Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
ಸಂಸತ್ನಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಗ್ಗೆ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ, 01: 2023ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ನಲ್ಲಿ ಈ ಬಾರಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ನೇರ ತೆರಿಗೆಯನ್ನು ಕಡಿಮೆಗೊಳಿಸಿ, ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿದೆ. ಈ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಹಾಲು ಮತ್ತು ಪರೋಕ್ಷ ತೆರಿಗೆ ಪಾವತಿಸುವ ಜನ ಸಾಮಾನ್ಯರಿಗೆ ವಿಷ ನೀಡುವ ಕೆಲಸ ಮಾಡಿದೆ ಎಂದು ಡಾ. ಹೆಚ್.ಸಿ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೇವಲ ಚುನಾವಣೆಗಾಗಿ ಬದುಕಿರುವ ಕಾರ್ಪೊರೇಟ್ ಪ್ರೇಮಿ ಸರ್ಕಾರವು ಜನ ಸಾಮಾನ್ಯರಿಗೆ ನೆರವಾಗಲಿದೆಯೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ ಪಾಲನ್ನು ಎಷ್ಟು ಕೇಳಿದರೂ ಕೂಡ ಕೊಡುತ್ತಿಲ್ಲ. ಆದರೆ ಈಗ ಚುನಾವಣೆ ಹತ್ತಿರ ಬಂದಿರುವ ಕಾರಣದಿಂದ ಕೇಂದ್ರ ಸರ್ಕಾರಕ್ಕೆ ಅನುದಾನ ಘೋಷಣೆ ಮಾಡಿದೆ. ಇವರಿಗೆ ಚುನಾವಣಾ ಉದ್ದೇಶ ಬಿಟ್ಟರೆ ಇನ್ಯಾವುದೇ ಜನಪರ ಉದ್ದೇಶ ಇರುವಂತೆ ಕಾಣುತ್ತಿಲ್ಲ ಎಂದು ಪತ್ರಿಕೆ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಡಿಕಾರಿದ ಹೆಚ್.ಸಿ ಮಹಾದೇವಪ್ಪ
ನೋಟ್ ಬ್ಯಾನ್ ಆದ ನಂತರ ಜನ ಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಹೀಗೆ ಜನಸಾಮಾನ್ಯರ ಶಕ್ತಿ ಕುಸಿದಿರುವ ಸಂದರ್ಭದಲ್ಲಿ ಆದಾಯ ತೆರಿಗೆ ಮಿತಿಯನ್ನು 5 ರಿಂದ 7 ಲಕ್ಷಕ್ಕೆ ಏರಿಸಿದ್ದಾರೆ. ಇದು ಹೊಟ್ಟೆಗೆ ಹಿಟ್ಟಿಲ್ಲದೇ ಇದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ. ಈ ಹಿಂದೆ ಬಜೆಟ್ನಲ್ಲಿ ಹೇಳಿದ ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸದೇ ಜನ ಸಾಮಾನ್ಯರನ್ನು ವಂಚಿಸಿದೆ. ಹೀಗಿರುವಾಗ ಇವರದ್ಧು ಬರೀ ಘೋಷಣೆಗಳಷ್ಟೇ ಎಂಬುದು ನನ್ನ ಅನಿಸಿಕೆಯಾಗಿದೆ. ಗ್ಯಾಸ್ ಸಬ್ಸಿಡಿ ನೀಡದೇ ಇರುವುದು ಹಾಗೂ ಪಿಂಚಣಿ ವಿತರಣೆಯಲ್ಲಿ ಆಗಿರುವ ವಂಚನೆಯೇ ಇದಕ್ಕೆ ಉದಾಹರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರೀಕ್ಷೆಗಳೆಲ್ಲವೂ ಸುಳ್ಳಾಗಿವೆ
ಈ ಬಾರಿ ಬಜೆಟ್ನಲ್ಲಿ ಅತ್ಯಧಿಕವಾಗಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇವರ ಬಜೆಟ್ನಿಂದ ಆ ನಿರೀಕ್ಷೆ ಇದೀಗ ಸುಳ್ಳಾಗಿದೆ. ದೇಶವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 105ನೇ ಸ್ಥಾನಕ್ಕೆ ಕುಸಿದಿದೆ. ಈಗಿದ್ದರೂ ಕೂಡ ಸದಾ ಉದ್ಯಮಿಗಳ ಪರವಾಗಿ ಚಿಂತಿಸುವ ಸರ್ಕಾರವು ಕೇವಲ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಗಮನ ಹರಿಸಿದೆ. ಇದನ್ನು ಗಮಿನಿದರೆ ಇವರು ಮತ್ಯಾವ ಉದ್ಯಮಿಯ ಏಳಿಗೆಗಾಗಿ ದುಡಿಯುತ್ತಿದ್ದಾರೆ ಎಂಬ ಅನುಮಾನ ಕಾಡುತ್ತದೆ ಎಂದು ಕಿಡಿಕಾರಿದರು.

ಸುಳ್ಳು ಭರವಸೆಗಳ ಮುಂದುವರಿಕೆ
ಈಗಾಗಲೇ 40% ಕಮಿಷನ್ ರಸ್ತೆಗಳನ್ನು ನೋಡಿ ಎಲ್ಲರಿಗೂ ಸಾಕಾಗಿದೆ. ಆದರೂ ಕೂಡ ನಗರಾಭಿವೃದ್ಧಿಗೆ 10 ಸಾವಿರ ಕೋಟಿ ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಅಂದಹಾಗೆ ಇಡೀ ದೇಶದ ನಗರಗಳ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂಪಾಯಿಗಳು ಸಾಕಾಗುತ್ತದೆಯೇ?
ಇನ್ನು 2047ಕ್ಕೆ ಮ್ಯಾನ್ ಹೋಲ್ ಮುಕ್ತ ಚರಂಡಿ ವ್ಯವಸ್ಥೆ ಹಾಗೂ 2070ಕ್ಕೆ ಕಾರ್ಬನ್ ಮುಕ್ತ ಭಾರತ ಎಂದು ಇವರು ಹೇಳುತ್ತಿದ್ದಾರೆ. ಇವೆರೆಡೂ ಸಹ ಇವರ ಸುಳ್ಳು ಭರವಸೆಗಳ ಮುಂದುವರಿಕೆಯಾಗಿದೆ ಎಂದು ಆರೋಪ ಮಾಡಿದರು.

ಭರವಸೆಗಳೆಲ್ಲವೂ ಕೊಳೆಯುತ್ತಿವೆ
ಏಕೆಂದರೆ ನಮಾಮಿ ಗಂಗಾ ಎಂದು ಈ ಹಿಂದೆ ಇವರು ಘೋಷಿಸಿದ್ದರು. ಆದರೆ ಅದು ಸಮರ್ಪಕವಾಗಿ ಜಾರಿಯಾಗದೇ ಬರೀ ಘೋಷಣೆಯಾಗಿಯೇ ಉಳಿದಿದೆ. ಈ ಹಿಂದಿನ ಬಜೆಟ್ಗಳಲ್ಲಿ ಉದ್ಯೋಗ ಸೃಷ್ಟಿ ಹಾಗೂ ಇನ್ನಿತರೆ ಸಂಗತಿಗಳ ಕುರಿತಂತೆ ನೀಡಿದ ಭರವಸೆಗಳೆಲ್ಲವೂ ಕಸದ ಬುಟ್ಟಿಯಲ್ಲಿ ಕೊಳೆಯುತ್ತಿವೆ. ಈಗಿರುವಾಗ ಕೇವಲ ಚುನಾವಣೆಗಾಗಿ ಬದುಕಿರುವ ಕಾರ್ಪೊರೇಟ್ ಪ್ರೇಮಿ ಸರ್ಕಾರವು ಜನ ಸಾಮಾನ್ಯರಿಗೆ ನೆರವಾಗುತ್ತದೆ ಎಂಬುದು ದೊಡ್ಡ ಸುಳ್ಳಾಗಿದೆ. ಹಾಗೆಯೇ ಬಿಜೆಪಿಗರ ಬಜೆಟ್ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಇರುವ ಘೋಷಣೆ ಅಷ್ಟೆಯೇ ಹೊರತು, ಅವು ಎಂದಿಗೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದರು.












Click it and Unblock the Notifications