ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ
ಬೆಂಗಳೂರು, ಮೇ 31: ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದ ಸಿನಿಮೀಯ ರೀತಿಯ ಮಗು ಕಳ್ಳತನ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಆಗ ತಾನೇ ಕಣ್ಬಿಟ್ಟಿದ್ದ ಪುಟ್ಟ ಗಂಡು ಹಸುಗೂಸು ಬೇರೆಯವರ ಪಾಲಾಗಿತ್ತು. ರೇಖಾಚಿತ್ರ ನೀಡಿದ ಸಣ್ಣ ಸುಳಿವು ಆಧರಿಸಿ ಬೆಂಗಳೂರು ಪೊಲೀಸರು ಆಸ್ಪತ್ರೆಯಲ್ಲಿ ಮಗುವನ್ನು ಕದ್ದು ಮಾರಾಟ ಮಾಡಿದ್ದ ಮನೋ ವೈದ್ಯೆಯನ್ನು ಬಂಧಿಸಿದ್ದಾರೆ. ಈ ಪ್ರಕರಣ ಪತ್ತೆ ಮಾಡಿದ ಪೊಲೀಸರ ರೋಚಕ ಸ್ಟೋರಿಯ ವಿವರ ಇಲ್ಲಿದೆ.
ಮಗು ಕದ್ದ ಕಳ್ಳಿ ಮನೋ ವೈದ್ಯೆ
ಬೆಂಗಳೂರಿನ ಪ್ರತಿಷ್ಠಿತ ವಾಣಿವಿಲಾಸ ಆಸ್ಪತ್ರೆಯಲ್ಲಿ ವರ್ಷದ ಹಿಂದೆ ಮಗು ಕಳ್ಳತನವಾಗಿತ್ತು. ಕಳುವು ಮಾಡಿದ ವ್ಯಕ್ತಿಗಳ ಬಗ್ಗೆ ಸಣ್ಣ ಸುಳಿವು ಇರಲಿಲ್ಲ. ಸಿಸಿಟಿವಿ ಒಂದು ಸೆಕೆಂಡ್ ದೃಶ್ಯ ಆಧರಿಸಿ ರಚಿಸಿದ್ದ ರೇಖಾ ಚಿತ್ರ ಸುಳಿವು ಆಧರಿಸಿ ಒಂದು ವರ್ಷದ ನಂತರ ಮಗುವನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಆರೋಪಿಯನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ತನಿಖಾ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ಮಾಡಿದ್ದಾರೆ. ರಶ್ಮಿ ಬಂಧಿತ ಮನೋವೈದ್ಯೆ ಹೆಸರು. ಈಕೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಮನೋ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಳು. ಇದೀಗ ಮಗು ಕದ್ದ ಕೇಸಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾಳೆ.
ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣ
ವರ್ಷದ ಹಿಂದೆ ಮೇ. 29, 2020 ರಂದು ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗು ಕಳ್ಳತನ ಆಗಿತ್ತು. ಕೆ.ಆರ್. ಮಾರ್ಕೆಟ್ ಸಮೀಪ ಇರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗು ಕಳ್ಳತನ ಆದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ರೇಖಾಚಿತ್ರ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ರೇಖಾ ಚಿತ್ರದ ನೆರವಿನ ಜತೆಗೆ ಮಗು ಕದ್ದು ಆಟೋದಲ್ಲಿ ಹೋಗುವ ಅಪರಿಚಿತ ಮಹಿಳೆಯ ಎರಡು ಸೆಕೆಂಡ್ ವಿಡಿಯೋ ಸಿಕ್ಕಿತ್ತು. ಇದರ ಜಾಡು ಹಿಡಿದು ಮೊಬೈಲ್ ಕರೆಗಳನ್ನು ಅನ್ವೇಷಣೆ ಮಾಡಿ ಕೊನೆಗೂ ಮನೋವೈದ್ಯೆ ರಶ್ಮಿ ಎಂಬುವರನ್ನು ಬಂಧಿಸಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ತನಿಖಾ ಶೈಲಿಯನ್ನು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಪ್ರಶಂಸೆ ಮಾಡಿದ್ದಾರೆ.
ರಶ್ಮಿ ಮಗು ಕದ್ದ ಸ್ಟೋರಿ
ಬಾಡಿಗೆ ತಾಯಿ ರೂಪದಲ್ಲಿ ಮಗು ಕೊಡ್ತಿನಿ ಅಂತ ವೈದ್ಯೆ ರಶ್ಮಿ ಡೀಲ್ ಕುದುರಿಸಿದ್ದಳು. ಕೊಪ್ಪಳ ಮೂಲದ ದಂಪತಿಗೆ 15 ಲಕ್ಷಕ್ಕೆ ಮಗು ಕೊಡೋದಾಗಿ ದುಡ್ಡು ಪಡೆದಿದ್ದಳು. 2014ರಲ್ಲಿ ಹುಬ್ಬಳಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮನೋ ವೈದ್ಯೆ ಆಗಿ ಕೆಲಸ ಮಾಡ್ತಿದ್ದ ರಶ್ಮಿಗೆ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ಈ ದಂಪತಿಗೆ ಬುದ್ಧಿಮಾಂದ್ಯ ಮಗುವಿತ್ತು. ಆಗ ಇದೇ ವೈದ್ಯೆ ಬಳಿ ಚಿಕಿತ್ಸೆಗೆ ಕರೆತರುವಾಗ ಪರಿಚಯವಾಗಿ ಆತ್ಮೀಯರಾಗಿದ್ರು. ಆಗ ನಿಮಗೆ ನಿಮ್ಮ ಮಗುವೆ ಜನಿಸುತ್ತೆ. ಆದ್ರೆ ಬೇರೆಯವರಿಂದ ಅಂತ ಹೇಳಿ ಬಾಡಿಗೆ ತಾಯಿ ಪ್ಲಾನ್ ಕೊಟ್ಟಿದ್ಲು. 2019- ರಲ್ಲಿ ವೈದ್ಯೆ ಪೋನ್ ಮಾಡಿ ದಂಪತಿಯಿಂದ ಮುಂಗಡ ಹಣ ಪಡೆದಿದ್ದಳು. ಅದೇ ವೇಳೆ ದಂಪತಿ ಅಂಡಾಣು ಮತ್ತು ವೀರ್ಯಾಣು ಪಡೆದಿದ್ದಳು. ಬಳಿಕ ಯಾವ ಮಹಿಳೆಗೂ ಇದನ್ನು ಇಂಜೆಕ್ಟ್ ಮಾಡಿರ್ಲಿಲ್ಲ.ಆದ್ರೆ ದಂಪತಿಗೆ ನಿಮ್ಮ ಮಗು ಬೇರೆಯೊಬ್ಬರ ಹೊಟ್ಟೆಯಲ್ಲಿ ಬೆಳಿತಿದೆ ಅಂತ ಸಬೂಬು ಹೇಳಿ ನಂಬಿಸಿದ್ದಳು.
Recommended Video
ಮಗು ಕೊಟ್ಟು ಕಾಸು ಪಡೆದ್ಲು
ಕೆ.ಆರ್. ಮಾರ್ಕೆಟ್ ಬಳಿಯಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗು ಕದ್ದಿದ್ದಳು. ಮೇ. 29 , 2020 ರಂದು ಕದ್ದ ಮಗುವನ್ನು ಕೊಪ್ಪಳ ಮೂಲದ ದಂಪತಿಗೆ ನೀಡಿ, ಬಾಕಿ ಹಣ ಪಡೆದಿದ್ದಳು. .ಅಮಾಯಕ ಆ ದಂಪತಿ ತಮ್ಮದೆ ಮಗು ಅಂಥ ತುಂಬಾ ಜೋಪಾನವಾಗಿ ಸಾಕುತ್ತಿದ್ರು. ಲಕ್ಷಾಂತರ ಹಣ ಕೊಟ್ಟು ಗೊತ್ತಿಲ್ಲದೇ ಖರೀದಿಸಿದ್ದ ಮಗುವನ್ನು ತಮ್ಮದೇ ಎಂದು ಭಾವಿಸಿ ಸಾಕಿದ್ದ ದಂಪತಿ ಇದೀಗ ಮಗುವಿನ ಬಾಂಧವ್ಯದಿಂದ ದೂರವಾಗದೇ ಕಣ್ಣೀರು ಹಾಕುತ್ತಿದ್ದಾರೆ. ಮಗು ರಕ್ಷಿಸಿ ಆರೋಪಿಯನ್ನು ಬಂಧಿಸಿ ತಂದಿರುವ ಪೊಲೀಸರು, ಆಕೆಯ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಮುದ್ದಾದ ಕಂದಮ್ಮನಿಗಾಗಿ ಜನ್ಮಕೊಟ್ಟ ತಾಯಿ ಮಡಿಲಿಗೆ ಸೇರಿಸಿಕೊಳ್ಳಲು ಹಂಬಲಿಸುತ್ತಿದ್ದಾಳೆ. ನ್ಯಾಯಾಲಯದ ಮೂಲಕ ಕಾನೂನು ಪ್ರಕ್ರಿಯೆ ಗಳನ್ನು ಪೂರೈಸಿ ಆ ಬಳಿಕ ಡಿಎನ್ಎ ಪರೀಕ್ಷೆ ನಡೆಸಿದ ನಂತರ ಹೆತ್ತಮ್ಮನಿಗೆ ಮಗುವನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಪೊಲೀಸರು ಚಾಲನೆ ನೀಡಿದ್ದಾರೆ.