ದಿಢೀರ್ ಶ್ರೀಮಂತರಾಗಲು ರೈಸ್ ಪುಲ್ಲಿಂಗ್ ಬೆನ್ನೇರಿದವರ ಕಥೆ
ಬೆಂಗಳೂರು, ಸೆ. 10: ದಿಢೀರ್ ಶ್ರೀಮಂತರಾಗುವ ಆಸೆ ಹೊತ್ತವರನ್ನು ಕೈ ಬೀಸಿ ಕರೆಯುವುದೇ ರೈಸ್ ಪುಲ್ಲಿಂಗ್! ಇದೊಂದು ಅಪ್ಪಟ ಮೋಸ ಮಾಡುವ ದಂಧೆ. ಒಬ್ಬರಿಗೊಬ್ಬರು ಮೋಸ ಮಾಡುವ ಗೇಮ್. ಗೆದ್ದವನು ಕೋಟ್ಯಧಿಪತಿ. ಸೋತವನು ಬೀದಿಯಲ್ಲಿ ಬಿಕಾರಿ. ಹಣಕ್ಕಾಗಿ ಎಣೆಯುವ ರೈಸ್ ಪುಲ್ಲಿಂಗ್ ಹೆಸರಿನ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಆಂಧ್ರ ಮೂಲದ ರೈಸ್ ಪುಲ್ಲಿಂಗ್ ಗ್ಯಾಂಗ್ನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ರೈಸ್ ಪುಲ್ಲಿಂಗ್: ಪಂಚ ಲೋಹಕ್ಕೆ ಸಂಬಂಧಿಸಿದ ಒಂದು ವಸ್ತು ಇರುತ್ತದೆ. ಅದಕ್ಕೆ ಸಿಡಿಲು ಪಡೆದಾಗ ಒಂದು ರೀತಿಯ ಶಕ್ತಿ ತುಂಬುತ್ತದೆ. ಅಕ್ಕಿ ಕಾಳು ಪಕ್ಕದಲ್ಲಿ ಈ ವಸ್ತು ಇಟ್ಟರೆ ಸಾಕು ಮ್ಯಾಗ್ನೆಟ್ಗೆ ಮೊಳೆ ಚೂರು ಅಂಟಿಕೊಳ್ಳುವ ರೀತಿ ಈ ತಾಮ್ರದ ವಸ್ತುವಿಗೆ ಅಕ್ಕಿ ಕಾಳು ಅಂಟಿಕೊಳ್ಳುವಂತಿದ್ದರೆ ತುಂಬಾ ಶಕ್ತಿಶಾಲಿಯುತ ವಸ್ತು ಎಂದೇ ಭಾವಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಕ್ಕೆ ನೂರಾರು ಕೋಟಿ ಬೆಲೆ ಇದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತವೆ. ಇನ್ನು ಇಂತಹ ಶಕ್ತಿ ಶಾಲಿ ವಸ್ತುವನ್ನು ಮಾರಾಟ ಮಾಡುವ ಹೆಸರಿನಲ್ಲಿ ವಹಿವಾಟು ನಡೆಸಿ ಹಣ ಕೈ ಬದಲಾಗುವ ವೇಳೆ ಆಡುವ ಆಟವೇ ರೈಸ್ ಪುಲ್ಲಿಂಗ್.
ಕರ್ನಾಟಕದ ಗಡಿಭಾಗ ಹಾಗೂ ಆಂಧ್ರ ಪ್ರದೇಶದವರು ಈ ದಂಧೆಯಲ್ಲಿ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ. ಶಕ್ತಿ ತುಂಬಿದ ತಾಮ್ರದ ವಸ್ತು ಖರೀದಿ ಮಾಡುವ ಮಾತುಕತೆ ಹೆಸರಿನಲ್ಲಿ ಹಣ ಇರುವರಿಗೆ ಗಾಳ ಹಾಕಿ, ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ದುಬಾರಿ ಬೆಲೆಯ ತಾಮ್ರದ ವಸ್ತುವನ್ನು ಕೊಟ್ಟು ಹಣ ಪಡೆಯುವ ಸಂದರ್ಭದಲ್ಲಿ ನಕಲಿ ಪೊಲೀಸರ ದಾಳಿಯಾಗುತ್ತದೆ. ದುಡ್ಡಿಗಿಂತಲೂ ಜೀವ ಉಳಿಸಿಕೊಳ್ಳುವ ಆಸೆಗೆ ಬಿದ್ದವರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಇದನ್ನೇ ಸಾಮಾನ್ಯವಾಗಿ ರೈಸ್ ಪುಲ್ಲಿಂಗ್ ದಂಧೆ ಎಂದು ಕರೆಯುತ್ತಾರೆ. ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಸಾಕಷ್ಟು ಮಂದಿ ಈ ರೈಸ್ ಪುಲ್ಲಿಂಗ್ ಪ್ರಪಾತಕ್ಕೆ ಬಿದ್ದು ದಿವಾಳಿಯಾಗಿದ್ದಾರೆ.

ಅಬ್ದಲ್ ಖಾದರ್ ಹೊಸ ರೈಸ್ ಪುಲ್ಲಿಂಗ್ ದಂಧೆ:
ಆಂಧ್ರ ಪ್ರದೇಶದ ಗುಂತಕಲ್ ಮೂಲದ ಅಬ್ದುಲ್ ಖಾದರ್ ಮತ್ತು ಆತನ ಪತ್ನಿ ಜರೀನಾ ಅಹಮದ್ ಬಳಿ ಒಂದು ಸ್ಕೇಲ್ ಮಾದರಿಯ ವಸ್ತುವೊಂದು ಇದೆ. ಇದು ರೈಸ್ ಪುಲ್ಲಿಂಗ್ ಉಪಕರಣ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೂರಾರು ಕೋಟಿ ಬೆಲೆಯಿದೆ. ಇದನ್ನು ಅಲ್ಲಿಗೆ ಸಾಗಿಸಿ ಮಾರಾಟ ಮಾಡಲು ಒಂದಷ್ಟು ಹಣದ ಅಗತ್ಯವಿದೆ. ಯಾರು ಹೂಡಿಕೆ ಮಾಡುತ್ತಾರೋ ಅವರಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡುವುದಾಗಿ ಅಬ್ದುಲ್ ಖಾದರ್ ನಂಬಿಸಿ ನಾಲ್ವರು ಆಪ್ತ ಏಜೆಂಟರನ್ನು ಸೃಷ್ಟಿ ಮಾಡಿದ್ದ. ಮುಗ್ಧ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ಏಜೆಂಟರಾದ ರಾಘವೇಂದ್ರ ಪ್ರಸಾದ್, ನಯೀಂಮುಲ್ಲಾ, ಮುದಾಸೀರ್ ಮತ್ತು ಫರೀದಾ ಸಾರ್ವಜನಿಕರಿಗೆ ರೈಸ್ ಪುಲ್ಲಿಂಗ್ ಹೂಡಿಕೆ ಬಗ್ಗೆ ನಂಬಿಸಿ ಅಬ್ದುಲ್ ಖಾದರ್ ಬಳಿ ಕರೆದುಕೊಂಡು ಬರುತ್ತಿದ್ದರು.

Recommended Video
ಜನ ಬಂದು ಹಣ ಕೊಡುವುದನ್ನು ನೋಡಿದ್ದ ಅಬ್ದುಲ್ ಖಾದರ್, ಸ್ಯಾಂಕಿ ರಸ್ತೆಯಲ್ಲಿರುವ ತುಲಿಪ್ ಇನ್ನಲ್ಲಿ ಒಂದು ತಿಂಗಳಿನಿಂದ ರೂಮ್ ಮಾಡಿಕೊಂಡು ಸಾರ್ವಜನಿಕರಿಗೆ ಸ್ಕೇಲ್ ಮಾದರಿಯ ರೈಸ್ ಪುಲ್ಲಿಂಗ್ ವಸ್ತು ತೋರಿಸುತ್ತಿದ್ದ. ಹಣ ಹೂಡಿಕೆ ಮಾಡಿದರೆ ಲಾಭ ಸಮೇತ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ನೂರಾರು ಮಂದಿಯಿಂದ ಹಣ ಸಂಗ್ರಹಿಸಿ ಮೋಸ ಮಾಡಿದ್ದಾರೆ. ಡೈಮಂಡ್ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ, ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಜನರನ್ನು ಕರೆಸಿಕೊಂಡು ಹಣ ಪಡದು ಮೋಸ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಎಸಿಪಿ ಬಿ. ಜಗನ್ನಾಥ ರೈ ನೇತೃತ್ವದಲ್ಲಿ ತುಲಿಪ್ ಹೋಟೆಲ್ ಮೇಲೆ ದಾಳಿ ನಡೆಸಿ ಆರು ಮಂದಿ ರೈಸ್ ಪುಲ್ಲಿಂಗ್ ಗ್ಯಾಂಗ್ನ್ನು ಬಂಧಿಸಿದ್ದಾರೆ. ಬಂಧಿತರಿಂದ ಆರು ಲಕ್ಷ ರೂ. ಡಿಡಿ ರೈಸ್ ಪುಲ್ಲಿಂಗ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications