ಸಿ.ಕೆ.ಜಾಫರ್ ಷರೀಫ್ ರಾಹುಲ್ ಗಾಂಧಿ ಭೇಟಿ ಮಾಡಿದ್ದೇಕೆ?
ಬೆಂಗಳೂರು, ಡಿಸೆಂಬರ್ 07 : ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಷರೀಫ್ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೊಮ್ಮಗನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ದೆಹಲಿಯಲ್ಲಿ ಸಿ.ಕೆ.ಜಾಫರ್ ಷರೀಫ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಮೊಮ್ಮಗ ರೆಹಮಾನ್ ಷರೀಫ್ಗೆ ಹೆಬ್ಬಾಳ ಕ್ಷೇತ್ರದ 2018ರ ಚುನಾವಣೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.
ಹೆಬ್ಬಾಳ ಕ್ಷೇತ್ರದ ಟಿಕೆಟ್ಗೆ ಮೊದಲಿನಿಂದಲೂ ಭಾರೀ ಪೈಪೋಟಿ ಇದೆ. 2013ರ ಚುನಾವಣೆಯಲ್ಲಿ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತರಾದ ಆರ್.ಜಗದೀಶ್ ಕುಮಾರ್ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ನಡೆದಿತ್ತು. ಆಗ, ಬಿಜೆಪಿಯ ವೈ.ನಾರಾಯಣ ಸ್ವಾಮಿ ಜಯಗಳಿಸಿದ್ದಾರೆ.
ಸದ್ಯ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಆದ್ದರಿಂದ, ಜಾಫರ್ ಷರೀಫ್ ಅವರು ಮೊಮ್ಮಗನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ರೆಹಮಾನ್ ಷರೀಫ್ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಅವರಿಗೆ ಟಿಕೆಟ್ ನಿರಾಕರಿಸಬಹುದು ಎಂಬುದು ಜಾಫರ್ ಷರೀಫ್ ಅವರ ಲೆಕ್ಕಾಚಾರವಾಗಿರಬಹುದು...

ರಾಹುಲ್ ಗಾಂಧಿ ಹೇಳಿದ್ದೇನು?
ಸಿ.ಕೆ.ಜಾಫರ್ ಷರೀಫ್ ಅವರ ಭೇಟಿ ವೇಳೆ ರಾಹುಲ್ ಗಾಂಧಿ, ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ, ಇನ್ನೂ ಟೈಂ ಇದೆಯಲ್ಲ ನೋಡಣ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಉಪ ಚುನಾವಣೆಯಲ್ಲಿ ಪೈಪೋಟಿ
2016ರ ಫೆಬ್ರವರಿಯಲ್ಲಿ ಹೆಬ್ಬಾಳದಲ್ಲಿ ಉಪ ಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ ನಡೆದಿತ್ತು. ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ಅವರ ಹೆಸರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು. ಅಂತಿಮವಾಗಿ ರೆಹಮಾನ್ ಷರೀಫ್ ಟಿಕೆಟ್ ಪಡೆದಿದ್ದರು.

ಎರಡು ಸಲ ಸೋತಿರುವ ರೆಹಮಾನ್ ಷರೀಫ್
2013ರ ವಿಧಾನಸಭೆ ಚುನಾವಣೆ ಮತ್ತು 2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಬ್ಬಾಳದಲ್ಲಿ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಎರಡೂ ಚುನಾವಣೆಯಲ್ಲಿಯೂ ಅವರು ಸೋಲು ಕಂಡಿದ್ದರು. ಆದ್ದರಿಂದ, ಈ ಬಾರಿ ಬೇರೆ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬಹುದು ಎಂಬ ಸುದ್ದಿಗಳು ಹಬ್ಬಿವೆ.

ಬಿಜೆಪಿ ವಶದಲ್ಲಿರುವ ಕ್ಷೇತ್ರ ಹೆಬ್ಬಾಳ
2013ರ ಚುನಾವಣೆಯಲ್ಲಿ ಬಿಜೆಪಿಯ ಆರ್.ಜಗದೀಶ್ ಕುಮಾರ್, 2016ರ ಉಪ ಚುನಾವಣೆಯಲ್ಲಿ ವೈ.ನಾರಾಯನಸ್ವಾಮಿ ಹೆಬ್ಬಾಳ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.












Click it and Unblock the Notifications