ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳಲು ಮುಜುಗರವಿಲ್ಲ : ಬಿ.ಎಲ್.ಸಂತೋಷ್
Recommended Video

ಬೆಂಗಳೂರು, ಮಾರ್ಚ್ 29 : 'ಕುಟುಂಬ ರಾಜಕಾರಣ ತಪ್ಪಲ್ಲ. ಆದರೆ, ಅದರ ಹಿಂದೆ ಒಂದಷ್ಟು ಪರಿಶ್ರಮ ಇರಬೇಕು' ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ಗುರುವಾರ ಬೆಂಗಳೂರಿನ ಜಯನಗರದಲ್ಲಿ 'ವಿಶ್ವ ಗುರುವಿನತ್ತ ಭಾರತ - ಮೋದಿ ಮತ್ತೊಮ್ಮೆ' ಎಂಬ ಶೀರ್ಷಿಕೆಯಡಿ ಬಿ.ಎಲ್.ಸಂತೋಷ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್ ಅವರು, 'ನರೇಂದ್ರ ಮೋದಿ ಅವರು ಮುಂದೆ ಮತ ಕೇಳಲು ಹೋಗುವಾಗ ತಲೆ ತಗ್ಗಿಸದಂತೆ ಮಾಡುವೆ ಎಂದು ಮಾತು ಕೊಟ್ಟಿದ್ದರು. 5 ವರ್ಷದ ಆಡಳಿತದ ನಂತರ ನರೇಂದ್ರ ಮೋದಿ, ಬಿಜೆಪಿ, ಕಮಲದ ಗುರುತಿನ ಮೇಲೆ ಮತ ಕೇಳಲು ನನಗೆ ಯಾವುದೇ ಮುಜುಗರವಿಲ್ಲ' ಎಂದರು.
'ಹಿಂದೆ ಪಂಚಾಯಿತಿಯಿಂದ ಲೋಕಸಭೆ ತನಕ ಚುನಾವಣಾ ವಿಚಾರಗಳು ಜಾತಿ ಮತ್ತು ಹಣ ಆಗಿದ್ದವು. ಆದರೆ, ಇಂದಿನ ದಿನಗಳಲ್ಲಿ ಚುನಾವಣಾ ವಿಚಾರಗಳು ಬದಲಾಗಿವೆ. ಆದರೆ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ತಕ್ಷಣ ಅಭ್ಯರ್ಥಿಗಳ ಹೆಸರಿನ ಮುಂದೆ ಜಾತಿಯನ್ನು ಹಾಕುವುದು ಇನ್ನೂ ಬದಲಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಚಿತ್ರಣ ಬದಲಾಗಿದೆ
'ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಚಿತ್ರಣವನ್ನು ಬದಲಾವಣೆ ಮಾಡಿದ್ದಾರೆ. ರಾಜಕೀಯ ಎಂದರೆ ದೇಶದ ಒಬ್ಬ ಮೂರ್ಖನ ಕಡೆಯ ಆವಾಸ ಸ್ಥಾನ ಎಂಬ ಆಲೋಚನೆ ನಮ್ಮ ದೇಶದಲ್ಲಿತ್ತು. ಅದನ್ನು ಬದಲಾವಣೆ ಮಾಡಿ ನಾವು ಕೂಡಾ ರಾಜಕೀಯಕ್ಕೆ ಸ್ವಲ್ಪ ಕೆಲಸ ಮಾಡೋಣ ಎನ್ನುವಂತೆ ಬದಲಾವಣೆ ಮಾಡಿದ್ದಾರೆ. ಆದ್ದರಿಂದ ನೂರಾರು ಜನರು ಇಂದು ದೇಶಕ್ಕಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ' ಎಂದು ಬಿ.ಎಲ್.ಸಂತೋಷ್ ಹೇಳಿದರು.

ಚುನಾವಣಾ ಚೌಕಟ್ಟು ಬದಲಾಗಿದೆ
'ಗ್ರಾಮ ಪಂಚಾಯಿತಿಯಿಂದ ಲೋಕಸಭೆ ತನಕ ಚುನಾವಣೆ ಎಂದರೆ ಹಣ, ಜಾತಿ ಎಂಬ ವಾತಾವರಣವಿತ್ತು. ಇಂದು ಒಂದು ಚುನಾವಣೆ ಜಾತಿಯ ಚೌಕಟ್ಟನ್ನು ಮೀರಿ ದೇಶದ ವ್ಯಾಪ್ತಿಗೆ ಬಂದಿದೆ. ಅಭ್ಯರ್ಥಿ ಎಷ್ಟು ಹಣ ಖರ್ಚು ಮಾಡಬಹುದು?, ಕಾರ್ಯಕರ್ತರಿಗೆ ಎಷ್ಟು ಕೊಡಬಹುದು? ಎನ್ನುವುದನ್ನು ಮೀರಿ ವಿದೇಶಕ್ಕೆ ಓಡಿ ಹೋಗಿರುವವರನ್ನು ಕರೆದುಕೊಂಡು ಬರುವುದು ಹೇಗೆ?. ಇಲ್ಲಿ ತಿನ್ನುತ್ತಿರುವವರನ್ನು ಹಿಡಿಯುವುದು ಹೇಗೆ? ಎಂಬ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ' ಎಂದು ಸಂತೋಷ್ ಹೇಳಿದರು.

ನಿನ್ನೆಯ ಗ್ರೂಪ್ ಫೋಟೋ ನೋಡಿ
'ಐದು ವರ್ಷಗಳ ಹಿಂದೆ ನರಂದ್ರ ಮೋದಿ ಅವರು ದೇಶದಲ್ಲಿ ಕಪ್ಪು ಹಣ ಇಟ್ಟು ಕೊಂಡವರನ್ನು, ಮೋಸ ಮಾಡಿದವರನ್ನು ಬೀದಿಗೆ ತಂದು ನಿಲ್ಲಿಸುವೆ ಎಂದು ಹೇಳಿದ್ದರು. ಆದರೆ, ಅದು ಚುನಾವಣೆ ಘೋಷಣೆ ಮಾತ್ರ ಆಗಲಿಲ್ಲ. ಆದರೆ, ಗುರುವಾರ ರಾಜ್ಯದ ಪ್ರಮುಖ ರಾಜಕಾರಣಿಗಳು, ಮುಖ್ಯಮಂತ್ರಿಗಳಿಂದ ಪಕ್ಷದ ಅಧ್ಯಕ್ಷರ ತನಕ ಎಲ್ಲರೂ ಬೀದಿಯಲ್ಲಿ ನಿಂತು ಪ್ರತಿಭಟಿಸುವ ಗ್ರೂಪ್ ಫೋಟೋ ನೋಡಿದಾಗ ಮೋದಿ ಹೇಳಿದ ವಾಕ್ಯ ನೆನಪಾಯಿತು' ಎಂದರು.

ಹಲವರು ದೇಶದ ಕಾರ್ಯದಲ್ಲಿ ತೊಡಗಿದ್ದಾರೆ
'ಇಂದು ನಾವು ಕಾರ್ಯಕರ್ತರು ಪ್ರಚಾರಕ್ಕೆಂದು ರಸ್ತೆಗೆ ಇಳಿದರೆ ಎದುರು ಇನ್ನೊಂದು ಗುಂಪು ಕಾಣುತ್ತದೆ. ಅದು ಕಾಂಗ್ರೆಸ್ ಅಥವ ಜೆಡಿಎಸ್ ಎಂದು ಕೊಳ್ಳುವಂತಿಲ್ಲ. ಅವರು ಟೀಮ್ ಮೋದಿ, ಸಮರ್ಥ ಭಾರತ, ಶಕ್ತ ಭಾರತ, ನಮೋ ಭಾರತ ಎಂಬ ಟೀ ಶರ್ಟ್ ತೊಟ್ಟವರು. ಇಂದು ಒಂದು ದೇಶಕ್ಕಾಗಿ ಇವರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರನ್ನು ನಿಮಗೆ ರಾಜಕೀಯದಲ್ಲಿ ಏನಾದರೂ ಬೇಕಾ? ಟಿಕೆಟ್ ಬೇಕಾ ಎಂದರೆ ಇಲ್ಲ ಎಂಬ ಉತ್ತರ ಬರುತ್ತದೆ' ಎಂದರು.

ಯಾವುದೇ ಮುಜುಗರವಿಲ್ಲ
'ಚುನಾವಣೆಯಲ್ಲಿ ಕೆಲಸ ಮಾಡುವಾಗ ನಾವು ಅದೇ ಅಭ್ಯರ್ಥಿ ಪರವಾಗಿ 2ನೇ ಬಾರಿಗೆ ಮತ ಕೇಳಲು ಹೋಗುವಾಗ ನಾವು ಸ್ಪಲ್ಪ ತಲೆ ತಗ್ಗಿಸಿಕೊಂಡು ಓಡಾಡಲು ಆರಂಭಿಸುತ್ತೇವೆ. ಅವರ ವರ್ತನೆ, ಅವರ ಮನೆಯವರ ವರ್ತನೆ ಕಾರಣಕ್ಕೆ ಹೀಗಾಗುತ್ತದೆ. ಕರಪತ್ರವನ್ನು ಕಿಟಕಿಯಲ್ಲಿ ಹಾಕಿ ಜನರ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದೇ ಬರುತ್ತೇವೆ. ಆದರೆ, ಮೋದಿ ಎಂತಹ ಧೈರ್ಯ ತಂದು ಕೊಟ್ಟಿದ್ದಾರೆ ಎಂದರೆ ಯಾಕೆಂದರೆ ಯಾವುದೇ ಪ್ರಶ್ನೆಗೆ ಉತ್ತರ ಕೊಡಬಹುದಾದ ನೈತಿಕ ಧೈರ್ಯವನ್ನು ಅವರು ಎಲ್ಲಾ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ' ಎಂದು ಸಂತೋಷ್ ಹೇಳಿದರು.

ಕೊಟ್ಟ ಮಾತು ನಡೆಸಿಕೊಟ್ಟ ಮೋದಿ
'ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ನರೇಂದ್ರ ಮೋದಿ ಅವರು ನಾನು ಏನು ಕೆಲಸ ಮಾಡುತ್ತೆನೋ ಗೊತ್ತಿಲ್ಲ. ಆದರೆ, ಮೊತ್ತಮ್ಮ ನಮ್ಮ ಕಾರ್ಯಕರ್ತರು ಜನರ ಬಳಿ ನನ್ನ ಹೆಸರಿನಲ್ಲಿ, ನನ್ನ ಪಕ್ಷದ ಹೆಸರಿನಲ್ಲಿ ಮತ ಕೇಳಲು ಹೋಗುವಾಗ ತಲೆ ತಗ್ಗಿಸುವಂತೆ, ಸಂಕೋಚದಿಂದ ಮತ ಕೇಳುವಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಇಂದು ಬಿಜೆಪಿ, ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳಲು ಯಾವುದೇ ಮುಜುಗರವಿಲ್ಲ' ಎಂದು ಸಂತೋಷ್ ಹೇಳಿದರು.

ಫೈಲ್ಗಳಿಗೆ ಸಹಿ ಹಾಕಲು ಪೆನ್ ಮಾತ್ರ ಸಾಲದು
'ನರೇಂದ್ರ ಮೋದಿ ಅವರು ಏನೇ ಮಾಡಲಿ ಇದನ್ನು ನಮ್ಮ ಕಾಲದಲ್ಲಿ ಆರಂಭಿಸಿದ್ದು ಎಂದು ಹೇಳುತ್ತಾರೆ. ಅದು ಸರಿ, ನಿಮ್ಮ ಕಾಲದಲ್ಲಿ ಸೈನ್ ಆಗಿದ್ದು ಸರಿ. ಆದರೆ ಫೈಲ್ ಟೇಬಲ್ ಬಿಟ್ಟು ದಾಟಲಿಲ್ಲ. ಆರಂಭಿಸಿದ್ದನ್ನು ಜಾರಿಗೆ ತರುವ ಇಚ್ಛಾಶಕ್ತಿ ಮತ್ತು ಹಣಕಾಸಿನ ಸ್ಥಿತಿ ಇರಲಿಲ್ಲ. ಕೆಲವು ಫೈಲ್ ಗಳಿಗೆ ಸಹಿ ಹಾಕಲು ಪೆನ್ನಲ್ಲಿ ಇಂಕ್ ಇದ್ದರೆ ಸಾಲದು. ಗುಂಡಿಗೆಯಲ್ಲಿ ಧಮ್ ಸಹ ಇರಬೇಕು' ಎಂದು ಸಂತೋಷ್ ಹೇಳಿದರು.

ಇಡೀ ವಿಶ್ವವೇ ಒಪ್ಪಿಕೊಂಡಿದೆ
'ಇಂದು ನೀವು ಸೂರ್ಯ ನಮಸ್ಕಾರ ಮಾಡುತ್ತಿದ್ದಾರೆ. ಆದರೆ, ಜೂನ್ 21 ವಿಶ್ವ ಯೋಗ ದಿನವಾಗಿ ಆಗಲು ಮೋದಿ ಅವರ ಪಾತ್ರ ದೊಡ್ಡದು. ಬೆಂಗಳೂರಿನ ಕೆಲವು ವಿಚಾರವಾದಿಗಳು ಓಂ ಅನ್ನು ಕಮ್ಯುನಲ್ ಅಂದರು. ಜಗತ್ತಿನ 172 ರಾಷ್ಟ್ರಗಳು ಓಂ ಅವನ್ನು ಒಂದು ಲೈಫ್ ಸ್ಟೈಲ್ ಎಂದು ಒಪ್ಪಿಕೊಂಡಿವೆ. ಆದ್ದರಿಂದ, ಇಸ್ಲಾಮಿಕ್, ಕ್ರಿಶ್ಚಿಯನ್ ದೇಶಗಳು ಸಹ ಇಂದು ಸೂರ್ಯ ನಮಸ್ಕಾರ ಮಾಡುತ್ತಿವೆ' ಎಂದರು.

ಒಬ್ಬ ನಾಯಕರ ಕರೆಗೆ ಓಗೊಟ್ಟರು
'ಒಬ್ಬ ನಾಯಕ ದೇಶದ ಜನರಿಗೆ ನಿಮಗೆ ಸಿಗುವ ಸಬ್ಸಿಡಿ ಬಿಟ್ಟುಕೊಡಿ ಎಂದು ಕರೆ ನೀಡಿದರು. ಸಬ್ಸಿಡಿ ಕೊಡುವುದಿಲ್ಲ ಎಂದು ಹೇಳಲಿಲ್ಲ. ನಾಯಕರ ಕರೆಗೆ ಓಗೊಟ್ಟ 1.7 ಕೋಟಿ ಜನರು ಸಿಲಿಂಡರ್ಗೆ ಸಿಗುತ್ತಿದ್ದ ಸಬ್ಸಿಡಿ ಬಿಟ್ಟುಕೊಟ್ಟರು. ಇಂದು ಅದು ಉಜ್ವಲ ಯೋಜನೆ ಯಡಿ 7 ಕೋಟಿ ಜನರ ಮನೆಗೆ ತಲುಪುತ್ತಿದೆ. ಒಬ್ಬ ನಾಯಕನನ್ನು ದೇಶದ ಜನರು ಎಷ್ಟು ನಂಬಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ' ಎಂದರು.

ಸಂತಸ ಪಡುವ ಸರದಿ ನಿಮ್ಮದು
'ಬೋಗಿಬಿಲ್ ಸೇತುವೆಗೆ ನಾನು ಶಂಕುಸ್ಥಾಪನೆ ಮಾಡಿದೆ. ಆದರೆ, ಉದ್ಘಾಟನೆ ಮಾಡುವಾಗ ಪ್ರಧಾನಿಗೆ ನನ್ನ ನೆನಪು ಆಗಲಿಲ್ಲ ಎಂದು ಇಲ್ಲೊಬ್ಬರು ಗೊಣಗುತ್ತಿದ್ದರು. ಇವರೇನು ಮಾಡಿದ್ದಾರೆ ಎಂದು ನೆನಪಿಸಿಕೊಳ್ಳಬೇಕು. ಎಷ್ಟು ಸಮಯ ಪ್ರಧಾನಿಯಾಗಿದ್ದರು ಎಂದು ಅವರಿಗೆ ನೆನಪಿಲ್ಲ. ಶಂಕು ಸ್ಥಾಪನೆ ಮಾಡಿದ್ದು ಬಿಟ್ಟರೆ ಉದ್ಘಾಟನೆಯನ್ನು ಮಾಡಲಿಲ್ಲ. ನನ್ನ ಹೆಸರಿನಲ್ಲಿ ಹಾಕಿದ ಕಲ್ಲು ಶಾಶ್ವತವಾಗಿ ನಿಂತಿದೆ ಎಂದು ಸಂತಸ ಪಡುವ ಸರದಿ ನಿಮ್ಮದು' ಎಂದರು.












Click it and Unblock the Notifications