ಐದು ಲಕ್ಷಕ್ಕೆ ಬಾಲಕಿ ಜೀವ ವಾಪಸ್ ಬರುತ್ತಾ? ಸಿಎಂಗೆ ಶ್ರುತಿ ಪ್ರಶ್ನೆ
ಬೆಂಗಳೂರು, ಡಿಸೆಂಬರ್ 20 : ಕಳೆದು ಹೋದ ಜೀವ ಮತ್ತು ಮಾನ ದುಡ್ಡಿನಿಂದ ಬರುತ್ತಾ ಸಿದ್ದರಾಮಯ್ಯನವರೆ ಎಂದು ಬಿಜೆಪಿ ನಾಯಕಿ, ಚಿತ್ರನಟಿ ಶ್ರುತಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರುತಿ, ವಿಜಯಪುರದಲ್ಲಿ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ನಡೆದುಕೊಂಡಿರುವ ರೀತಿಯನ್ನು ಉಗ್ರವಾಗಿ ಖಂಡಿಸಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾದಿದೆ: ಸಿದ್ದರಾಮಯ್ಯ
ಬಾಲಕಿ ಅತ್ಯಾಚಾರ ಮತ್ತು ಕೊಲೆ ಆಗುತ್ತಿದ್ದಂತೆಯೇ 5 ಲಕ್ಷ ರೂ. ಪರಿಹಾರ ಘೋಷಿಸಿ ಜನರ ಅನುಕಂಪ ಗಿಟ್ಟಿಸಲು ಮುಂದಾಗಿದ್ದಾರೆ. ಆದರೆ ಅತ್ಯಾಚಾರಕ್ಕೊಳಗಾದ ಬಾಲಕಿಯ ಮಾನ ಮತ್ತು ಜೀವ ಮರಳಿ ಬರಲು ಸಾದ್ಯವೇ ಎಂದು ಪ್ರಶ್ನಿಸಿದರು.
ನೊಂದ ಕುಟುಂಬಕ್ಕೆ ಸಾಂತ್ವನ ಹೇಳದ ರಾಜ್ಯ ಸರ್ಕಾರ ಹಣವನ್ನು ಆಮಿಷದ ರೀತಿಯಲ್ಲಿ ಏಕಾಏಕಿ ಘೋಷಣೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ಮೊದಲು ಸಾಂತ್ವನದ ಪರಿಹಾರ ಬೇಕೇ ಹೊರತು ದುಡ್ಡಿನಿಂದ ಕೊಂಡುಕೊಳ್ಳುವ ಪ್ರಯತ್ನ ಅಲ್ಲ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ವಿದ್ಯಾರ್ಥಿನಿ ಮೇಲೆ ಆಗಿರುವ ಅಮಾನವೀಯ ಘಟನೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲೆಯಲ್ಲೇ ಇದ್ದರೂ ಪೊಲೀಸರು ನಿಷ್ಕ್ರಿಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ವಿಫಲರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಪೋಕ್ಸೊ ಕಾಯ್ದೆಯಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸಂದರ್ಭದಲ್ಲಿ ವಿಧಾನ ಪರಿಷತ್ ನ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಹಾಜರಿದ್ದರು.