ಆಕ್ಸಿಡೆಂಟ್ ಕೇಸ್: 12 ವರ್ಷದ ಬಳಿಕ ಜೈಲು ಸೇರಿದ ಅಪರಾಧಿ!
ಬೆಂಗಳೂರು, ಫೆ. 22 : ಹಳೇ ವಾರಂಟ್ ಹುಡುಕಿ ಹನ್ನೆರಡು ವರ್ಷದಿಂದ ಶಿಕ್ಷೆ ಅನುಭವಿಸದೇ ತಲೆ ಮರೆಸಿಕೊಂಡಿದ್ದ ಶಿಕ್ಷಾ ಬಂಧಿಯನ್ನು ವಿಜಯನಗರ ಸಂಚಾರ ಪೊಲೀಸ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಂಜುನಾಥ್ ತನ್ನ ಕಾರ್ಯಕ್ಷಮತೆ ಮರೆದಿದ್ದಾರೆ.
ಅಪಘಾತ ಪ್ರಕರಣ ಸಂಬಂಧ ನ್ಯಾಯಾಲಯದ ವಾರಂಟ್ ನೀಡುವ ಮಂಜುನಾಥ್, ಕೈಗೆ ಅಪಘಾತ ಪ್ರಕರಣದಲ್ಲಿ ಶಿಕ್ಷೆಯಾಗಿರುವ ವಾರಂಟ್ ಕೈಗೆ ಸಿಕ್ಕಿದೆ. ಇದರ ಜಾಡು ಹಿಡಿದು ಅಂಜನಾನಗರದಲ್ಲಿ ತನಗೇನೂ ಗೊತ್ತೇ ಇಲ್ಲದಂತೆ ವಾಸ ಮಡುತ್ತಿದ್ದ ಗೋಪಾಲಕೃಷ್ಣನನ್ನು ಪತ್ತೆ ಮಾಡಿದ್ದಾರೆ. 2007 ರಲ್ಲಿ 30 ವರ್ಷದ ಮಹಿಳೆಯನ್ನು ಬಲಿ ಪಡೆದಿದ್ದ ಅಪಘಾತ ಪ್ರಕರಣದಲ್ಲಿ 2011 ರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಗೋಪಾಲಕೃಷ್ಣ ಪೊಲೀಸರಿಗೆ ಛಳ್ಳೆ ಹಣ್ಣು ತಿನ್ನಿಸಿದ್ದ. ಒಂದು ವರ್ಷ ಜೈಲು ಶಿಕ್ಷೆ ಅನುಭವಿಸದೇ ತಲೆ ಮರೆಸಿಕೊಂಡಿದ್ದ.
ವಾರಂಟ್ ಆಧರಿಸಿ ಗೋಪಾಲಕೃಷ್ಣನ್ನು ಪತ್ತೆ ಮಾಡಿದ ವಿಜಯನಗರ ಸಂಚಾರ ಪೊಲೀಸ್ ಠಾಣೆ ಪೇದೆ ಮಂಜುನಾಥ್, ಶಿಕ್ಷಾ ಬಂಧಿ ಗೋಪಾಲಕೃಷ್ಣನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಬಂಧಿಯನ್ನು ಜೈಲಿಗೆ ರವಾನಿಸಿದೆ. ಹಳೇ ವಾರಂಟ್ ಆಧರಿಸಿ ಹನ್ನೆರಡು ವರ್ಷದಿಂದ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ ಶಿಕ್ಷಾ ಬಂಧಿಯನ್ನು ಪತ್ತೆ ಮಾಡಿದ ಸಂಚಾರ ಪೇದೆ ಮಂಜುನಾಥ್ ಕಾರ್ಯವನ್ನುಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಶ್ಲಾಘಿಸಿದ್ದಾರೆ.

ಬಿಎಂಟಿಸಿ ಚಾಲಕನಾಗಿದ್ದ ಗೋಪಾಲಕೃಷ್ಣ, ಕರ್ತವ್ಯಕ್ಕೆ ಗೈರು ಆಗುತ್ತಿದ್ದ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಚಾಲಕ ಹುದ್ದೆಯಿಂದ ವಜಾ ಆಗಿದ್ದ. 2001 ರಲ್ಲಿ ಸರ್ಕಾರಿ ಕೆಲಸದಿಂದ ವಜಾ ಆಗಿದ್ದ ಗೋಪಾಲಕೃಷ್ಣ, ಬಳಿಕ ಟಿಪ್ಪರ್ ಲಾರಿ ಚಾಲಕನಾಗಿದ್ದ. 2007 ರಲ್ಲಿ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ಪಾದಚಾರಿಗೆ ಟಿಪ್ಪರ್ ಗುದ್ದಿ ಮೊನಿಷಾ ಎಂಬ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ವಿಜಯನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆರೋಪಿ ಗೋಪಾಲಕೃಷ್ಣ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ್ದ ಅಪಘಾತ ಪ್ರಕರಣಗಳ ವಿಲೇವಾರಿ ವಿಶೇಷ ನ್ಯಾಯಾಲಯ, ಅರೋಪಿಗೆ ಒಂದು ವರ್ಷ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು. 2011 ರಲ್ಲಿ ತೀರ್ಪು ನೀಡಿದರೂ ಆರೋಪಿ ಗೋಪಾಲಕೃಷ್ಣ ಪೊಲೀಸರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಹನ್ನೆರಡು ವರ್ಷ ರಾಜಾರೋಷವಾಗಿ ತಿರುಗಾಡಿಕೊಂಡಿದ್ದ. ಹನ್ನೆರಡು ವರ್ಷದ ಬಳಿಕ ಇದೀಗ ಜೈಲು ಸೇರಿದ್ದಾನೆ.












Click it and Unblock the Notifications