ನಕಲಿ ವೋಟರ್ ಐಡಿ: ಸಾಕ್ಷಿ ಸಹಿತ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್
Recommended Video
ಬೆಂಗಳೂರು, ಮೇ 9: ಬಿಜೆಪಿ ಹೊರಿಸಿದ್ದ 'ರಾಜರಾಜೇಶ್ವರಿ ನಗರದ ನಕಲಿ ಗುರುತಿನ ಚೀಟಿ ಪತ್ತೆ' ಆರೋಪವನ್ನು ಕಾಂಗ್ರೆಸ್ ಸರಾಸಗಟಾಗಿ ತಿರಸ್ಕರಿಸಿದೆ. ಮಾತ್ರವಲ್ಲ ಗುರುತಿನ ಚೀಟಿ ಪತ್ತೆಯಾದ ಅಪಾರ್ಟ್ ಮೆಂಟ್ ಬಿಜೆಪಿ ನಾಯಕನಿಗೆ ಸೇರಿದ್ದು ಎಂದು ಸಾಕ್ಷಿ ಸಮೇತ ತಿರುಗೇಟು ನೀಡಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಂಡ ಅಪಾರ್ಟ್ ಮೆಂಟ್ ಮಂಜುಳಾ ನಂಜಮುರಿ ಅವರಿಗೆ ಸೇರಿದ್ದು, ಅವರು ಬಿಜೆಪಿ ನಾಯಕರು ಮತ್ತು ಮಾಜಿ ಕಾರ್ಪೊರೇಟರ್ ಎಂದು ಆರೋಪಿಸಿದ್ದಾರೆ.
|
ಮಗನಿಗೆ ಫ್ಲ್ಯಾಟ್ ಬಾಡಿಗೆ
ಮಂಜುಳಾ ನಂಜಮುರಿ ತಮ್ಮ ಫ್ಲ್ಯಾಟನ್ನು ಮಗ ರಾಕೇಶ್ ಗೆ ಬಾಡಿಗೆಗೆ ನೀಡಿದ್ದರು. ರಾಕೇಶ್ ಕೂಡ ಬಿಜೆಪಿ ನಾಯಕರಾಗಿದ್ದು, ಬಿಜೆಪಿ ಟಿಕೆಟ್ ನಲ್ಲಿ 2015 ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಸುರ್ಜೇವಾಲಾ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಜೊತೆಗೆ ರಾಕೇಶ್ ಇರುವ ಚಿತ್ರ ಹಾಗೂ ಬಿಬಿಎಂಪಿ ಚುನಾವಣೆಗೆ ಜಾಲಹಳ್ಳಿ ವಾರ್ಡ್ ನಿಂದ ರಾಕೇಶ್ ಸ್ಪರ್ಧಿಸಿದ್ದರು ಎನ್ನುವುದಕ್ಕೆ ಬಿಬಿಎಂಪಿಯ ಸ್ಪರ್ಧಿಗಳ ಪಟ್ಟಿಯನ್ನೂ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ.
'ಬಿಜೆಪಿ ಬೃಹನ್ನಾಟಕ'
ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, "ಅಪಾರ್ಟ್ ಮೆಂಟ್ ತಮ್ಮದೇ ನಾಯಕಿ ಮಂಜುಳಾ ನಂಜಮುರಿಯವರಿಗೆ ಸೇರಿದ್ದರೂ ಬಿಜೆಪಿ ಈ ನಾಟಕವಾಡಿದೆ. 2015ರಲ್ಲಿ ಬಿಜೆಪಿ ಟಿಕೆಟ್ ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ತಮ್ಮ ಪುತ್ರ ರಾಕೇಶ್ ಗೆ ಅವರು ಅಪಾರ್ಟ್ ಮೆಂಟನ್ನು ಬಾಡಿಗೆಗೆ ನೀಡಿದ್ದರು," ಎಂದಿದ್ದಾರೆ.
ಇನ್ನು ಅಪಾರ್ಟ್ ಮೆಂಟ್ ಗೆ ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಲ್ಲ, ಬಿಜೆಪಿ ಕಾರ್ಯಕರ್ತರೇ ದಾಳಿ ಮಾಡಿದ್ದು ಎಂದು ಅವರು ಪ್ರತಿಪಾದಿಸಿದ್ದಾರೆ. ಬಿಜೆಪಿ ಸುಳ್ಳು ಆರೋಪಗಳನ್ನು ಮಾಡಿ ಮೇ 12ರ ಚುನಾವಣೆಗೆ ಜನರ ಗಮನವನ್ನು ತನ್ನತ್ತ ಸೆಳೆಯುವ ಯತ್ನ ಮಾಡುತ್ತಿದೆ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.
RR ನಗರ ಕ್ಷೇತ್ರ: 9746 ವೋಟರ್ ಐಡಿ ಪತ್ತೆ, ತನಿಖೆ ಜಾರಿ
|
ಬಿಜೆಪಿ ಅಭ್ಯರ್ಥಿ ರಾಕೇಶ್
"ಈ 9746 ಗುರುತಿನ ಚೀಟಿಗಳ ಪತ್ತೆಯಲ್ಲಿ ಕಾಂಗ್ರೆಸಿನ ಕೈವಾಡ ಇದೆ ಎಂದು ಬಿಜೆಪಿ ಮಧ್ಯರಾತ್ರಿಯ ನಾಟಕವಾಡುತ್ತಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುತಿನ ಚೀಟಿ ಪತ್ತೆಯನ್ನು ಬಿಜೆಪಿ ಹೂಡಿರುವ ಸಂಚು ಎಂದು ಬಣ್ಣಿಸಿರುವ ಸುರ್ಜೇವಾಲಾ, ಬಿಜೆಪಿ ಬಣ್ಣ ಬಯಲಾಗಿದೆ ಎಂದಿದ್ದಾರೆ.
ನಂತರ ದಾಖಲೆ ತೋರಿಸಿದ ಅವರು, "ಕ್ರಮ ಸಂಖ್ಯೆ 16ರಲ್ಲಿ ಜಾಲಹಳ್ಳಿ ವಾರ್ಡ್ ನಲ್ಲಿ ರಾಕೇಶ್ ಹೆಸರಿದೆ. ಇದು ರಾಕೇಶ್ ಬಿಜೆಪಿಯವರು ಎನ್ನಲು ಸಾಕ್ಷ್ಯವಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸುಳ್ಳಿನ ಕಾರ್ಖಾನೆ
'ನಕಲಿ ಪುರಾವೆಗಳನ್ನು ಸೃಷ್ಟಿಸಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸಂಚು ನಡೆಸಿರುವುದರ ವಿರುದ್ಧ ಚುನಾವಣಾ ಆಯೋಗ ಉನ್ನತ ತನಿಖೆ ನಡೆಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬಿಜೆಪಿ ಸುಳ್ಳಿನ ಕಾರ್ಖಾನೆಯನ್ನೇ ನಡೆಸುತ್ತಿದೆ, ಮತ್ತು ಬಿಜೆಪಿಯ ನಾಟಕ ಬಟಾಬಯಲಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಿರುದ್ಧ ಕಿಡಿಕಾರಿದ ಅವರು, ಗೊತ್ತಿದ್ದೂ ಮಂಜುಳಾ ನಂಜಮುರಿ ಮತ್ತು ಅವರ ಪುತ್ರ ರಾಕೇಶ್ ಬಿಜೆಪಿಗೆ ಸೇರಿದವರಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಆರ್.ಆರ್. ನಗರ ಚುನಾವಣೆ ಮುಂದೂಡಿಕೆಗೆ ಬಿಜೆಪಿ ಪಟ್ಟು
ಸುಳ್ಳು ಆರೋಪ ಎಂದ ಜಾವಡೇಕರ್
ಇದಕ್ಕೂ ಮೊದಲು ಜಾವಡೇಕರ್, ನಂಜಮುರಿ ಮತ್ತು ಬಿಜೆಪಿಗೆ ಸಂಬಂಧವಿಲ್ಲ. ಅವರು ಆರು ವರ್ಷ ಹಿಂದೆ ಪಕ್ಷ ಬಿಟ್ಟಿದ್ದಾರೆ ಎಂದಿದ್ದರು.
"ಮಂಜುಳಾ ಈಗ ಕಾಂಗ್ರೆಸ್ ನಲ್ಲಿದ್ದಾರೆ. ವಿಷಯಗಳೇ ಇಲ್ಲದೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮ್ಮ ಬಳಿ ಹಲವು ವಿಷಯಗಳಿಗೆ ಸಾಕ್ಷ್ಯಗಳಿವೆ. ಇದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇವೆ," ಎಂದಿದ್ದಾರೆ.
ರಾಜರಾಜೇಶ್ವರಿ ನಗರ ವ್ಯಾಪ್ತಿಯ ಜಾಲಹಳ್ಳಿಯ ಶಾರದಾಂಬ ನಗರದ ಎಸ್.ಎಲ್.ವಿ ಪಾರ್ಕ್ ವ್ಯೂ ಅಪಾರ್ಟ್ ಮೆಂಟ್ ನಲ್ಲಿ ರಾಕೇಶ್ ಎಂಬವರು ಬಾಡಿಗೆದಾರರಾಗಿರುವ ಫ್ಲ್ಯಾಟ್ ಮೇಲೆ ಮಂಗಳವಾರ ದಾಳಿ ನಡೆಸಲಾಗಿತ್ತು. ಈ ವೇಳೆ ಇಲ್ಲಿ 9,746 ಅಕ್ರಮ ಗುರುತಿನ ಚೀಟಿಗಳು ಸಿಕ್ಕಿದ್ದವು.
ಈ ಸಂಬಂಧ ಮಂಗಳವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ತನಿಖೆಗೆ ಆದೇಶ ನೀಡಿದ್ದಾರೆ. ಮತ್ತು, "ಪ್ರಕರಣ ಗಂಭೀರತೆಯಿಂದ ಕೂಡಿದ್ದು, ಚುನಾವಣಾ ಮುಂದೂಡಿಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ," ಎಂದಿದ್ದಾರೆ.