ವಾಯುಮಾಲಿನ್ಯದ ಜಾಗೃತಿಗೆ ಮಕ್ಕಳ ಮೊರೆ ಹೋದ ಸಾರಿಗೆ ಇಲಾಖೆ
ಬೆಂಗಳೂರು, ನವೆಂಬರ್ 26: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರು ವಾಯುಮಾಲಿನ್ಯ ತಡೆಗೆ ಸಾರಿಗೆ ಇಲಾಖೆ ನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಮಕ್ಕಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡುತ್ತಿದೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ವಾಯು ಮಾಲಿನ್ಯ ಮಾಸಚರಣೆ ಆಚರಿಸುತ್ತ ಜನರಲ್ಲಿ ಅರಿವು ಮೂಡಿಸುತ್ತಿರುವ ಇಲಾಖೆ ಇದರ ಅಂಗವಾಗಿ ಬಾಲಭವನದಲ್ಲಿ ಇಂದು ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಿತ್ತು.
ಬೆಂಗಳೂರಿನ ವಿವಿಧ ಸಾರಿಗೆ ಇಲಾಖೆಗಳ ವ್ಯಾಪ್ತಿಯಲ್ಲಿನ 500ಕ್ಕೂ ಅಧಿಕ ಶಾಲಾ ಮಕ್ಕಳಿಗೆ ವಾಯುಮಾಲಿನ್ಯದ ಅರಿವು ಮೂಡಿಸುವ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಕೂಟಗಳನ್ನು ನಡೆಸಿತು.

ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಓಂಕಾರೇಶ್ವರಿ ಮತ್ತು ಜ್ಞಾನಭಾರತಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
ವಾಯು ಮಾಲಿನ್ಯ ಮಾಸಚರಣೆಯ ಸ್ಪಂದನ ಕಾರ್ಯಕ್ರಮಗಳ ಮೂಲಕ ಆಟೋ ರಿಕ್ಷಾ, ಕ್ಯಾಬ್, ಬಸ್ಸು ಮತ್ತು ಲಾರಿ ಚಾಲಕರಿಗೆ ಇಂಧನ ಕಲಬೆರಕೆಯ ದುಷ್ಪರಿಣಾಮ ಮತ್ತು ಕ್ರಮಬದ್ಧ ಚಾಲನೆಯ ಕುರಿತು ಅರಿವು ಮೂಡಿಸಲಾಯಿತು. ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನದಲ್ಲಿ ವಾಯುಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಮತ್ತು ಬೈಕ್ಗಳ ಬಳಕೆಗೆ ಒತ್ತು ನೀಡುವಂತೆ ತಿಳಿಸಲಾಯಿತು.

ಅಭಿಯಾನದ ಅಂಗವಾಗಿ ಸಾಫಲ್ಯ ರಂಗ ತಂಡದಿಂದ ವಾಯು ಮಾಲಿನ್ಯದ ದುಷ್ಪರಿಣಾಮಗಳನ್ನ ಜನರಿಗೆ ತಿಳಿಸಲು ಬೀದಿ ನಾಟಕ ಮಾಡಲಾಯಿತು. ಇನ್ನೂ ಇದರ ಭಾಗವಾಗಿ ಪಾದಯಾತ್ರೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಜನಸಾಮಾನ್ಯರಲ್ಲಿ ವಾಹನಗಳ ಮಾಲಿನ್ಯ ಪ್ರಮಾಣದ ನಿಯಮಿತ ತಪಾಸಣೆ, ವಾಹನಗಳನ್ನ ಸುಸ್ಥಿಯಲ್ಲಿ ಇಡುವುದರ ಬಗೆಗಿನ ಅಗತ್ಯದ ಕುರಿತು ಅರಿವು ಮೂಡಿಸಲಾಯಿತು.











Click it and Unblock the Notifications