ರಸ್ತೆ ಜ್ಞಾನಭಾರತಿ ಠಾಣೆ ಇನ್ಸ್ಪೆಕ್ಟರ್ ಗೆ ಚಂದ್ರಕುಮಾರ್ ವಿರುದ್ಧ ದೂರು ನೀಡಿದ್ದರು. ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿದ್ದರು.
ಅಂದು ರಾತ್ರಿ ಮನೆಯ ಕಾಲಿಂಗ್ ಬೆಲ್ ಆಗಿದೆ ಪತಿ ಬಂದಿರಬೇಕು ಎಂದು ಆಕೆ ಬಾಗಿಲು ತೆರೆದಾಗ ಚಂದ್ರಕುಮಾರ್ ಬಲವಂತವಾಗಿ ಒಳಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಲಾಗಿದೆ.












Click it and Unblock the Notifications