ಬೆಂಗಳೂರಲ್ಲಿ ರೌಡಿಗಳ ಬಳಿಕ ಬಡ್ಡಿಕುಳಗಳ ಹೆಡೆಮುರಿ ಕಟ್ಟಿದ ಸಿಸಿಬಿ
ಬೆಂಗಳೂರು, ಅಕ್ಟೋಬರ್ 10: ರಾಜಧಾನಿ ಬೆಂಗಳೂರಿನ ಅಂಡರ್ ವರ್ಲ್ಡ್ ಇತಿಹಾಸದಲ್ಲೇ ರೌಡಿಗಳ ವಿರುದ್ಧ ಬಹುದೊಡ್ಡ ದಾಳಿ ನಡೆಸಿದ್ದ ಬೆಂಗಳೂರು ಸಿಸಿಬಿ ಪೊಲೀಸರ ಕಣ್ಣು ಇದೀಗ ಅಂಡರ್ವರ್ಲ್ಡ್ ಗೆ ಹೇರಳವಾಗಿ ಹಣ ಹರಿದುಬರುವ ಬಡ್ಡಿ ದಂದೆಯ ಮೇಲೆ ಬಿದ್ದಿದೆ.
ಬುಧವಾರ ಬೆಳ್ಳಂಬೆಳಗ್ಗೆ ಹತ್ತಕ್ಕೂ ಹೆಚ್ಚು ಕುಖ್ಯಾತ ಬಡ್ಡಿಕುಳಗಳ 14 ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 1 ಕೋಟಿ ರೂ ನಗದು ಹಾಗೂ ಹಲವಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸಿಸಿಬಿಗೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮುಖ್ಯಸ್ಥರಾಗಿ ಬಂದ ಮೇಲೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲಿನ ಎರಡನೇ ಮಹತ್ವದ ದಾಳಿ ಇದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಹೆಚ್ಚು ಬಡ್ಡಿಕುಳಗಳ ವಿರುದ್ಧ ಅಕ್ರಮ ಲೇವಾದೇವಿ ವ್ಯವಹಾರ ಪ್ರಕರಣ ದಾಖಲಿಸಲಾಗಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ವಿಜಯನಗರ, ಕಾಮಾಕ್ಷಿಪಾಳ್ಯ, ಜಯನಗರದಲ್ಲಿ 14 ಕಡೆಗಳಲ್ಲಿ ಸಿಸಿಬಿ ದಾಳಿ ನಡೆಸಿದೆ, ದಂದೆಕೋರರಿಂದ 1 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಲ್ಲಿ ಬಡ್ಡಿ ದಂದೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಂದಾಗಿದ್ದು ಋಣಮುಕ್ತ ಕಾಯ್ದೆಯನ್ನು ಜಾರಿಗೆ ತರಲು ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಮೀಟರ್ ಬಡ್ಡಿ ಹಾವಳಿಯನ್ನು ತಡೆಯಲು ಮುಂದಾಗಿದೆ.












Click it and Unblock the Notifications