ಪಟೇಲ್ ಆನಂದ ಬಳಿ ಬಡ್ಡಿ ವ್ಯಾಪಾರ ಮಾಡಿದವರಿಗೆ ಮಕ್ಮಲ್ ಟೋಪಿ
ಬೆಂಗಳೂರು ನ. 12: ಹೆಚ್ಚು ಬಡ್ಡಿ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ಖಾಸಗಿ ಚಿಟ್ ಫಂಡ್ ಕಂಪನಿ ಮೋಸ ಮಾಡಿದೆ. ಉಲ್ಲಾಳ ಉಪನಗರ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಐಶ್ವರ್ಯ ಚಿಟ್ ಫಂಡ್ ಕಂಪನಿ ಮಾಲೀಕ ಪಟೇಲ್ ಆನಂದ್, ಪತ್ನಿ ಗಂಗಾಬಿಕೆ ಹಾಗೂ ಪುತ್ರಿಯರ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಒಂದು ಲಕ್ಷ ರೂ. ಕೊಟ್ಟರೆ ಮಾಸಿಕ 2.5 ಸಾವಿರ ಬಡ್ಡಿ ನೀಡುವುದಾಗಿ ನಂಬಿಸಿದ್ದ. ಹಲವು ತಿಂಗಳು ಬಡ್ಡಿ ಕೂಡ ಬ್ಯಾಂಕ್ ಗಳ ಮೂಲಕ ಪಾವತಿಸಿದ್ದ. ಕಳೆದ ಫೆಬ್ರವರಿ ವರೆಗೂ ಬಡ್ಡಿ ನೀಡಿದ್ದ. ಇದೀಗ ಇದ್ದಕ್ಕಿದ್ದಂತೆ ಬಡ್ಡಿಯೂ ಇಲ್ಲದೇ ಅಸಲೂ ಕೊಡದೇ ಕೈ ಎತ್ತಿದ್ದಾನೆ. ಸುಮಾರು ಹತ್ತು ಲಕ್ಷ ಹೂಡಿಕೆ ಮಾಡಿದ್ದ ವ್ಯಕ್ತಿಯೊಬ್ಬರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಹಿನ್ನೆಲೆ ಸುಮಾರು 200ಕ್ಕೂ ಹೆಚ್ಚು ಮಂದಿ ಹೂಡಿಕೆ ಮಾಡಿರುವ ಸಂಗತಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ ಪಾಟೀಲ ಅವರು ತಿಳಿಸಿದ್ದಾರೆ. ಐಶ್ವರ್ಯ ಚಿಟ್ ಫಂಡ್ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೊಗಿದ್ದಲ್ಲಿ ಜ್ಞಾನ ಭಾರತಿ ಠಾಣೆಗೆ ದೂರು ನೀಡಲು ಮನವಿ ಮಾಡಿದ್ದಾರೆ. ಕಳೆದ ಹಲವು ತಿಂಗಳಿನಿಂದ ಹೂಡಿಕೆದಾರರಿಗೆ ಬಡ್ಡಿ ಪಾವತಿಸಿಲ್ಲ. ಈತನ ಬಡ್ಡಿ ಸ್ಕೀಮ್ ನೋಡಿ ಜನರು ಬ್ಯಾಂಕಿನ ಹಣ ತಂದು ಐಶ್ವರ್ಯ ಚಿಟ್ ಫಂಡ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.