ಸಚಿವರ ಪುತ್ರನ ಬ್ಲಾಕ್ಮೇಲ್: ನನ್ನ ಪುತ್ರಿಯ ಕೈವಾಡ ಇಲ್ಲ ಎಂದ ಶಾಸಕ
ಬೆಂಗಳೂರು, ಜ. 10: ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಪುತ್ರ ನಿಶಾಂತ್ಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಇನ್ನು ಎಸ್.ಟಿ. ಸೋಮಶೇಖರ್ ಅವರ ಆಪ್ತರ ಮೊಬೈಲ್ಗೆ ನಿಶಾಂತ್ ಅಶ್ಲೀಲ ವಿಡಿಯೋ ಕಳುಹಿಸಿದ ಮೊಬೈಲ್ ನಂಬರ್ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಅವರ ಪುತ್ರ ರಾಹುಲ್ ಭಟ್ನ ಮೊಬೈಲ್ ನಲ್ಲಿ ಹಲವು ವಿಡಿಯೋ ತುಣುಕು ಸಿಕ್ಕಿವೆ. ಹೀಗಾಗಿ ಮೊಬೈಲ್ ನಲ್ಲಿ ಡಿಲೀಟ್ ಆಗಿರಬಹುದಾದಂತಹ ವಿಡಿಯೋ ಪಡೆಯಲು ಎಫ್ಎಸ್ಎಲ್ಗೆ ರವಾನಿಸಲಾಗಿದೆ.
ಒಟಿಪಿ ಪಡೆದು ವಿಡಿಯೋ ರವಾನೆ:
ಇಂಡಿ ಶಾಸಕ ಯಶವಂತರಾಯನಗೌಡ ಪಾಟೀಲ್ ಅವರ ಪುತ್ರಿಯ ಮೊಬೈಲ್ ನಂಬರ್ ಬಳಿಸಿ ಆಕೆಯ ಸ್ನೇಹಿತ ಒಟಿಪಿ ಪಡೆದಿದ್ದಾರೆ. ಆ ಓಟಿಪಿ ಮೂಲಕ ವಾಟ್ಸಪ್ ಬ್ಯುಸಿನೆಸ್ ಖಾತೆ ತೆಗೆದಿದ್ದು, ಅದರ ಮೂಲಕ ನಿಶಾಂತ್ ಮಾಡಲ್ ಜತೆ ಇರುವ ವಿಡಿಯೋ ಸಚಿವ ಸೋಮಶೇಖರ್ ಅವರ ಆಪ್ತ ಕಾರ್ಯದರ್ಶಿಗೆ ರವಾನಿಸಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಯಶವಂತರಾಯನಗೌಡ ಪಾಟೀಲ್ ಅವರ ಪುತ್ರಿಯನ್ನು ಈಗಾಗಲೇ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು, ಬ್ಯುಜಿನೆಸ್ ಗೆ ನೆರವಾಗಲಿದೆ ಎಂಬ ಕಾರಣ ಕೊಟ್ಟು ಆಕೆಯ ಸ್ನೇಹಿತ ಒಟಿಪಿ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಕೇಶ್ ಅಣ್ಣಪ್ಪನನ್ನು ಸಹ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಾಸಕರ ಪುತ್ರಿಯ ಮೊಬೈಲ್ ನಂಬರ್ ಒಟಿಪಿ ನೆರವಿನಿಂದ ವಿಡಿಯೋ ಕಳಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಯಶವಂತರಾಯನಗೌಡ ಪಾಟೀಲ್ ಸುದ್ದಿಗೋಷ್ಠಿ:
ನನ್ನ ಮಗಳು ಯಾವುದೇ ರೀತಿಯ ತಪ್ಪು ಎಸಗಲ್ಲ. ರಾಜಕೀಯವಾಗಿ ನನ್ನ ಕುಟುಂಬವನ್ನು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವ ಅನುಮಾನ ಮೂಡಿದೆ. ಈಗಾಗಿ ಈ ಕುರಿತು ತನಿಖೆ ನಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ನಾನು ಮುಖ್ಯಮಂತ್ರಿಗಳನ್ನು ಕೋರಿದ್ದೇನೆ. ಈ ಬಗ್ಗೆ ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇಬ್ಬರೂ ಸೇರಿಯೇ ತನಿಖೆ ನಡೆಸುವಂತೆ ಕೇಳಿದ್ದೇವೆ. ಮಕ್ಕಳನ್ನು ಬಳಸಿಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಗನ್ಮ್ಯಾನ್ ವಿಚಾರಣೆ ಮುಕ್ತಾಯ:
ನಿಶಾಂತ್ ಭದ್ರತೆಗೆ ನಿಯೋಜಿಸಿದ್ದ ಗನ್ಮ್ಯಾನ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ ಗನ್ ಮ್ಯಾನ್ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ವಿಚಾರಣೆ ನಡೆಸಿದ ವೇಳೆ ಯಾವುದೇ ರೀತಿಯಲ್ಲಿ ಶಾಮೀಲು ಆಗಿರುವುದು ಕಂಡು ಬಂದಿಲ್ಲ. ಹೀಗಾಗಿ ಅತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ತನಿಖೆ ಚುರುಕು:
ನಿಶಾಂತ್ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ನಿಜವಾಗಿಯೂ ವಿಡಿಯೋ ಮುಂದಿಟ್ಟುಕೊಂಡು ಬ್ಲಾಕ್ ಮಾಡಿದ್ದಾರಾ ? ಇಲ್ಲವೇ ಮಾಡಲ್ ಜತೆ ಇರುವ ಪೋಟೋಗಳನ್ನು ಎಡಿಟ್ ಮಾಡಿ ವಿಡಿಯೋ ತಯಾರಿಸಿ ಬ್ಲಾಕ್ ಮೇಲ್ಗೆ ಯತ್ನಿಸಿದರಾ? ಇದರ ಹಿಂದೆ ಯಾರಾದರೂ ಇದ್ದಾರಾ? ಎಂಬುದರ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಖ್ಯಾತ ಜ್ಯೋತಿಷಿಯ ಪುತ್ರ ರಾಹುಲ್ ಭಟ್ನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.












Click it and Unblock the Notifications