ನಮ್ಮ ಮೆಟ್ರೋ ಪಿಂಕ್ ಲೈನ್: ಮೇ 12ರವರೆಗೆ ಮುಂದುವರಿಯಲಿದೆ ಸುರಕ್ಷತಾ ಟ್ರಯಲ್ಸ್, ಶೀಘ್ರದಲ್ಲೇ ಸಂಚಾರ ಆರಂಭ?
ಬೆಂಗಳೂರು: ನಗರದ ಟ್ರಾಫಿಕ್ ದಟ್ಟಣೆಗೆ ಬಹುದೊಡ್ಡ ರಿಲೀಫ್ ನೀಡಲಿರುವ, ಬಹುನಿರೀಕ್ಷಿತ ನಮ್ಮ ಮೆಟ್ರೋ 'ಗುಲಾಬಿ ಮಾರ್ಗ'ದ ರೈಲುಗಳ ಸುರಕ್ಷತೆ ಮತ್ತು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಪ್ರಮುಖವಾದ ಆರ್ಡಿಎಸ್ಒ (RDSO) ತಪಾಸಣೆಯು ಇದೀಗ ಆರಂಭವಾಗಿದ್ದು, ಮೇ 12ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಇದು ಗುಲಾಬಿ ಮಾರ್ಗದ ಲೋಕಾರ್ಪಣೆಗೆ ಮುನ್ನ ನಡೆಯುವ ಬಹುಮುಖ್ಯ ಪ್ರಕ್ರಿಯೆಯಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಪರೀಕ್ಷಾರ್ಥ ಹಂತದಲ್ಲಿ ಆರ್ಡಿಎಸ್ಒ ತಂಡವು ರೈಲಿನ ಕಾರ್ಯಕ್ಷಮತೆ ಮತ್ತು ವ್ಯವಸ್ಥೆಯಯನ್ನು ಸೂಕ್ಷ್ಮವಾಗಿ ಮೌಲ್ಯಮಾಪನ ಮಾಡಲಿದೆ. ಭಾರತದಲ್ಲಿ ಯಾವುದೇ ಮೆಟ್ರೋ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತವಾಗುವ ಮುನ್ನ ಆರ್ಡಿಎಸ್ಒ ಪರೀಕ್ಷೆ ಕಡ್ಡಾಯವಾಗಿದೆ. ಟ್ರ್ಯಾಕ್, ಸಿಗ್ನಲಿಂಗ್ ವ್ಯವಸ್ಥೆ, ಬ್ರೇಕಿಂಗ್ ಕಂಟ್ರೋಲ್, ವೇಗದ ಪ್ರಯೋಗಗಳು ಮತ್ತು ಒಟ್ಟಾರೆ ಮೂಲಸೌಕರ್ಯವು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆಯೇ ಎಂದು ಈ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಈ ಕಾರಿಡಾರ್ನ ಸಿವಿಲ್ ಕಾಮಗಾರಿಗಳ ಗುಣಮಟ್ಟವನ್ನು ಸಹ ನಿಕಟವಾಗಿ ಪರೀಕ್ಷಿಸಲಾಗುತ್ತದೆ.

ಈ ಪ್ರಕ್ರಿಯೆ ಪೂರ್ಣಗೊಂಡ ನಂತರ 'ಮಧ್ಯಂತರ ವೇಗ ಪ್ರಮಾಣಪತ್ರ' (Interim Speed Certification) ದೊರೆಯಲಿದೆ. ತದನಂತರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CRS) ಸ್ವತಂತ್ರವಾಗಿ ಅಂತಿಮ ತಪಾಸಣೆ ನಡೆಸಲಿದ್ದು, ಆ ವರದಿಯನ್ನು ರೈಲ್ವೆ ಮಂಡಳಿಯ ತಾಂತ್ರಿಕ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಎಲ್ಲ ಅನುಮೋದನೆಗಳು ಸಿಕ್ಕ ನಂತರವಷ್ಟೇ ಪಿಂಕ್ ಲೈನ್ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಈ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಎರಡು-ಮೂರು ತಿಂಗಳು ಬೇಕಾಗಬಹುದು. ಡೈರಿ ಸರ್ಕಲ್ನಿಂದ ನಾಗವಾರದವರೆಗಿನ ಭೂಗತ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಗುಲಾಬಿ ಮಾರ್ಗದ ಕುರಿತು
ಗುಲಾಬಿ ಮಾರ್ಗವು ಒಟ್ಟು 21.3 ಕಿ.ಮೀ. ಉದ್ದವಿದ್ದು, ಇದು ಬೆಂಗಳೂರು ಮೆಟ್ರೋ ಜಾಲಕ್ಕೆ ಅತಿ ದೊಡ್ಡ ಸೇರ್ಪಡೆಯಾಗಲಿದೆ. ಇದರಲ್ಲಿ ಡೈರಿ ಸರ್ಕಲ್ನಿಂದ ನಾಗವಾರದವರೆಗೆ 13 ಕಿ.ಮೀ. ಸುರಂಗ ಮಾರ್ಗವಿದ್ದರೆ (ಭೂಗತ), ಉಳಿದ 7.53 ಕಿ.ಮೀ. ಮಾರ್ಗವು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಎಲಿವೇಟೆಡ್ (ಮೇಲ್ಸೇತುವೆ) ಆಗಿರಲಿದೆ.
ಈ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿರಲಿವೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ, ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್ಫೋರ್ಡ್ ಟೌನ್, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರ ಪ್ರಮುಖ ನಿಲ್ದಾಣಗಳಾಗಿವೆ. ಇದರಲ್ಲಿ ಎಂ.ಜಿ. ರಸ್ತೆ, ಜಯದೇವ ಆಸ್ಪತ್ರೆ ಮತ್ತು ನಾಗವಾರ ನಿಲ್ದಾಣಗಳು 'ಇಂಟರ್ಚೇಂಜ್' (Interchange) ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.












Click it and Unblock the Notifications