ಕೇಂದ್ರದಿಂದ ಕಾಂಗ್ರೆಸ್ ಮುಖಂಡರ ಫೋನ್ ಕದ್ದಾಲಿಕೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜನವರಿ 11: ರಾಜ್ಯದ ಕಾಂಗ್ರೆಸ್ ಮುಖಂಡರ ಕಾಲ್ಗಳನ್ನು ಕೇಂದ್ರ ಬಿಜೆಪಿ ಕದ್ದಾಲಿಸುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಲಲ್ ಬಹದ್ದೂರ್ ಶಾಸ್ತ್ರಿ ಪುಣ್ಯತಿಥಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ನೆರವಿನಿಂದ ಈ ಕದ್ದಾಲಿಕೆ ನಡೆಯುತ್ತಿದ್ದು, ಈ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ ಎಂದರು.
ಸಿಎಂ, ಸಚಿವರ ಫೋನ್ ಕದ್ದಾಲಿಕೆ ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ
ಚುನಾವಣೆ ಸಮೀಪವಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹೇಗಾದರೂ ಮಾಡಿ ಸೋಲಿಸುವ ಉದ್ದೇಶ ಹೊಂದಿರುವ ರಾಷ್ಟ್ರ ಬಿಜೆಪಿ ಮುಖಂಡರು ಕೇಂದ್ರದ ಸಹಾಯದೊಂದಿಗೆ ನಮ್ಮ ಹಲವು ಪ್ರಮುಖ ಮುಖಂಡರ ಪೋನ್ ಸಂಭಾಷಣೆಯನ್ನು ಕದ್ದಾಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಎಂ.ಬಿ.ಪಾಟೀಲ್ ಅವರು ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿದ್ದರು, ನಾನು ಕೂಡ ಈ ಹಿಂದೆಯೂ ಈ ಬಗ್ಗೆ ಹೇಳಿದ್ದೆ, ಈಗಲಾದರೂ ಯಾರಾದರೂ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಬೇಕು ಇಲ್ಲವಾದರೆ ಕಾಂಗ್ರೆಸ್ ಮುಖಂಡರ ಖಾಸಗೀತನಕ್ಕೆ ಧಕ್ಕೆ ಆಗುತ್ತದೆ ಎಂದಿದ್ದಾರೆ.
'ಆದಾಯ ತೆರಿಗೆ ಇಲಾಖೆಯಿಂದ ನನ್ನ ಕುಟುಂಬದ ಫೋನ್ ಕದ್ದಾಲಿಕೆ'
ಚುನಾವಣೆಯನ್ನು ಗೆಲ್ಲಲು, ಕಾಂಗ್ರೆಸ್ನ ತಂತ್ರಗಳನ್ನು ಅರಿಯಲು ಕೇಂದ್ರ ಈ ರೀತಿಯ ಕೀಳು ತಂತ್ರದ ಮೊರೆ ಹೋಗಿದೆ ಎಂದು ಅವರು ಆರೋಪಿಸಿದರು.