ಪೆಟ್ರೋಲ್ ಕದಿಯಲು ಬಂದವ ಚಿನ್ನದ ಸರ ಕದ್ದು ಸಿಕ್ಕಿಬಿದ್ದ
ಬೆಂಗಳೂರು, ನ. 12: ಪೆಟ್ರೋಲ್ ಕದಿಯುವ ಕಳ್ಳನ ಖರಾಮತ್ತು ನೋಡಲು ಹೋದ ಅಜ್ಜಿಯ ಕೊರಳಿನಲ್ಲಿದ್ದ ಸರವನ್ನೇ ಎಗರಿಸಿ ಪರಾರಿಯಾಗಿದ್ದ ಕಳ್ಳ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಹದಿನೆಂಟು ವರ್ಷದ ಆರೋಪಿ ಗಜ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದು, ಆತನಿಂದ 200ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
ನ. 6 ರಂದು ರಾತ್ರಿ ಬಾಪೂಜಿನಗರದಲ್ಲಿ ಪೆಟ್ರೋಲ್ ಕದಿಯಲು ಗಜ ಬಂದಿದ್ದ. ಮನೆಯ ಬಳಿ ಸದ್ದು ಬರೋದನ್ನು ನೋಡಿ ಎಚ್ಚೆತ್ತಿದ್ದ ಲಿಂಗಮ್ಮ ಎಂಬ ವೃದ್ಧೆ, ಕಳ್ಳನ ಕೈಚಳಕ ನೋಡಲು ಹೊರ ಬಂದಿದ್ದರು. ವೃದ್ಧೆ ಬಂದಿದ್ದನ್ನು ನೋಡಿದ ಆರೋಪಿ ಗಜ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಆರೋಪಿಯ ಸರ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿ ಗಜ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈತ ಹನುಮಂತನಗರ, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.












Click it and Unblock the Notifications