ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪೊಲೀಸ್ ಅಧಿಕಾರಿಗಳಿಗೆ ಎಸಿಬಿ ಕಂಟಕ
ಬೆಂಗಳೂರು, ಫೆ. 14: ಜಲ್ಲಿ ಕ್ರಷರ್ ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಅಮಾನತಿಗೆ ಒಳಗಾಗಿರುವ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಲಂಚ ಮುಕ್ತ ಕರ್ನಾಟಕ ಎಸಿಬಿಗೆ ದೂರು ನೀಡಿದೆ.
ವಿಜಯಪುರ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ಟಿ. ಶ್ರೀನಿವಾಸ್ (ಡಿಸಿಐಬಿ ಜಿಲ್ಲಾ ಪೊಲೀಸ್ ಕಚೇರಿ, ಬೆಂಗಳೂರು) ಹೊಸಹಳ್ಳಿ ಠಾಣೆ ಎಎಸ್ಐ ಶುಭಾ, ಹೆಬ್ಬಗೋಡಿ ಪೊಲೀಸ್ ಠಾಣೆ ಎಎಎಸ್ಐ ಕೆ.ಜಿ. ಅನಿತಾ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲಂಚ ಮುಕ್ತ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಅವರಿಗೆ ದೂರು ನೀಡಿದ್ದಾರೆ.
ದೂರಿನೊಂದಿಗೆ ಈ ಪ್ರಕರಣ ಸಂಬಂಧ ಎಸ್ಪಿ ಅವರು ನೀಡಿರುವ ತನಿಖಾ ವರದಿ, ಜಲ್ಲಿ ಕ್ರಷರ್ ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಎಡಿಜಿಪಿ ನಡೆಸಿರುವ ತನಿಖಾ ವರದಿ, ಅಮಾನತು ಆದೇಶ ಒಳಗೊಂಡಂತೆ ದಾಖಲೆಗಳನ್ನು ಆಧರಿಸಿ ದೂರು ನೀಡಲಾಗಿದೆ.

ಸದ್ಯ ಅಮಾನತಿಗೆ ಒಳಗಾಗಿರುವ ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಇದೀಗ ಎಸಿಬಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಿದೆ.
ಏನಿದು ಪ್ರಕರಣ: ಅತ್ತಿಬೆಲೆ ನಿವಾಸಿ ಉದ್ಯಮಿ ಮಂಜುನಾಥ್ ಎಂಬುವರ ಜಲ್ಲಿ ಕ್ರಷರ್ ನ ಪಾಲುದಾರನಾಗುವ ಸಂಬಂಧ ಜಲ್ಲಿ ಕ್ರಷರ್ ಮಾಲೀಕರಿಗೆ ಮೂರು ಕೋಟಿ ರೂ. ಹಣ ನೀಡಿದ್ದರು. ಹಣ ಪಡದು ವಂಚಿಸಿದ್ದ ವ್ಯಕ್ತಿಯ ವಿರುದ್ಧ ಮಂಜುನಾಥ್ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸದೇ ಎಫ್ಐಆರ್ ದಾಖಲಿಸಲು ಐದು ಲಕ್ಷ ರೂ. ಹಣ ನೀಡುವಂತೆ ಅಂದು ಬೆಂಗಳೂರು ಗ್ರಾಮಾಂತರ ಡಿಸಿಇಬಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣ ನೀಡಿದ ಬಳಿಕವೂ ಮಂಜುನಾಥ್ಗೆ ವಂಚಿಸಿದ್ದ ವಂಚಕರ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ.
ಬದಲಿಗೆ ಆರೋಪಿಗಳು ಹಣ ಕೊಟ್ಟು ಪೊಲೀಸ್ ಎಸ್ಪಿ ರವಿ ಚನ್ನಣ್ಣನವರ್ ನೆರವಿನಿಂದ ಇತ್ಯರ್ಥ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಈ ಕುರಿತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದ ಮಂಜುನಾಥ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಈ ಪ್ರಕರಣ ಇತ್ತೀಚೆಗೆ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ನನಗೆ ನ್ಯಾಯ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ದೂರಿನಲ್ಲಿ ಅಂಗಲಾಚಿದ್ದರು.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಹೆಸರು ಕೂಡ ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಈ ಕುರಿತು ಎಸ್ಪಿ ದರ್ಜೆಯ ಅಧಿಕಾರಿ ಹೆಸರಿನಲ್ಲಿ ತನಿಖೆ ನಡೆಸಿದ್ದ ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್ ಗೃಹ ಇಲಾಖೆಗೆ ವರದಿ ನೀಡಿದ್ದರು. ವರದಿ ಆಧರಿಸಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಎಎಸ್ಐ ಶುಭಾ, ಮತ್ತು ಅನಿತಾ ಅವರು ಹಣ ಪಡೆದಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರನ್ನು ಅಮಾನತು ಮಾಡಲಾಗಿತ್ತು.
ಈ ವರದಿ ಆಧರಿಸಿ ಇದೀಗ ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸುವಂತೆ ಕೋರಿ ಲಂಚ ಮುಕ್ತ ಕರ್ನಾಟಕ ಸಂಘಟನೆ ಎಸಿಬಿಗೆ ದೂರು ನೀಡಿದೆ.
ಇನ್ನು ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಮೇಲಿನ ಆರೋಪ ಹೊಸ ತಿರುವು ಪಡೆದುಕೊಂಡಿತ್ತು. ರವಿ ಚನ್ನಣ್ಣನವರ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಯಾವುದೇ ವರದಿ ಪ್ರಸಾರ ಮಾಡದಂತೆ ರವಿ ಚನ್ನಣ್ಣನವರ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ಸ್ಮರಿಸಬಹುದು.












Click it and Unblock the Notifications