ಸಿಡಿ ಗರ್ಲ್ "ಲಿಖಿತ ದೂರು' ಸಲ್ಲಿಸಿದ ವಕೀಲ ಜಗದೀಶ್ ಹೇಳಿದ್ದೇನು ?
ಬೆಂಗಳೂರು, ಮಾರ್ಚ್ 26: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಸಿಡಿ ಸ್ಫೋಟ ಗೊಂಡ ಬಳಿಕ ಕಣ್ಮರೆಯಾಗಿರುವ ಸಂತ್ರಸ್ತೆ ಎನ್ನಲಾದ ಸಿಡಿ ಲೇಡಿ ಕೈ ಬರಹದ ದೂರನ್ನು ವಕೀಲ ಕೆ.ಎನ್ ಜಗದೀಶ್ ಕುಮಾರ್ ಅವರ ಮೂಲಕ ಆಯುಕ್ತರಿಗೆ ಸಲ್ಲಿಸಿದ್ದಾಳೆ. ಆಯುಕ್ತ ಕಮಲಪಂತ್ ದೂರನ್ನು ಸ್ವೀಕರಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಇನ್ನು ತಾನು ದೂರು ನೀಡುತ್ತಿರುವ ಬಗ್ಗೆ ವಕೀಲ ಕೆ.ಎನ್. ಜಗದೀಶ್ ನೀಡಿದ ಹೇಳಿಕೆ ವಿವರ ಇಲ್ಲಿದೆ ನೋಡಿ.
ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ವಿಡಿಯೋ ಹರಿದಾಡುತ್ತಿದ್ದವು. ಯುವತಿಯೊಬ್ಬಳು ತನಗೆ ಜೀವ ಭಯವಿದೆ, ಪ್ರಭಾವಿ ವ್ಯಕ್ತಿಯಿಂದ ನನಗೆ ಅನ್ಯಾಯವಾಗಿದೆ ಎಂದೆಲ್ಲಾ ಹೇಳಿಕೊಂಡಿದ್ದಳು. ಆಕೆಯ ಹೇಳಿಕೆ ನೋಡಿ ಕೆಲವು ವಕೀಲರು ಸೇರಿ, ನೀವು ಭಯ ಪಡುವ ಅಗತ್ಯವಿಲ್ಲ. ಕಾನೂನಿನಲ್ಲಿ ನೆರವು ಸಿಗುವುದಾದರೆ ನಾವು ಕೊಡಸಲು ಸಿದ್ಧವಿದ್ದೇವೆ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಮನವಿ ಮಾಡಿದ್ದೆವು. ಅದನ್ನು ನೋಡಿ ಸ್ವತಃ ಯುವತಿ ನಮಗೆ ಲಿಖಿತ ದೂರನ್ನು ನೀಡಿದ್ದಾಳೆ. ಆಕೆಗೆ ಪ್ರಾಣ ಭಯ ಇರುವ ಕಾರಣದಿಂದ ಆ ದೂರನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತಿದ್ದೇನೆ. ನಿರ್ಭಯ ಕಾನೂನು ಪ್ರಕಾರ ಈ ದೂರನ್ನು ಅಂಗೀಕರಿಸಿ ಪ್ರಬಾವಿ ವ್ಯಕ್ತಿ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಬೇಕು ಎಂದು ಹೇಳಿದರು.
ಇನ್ನು ಸಂತ್ರಸ್ತೆ ಎನ್ನಲಾದ ಯುವತಿ ಎಲ್ಲಿದ್ದಾಳೆ ? ಆಕೆಯೇ ಸ್ವತಃ ದೂರು ಕೊಡದೇ ಬೇರೊಬ್ಬರ ಮೂಲಕ ದೂರು ನೀಡುತ್ತಿದ್ದಾಳೆ. ಘಟನೆ ನಡೆದು ತಿಂಗಳುಗಳು ಆದರೂ ಆಕೆ ಸುಮ್ಮನಿರಲು ಕಾರಣವೇನು ಎಂಬ ಪ್ರಶ್ನೆಗಳಿಗೆ ವಕೀಲ ಜಗದೀಶ್ ಉತ್ತರಿಸಿದ್ದಾರೆ. ಸಂತ್ರಸ್ತೆಗೆ ಪ್ರಭಾವಿ ರಾಜಕಾರಣಿಯಿಂದ ಜೀವ ಬೆದರಿಕೆ ಇದೆ. ಹೀಗಾಗಿ ಆಕೆಯ ವಿಳಾಸ ಬಹಿರಂಗ ಪಡಿಸುವುದು ಸೂಕ್ತವಲ್ಲ. ದೂರು ದಾಖಲಾದ ಎರಡು ದಿನದಲ್ಲಿ ಆಕೆಯೇ ಪೊಲೀಸ್ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾಳೆ.
ನನಗೆ ಲಿಖಿತ ದೂರನ್ನು ಕಳುಹಿಸಿದ್ದು, ಅದನ್ನು ಆಯುಕ್ತರಿಗೆ ನೀಡಲು ಕೋರಿದ್ದಾರೆ. ಅದಕ್ಕಾಗಿ ನಾನು ದೂರು ಸಲ್ಲಿಸುತ್ತಿದ್ದೇನೆ. ಆಕೆಯೇ ದೂರು ಕೊಡಬೇಕು ಎಂಬುದು ಸಮಂಜಸವಲ್ಲ. ಈಗಾಗಲೇ ರಮೇಶ್ ಜಾರಕಿಹೊಳಿ ಆಪ್ತ ಮಾಜಿ ಶಾಸಕ ನಾಗರಾಜ್ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಎಫ್ಐಆರ್ ದಾಖಲಿಸಿಲ್ಲವೇ ? ಅದೇ ರೀತಿ ನಾನು ದೂರು ನೀಡುತ್ತಿದ್ದೇನೆ. ಸಂತ್ರಸ್ತ ಯುವತಿ ಸಾಮಾನ್ಯ ಪ್ರಜೆ, ಆಕೆ ಎಲ್ಲೂ ದೂರು ನೀಡದಂತೆ ಸಚಿವರು ಪ್ರಭಾವ ಬಳಿಸಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಆಕೆಯ ಸ್ಥಳ ಬಹಿರಂಗ ಪಡಿಸುವುದು ಸೂಕ್ತವಲ್ಲ ಎಂದು ಸಮರ್ಥಿಸಿಕೊಂಡರು.
ಇನ್ನು ಜಾರಕಿಹೊಳಿ ವಿರುದ್ಧ ದೂರು ದಾಖಲಾದರೆ ಎರಡು ಮೂರು ದಿನದಲ್ಲಿ ಆಕೆ ಬರುವ ಮಾಹಿತಿಯನ್ನು ವಕೀಲ ಜಗದೀಶ್ ಬಹಿರಂಗ ಪಡಿಸಿದ್ದಾರೆ. ಇನ್ನು ಆಕೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ವಕೀಲ ಜಗದೀಶ್, ಈಗಾಗಲೇ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ಈಕೆಯ ದೂರನ್ನು ಸ್ವೀಕರಿಸಿ ಎಫ್ಐಆರ್ ದಾಖಲಿಸಲಿ. ದೂರು ದಾಖಲಾಗಿ ಆಕೆಗೆ ಭದ್ರತೆಯ ಭರವಸೆ ಸಿಕ್ಕರೆ ಎರಡು ದಿನದಲ್ಲಿ ಬರಬಹುದು. ಇನ್ನು ಆಕೆ ಸತ್ಯವಾ ? ಜಾರಕಿಹೊಳಿ ಮಾತು ಸತ್ಯವಿದೆಯಾ ಎಂಬುದರ ಬಗ್ಗೆ ಎಸ್ಐಟಿ ತನಿಖೆಯಲ್ಲಿ ಗೊತ್ತಾಗಲಿದೆ. ವಕೀಲನಾಗಿ ನಾನು ಸಂತ್ರಸ್ತ ಹೆಣ್ಣು ಮಗಳ ದೂರನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದೇನೆ ಎಂದು ಹೇಳಿದರು.
Recommended Video
ವಕೀಲ ಕೆ.ಎನ್. ಜಗದೀಶ್ ಕುಮಾರ್ ಸಾಮಾಜಿಕ ಜಾಲ ತಾಣದಲ್ಲಿ ಇತ್ತೀಚೆಗೆ ಬಾರೀ ಫೇಮಸ್ ಆಗಿದ್ದಾರೆ. ಕಾನೂನಿನ ಜಾಗೃತಿ, ಘಟನೆ ಆಧಾರಿತ ಕಾನೂನು ಕುರಿತು ಅನ್ವೇಷಣೆ ಮಾಡಿ ವಿಡಿಯೋ ಗಳನ್ನು ಸಾಮಾಜಿಕ ಕಾಲ ತಾಣದಲ್ಲಿ ಬಿಡುವ ಮೂಲಕ ವಕೀಲ ಜಗದೀಶ್ ಸಾಮಾಜಿಕ ಜಾಲ ತಾಣದಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಸಂತ್ರಸ್ತೆ ಎನ್ನಲಾದ ಯುವತಿ ಪರ ದೂರು ನೀಡಿ ಸುದ್ದಿಕೇಂದ್ರಕ್ಕೆ ಬಂದಿದ್ದಾರೆ.