BMTC: ಶಿವನ ಭಕ್ತರಿಗೆ ಬಿಎಂಟಿಸಿಯಿಂದ ಗುಡ್ನ್ಯೂಸ್: ಈಶಾ ಟೂರ್ ಪ್ಯಾಕೇಜ್ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 05: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರ್ಮಾಣವಾದ ಈಶಾ ಫೌಂಡೇಶನ್ನ ಅತೀ ದೊಡ್ಡ ಶಿವನ ವಿಗ್ರಹದ ಸ್ಥಳ ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಬೆಟ್ಟಗಳ ಮಧ್ಯೆ ಎದ್ದು ಕಾಣುವ ಬೃಹತ್ ಶಿವನ ಮೂರ್ತಿ ಕಾಣಲು ಚಿಕ್ಕಬಳ್ಳಾಪುರ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಯಿಂದಲೂ ಸಾವಿರಾರು ಜನ ಆಗಮಿಸುತ್ತಾರೆ.
ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ತೆರಳಲು ಸಿಲಿಕಾನ್ ಸಿಟಿ ಜನರಿಗೆ ಈಶಾ ಫೌಂಡೇಶನ್ ಅತ್ಯುತ್ತಮ ಆಯ್ಕೆಯಾಗಿದೆ. ಹೀಗಾಗಿ ಪ್ರತಿ ವಾರಾಂತ್ಯದ ದಿನಗಳಲ್ಲಿ ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಇನ್ನು ಶಿವರಾತ್ರಿ ಹಾಗೂ ಬೇಸಿಗೆ ರಜಾ ಕೂಡ ಸಮೀಪಿಸುತ್ತಿದ್ದು, ಈಶಾ ಫೌಂಡೇಶನ್ಗೆ ತೆರಳುವವರ ಸಂಖ್ಯೆ ದುಪ್ಪಟ್ಟಾಗಲಿದೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈಶಾ ಫೌಂಡೇಶನ್ಗೆ ವಿಶೇಷ ಟೂರ್ ಪ್ಯಾಕೆಜ್ ನೀಡಲು ಮುಂದಾಗಿದೆ. ನಾಳೆಯಿಂದ (ಮಾರ್ಚ್ 06) ಬುಧವಾರದಿಂದ ಬಿಎಂಟಿಸಿ ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಶಾ ಟೂರ್ ಪ್ಯಾಕೇಜ್ ಅಡಿಯಲ್ಲಿ ಓರ್ವ ಪ್ರಯಾಣಿಕ ಭೋಗ ನಂದೀಶ್ವರ ದೇವಸ್ಥಾನ (ಕಣಿವೆ ಬಸವಣ್ಣ ದೇವಸ್ಥಾನ), ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ , ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಈಶಾ ಫೌಂಡೇಶನ್ ಸೇರಿ ಒಟ್ಟು 4 ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

ಈಶಾ ಫೌಂಡೇಶನ್ ಹೆಸರಿನ ಟೂರ್ ಪ್ಯಾಕೇಜ್ ಒಬ್ಬ ಪ್ರಯಾಣಿಕನಿಗೆ 500 ರೂಪಾಯಿ ದರ ನಿಗದಿ ಮಾಡಲಾಗಿದೆ. 500 ರೂಪಾಯಿಯಲ್ಲಿ ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್ ಜೊತೆಗೆ ಸ್ಥಳೀಯ ಕೆಲವು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಈ ಟೂರ್ ಪ್ಯಾಕೇಜ್ನ ಬಸ್ ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ( ಮೆಜೆಸ್ಟಿಕ್)ನಿಂದ ಹೊರಡಲಿದ್ದು, ಈಶಾ ಟೂರ್ ಬಳಿಕ ರಾತ್ರಿ 9.30ಕ್ಕೆ ಮತ್ತೆ ವಾಪಸ್ ಆಗಲಿದೆ.
ನಾಳೆಯಿಂದ (ಮಾರ್ಚ್ 06) ಬುಧವಾರದಿಂದ ಎಲ್ಲ ಸಾರ್ವತ್ರಿಕ ರಜಾ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಶೇಷ ಟೂರ್ ಪ್ಯಾಕೇಜ್ನ ಹೆಚ್ಚಿನ ಮಾಹಿತಿಗಾಗಿ ಸಮೀಪದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಹಾಗೂ ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಬುಕ್ ಮಾಡಬಹುದಾಗಿದೆ.












Click it and Unblock the Notifications