Bengaluru: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣಿಸುವುದರಿಂದ ಆರೋಗ್ಯ ಸುಧಾರಣೆ: ಇಲ್ಲಿದೆ ಅಚ್ಚರಿ ಮೂಡಿಸಿದ IISc ವರದಿ
ಬೆಂಗಳೂರು: ಟ್ರಾಫಿಕ್ ದಟ್ಟಣೆಗೆ ಹೆಸರಾಗಿರುವ ಸಿಲಿಕಾನ್ ಸಿಟಿಯಲ್ಲಿ 'ನಮ್ಮ ಮೆಟ್ರೋ' ಕೇವಲ ಸುಗಮ ಸಂಚಾರಕ್ಕೆ ಮಾತ್ರ ಸೀಮಿತವಾಗಿಲ್ಲ. 'ನಮ್ಮ ಮೆಟ್ರೋ ಹಳದಿ ಮಾರ್ಗ'ವು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಜೊತೆಗೆ, ಬೆಂಗಳೂರಿಗರು ದೈಹಿಕವಾಗಿ ಹೆಚ್ಚು ಸಕ್ರಿಯರಾಗಲು ಮತ್ತು ಆರೋಗ್ಯವಂತರಾಗಲು ಸಹಾಯ ಮಾಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸಿದ ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಬಯೋಕಾನ್ ಫೌಂಡೇಶನ್ ಬೆಂಬಲದೊಂದಿಗೆ, ಐಐಎಸ್ಸಿಯ 'ಸಸ್ಟೈನಬಲ್ ಟ್ರಾನ್ಸ್ಪೋರ್ಟೇಶನ್ ಲ್ಯಾಬ್' ನಡೆಸಿದ ಈ ಅಧ್ಯಯನಕ್ಕೆ 'ಸಾರ್ವಜನಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಹಳದಿ ಮಾರ್ಗದ ಸಮೂಹ ಸಾರಿಗೆ ವ್ಯವಸ್ಥೆಯ ಪ್ರಭಾವ' ಎಂದು ಹೆಸರಿಡಲಾಗಿದೆ. ನಗರದಲ್ಲಿ ದೈಹಿಕ ನಿಷ್ಕ್ರಿಯತೆಯು ಸಾರ್ವಜನಿಕ ಆರೋಗ್ಯದ ದೊಡ್ಡ ಸಮಸ್ಯೆಯಾಗಿರುವ ಈ ಸಮಯದಲ್ಲಿ, ಮೆಟ್ರೋ ಬಳಕೆಯು ಜನರಿಗೆ ಅನಿರೀಕ್ಷಿತ ಫಿಟ್ನೆಸ್ ವರದಾನವಾಗಿ ಪರಿಣಮಿಸಿದೆ.

ದೈಹಿಕ ಚಟುವಟಿಕೆ ಮತ್ತು ಆರೋಗ್ಯ ವೃದ್ಧಿ
ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಈ ಹಳದಿ ಮಾರ್ಗದ ಮೆಟ್ರೋವನ್ನು ಬಳಸುವ ಪ್ರಯಾಣಿಕರು, ಪ್ರತಿದಿನ ನಿಲ್ದಾಣಗಳಿಗೆ ನಡೆದುಕೊಂಡು ಹೋಗುವುದರಿಂದ ಅಂದಾಜು 10 ರಿಂದ 15 ನಿಮಿಷಗಳ ಹೆಚ್ಚುವರಿ ದೈಹಿಕ ಚಟುವಟಿಕೆಯನ್ನು ಪಡೆಯುತ್ತಿದ್ದಾರೆ. ವರದಿಯ ಪ್ರಕಾರ, ಮೆಟ್ರೋ ಆರಂಭಕ್ಕೂ ಮುನ್ನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 58 ರಷ್ಟು ಜನರು ಯಾವುದೇ ರೀತಿಯ ದೈಹಿಕ ಚಟುವಟಿಕೆ ಹೊಂದಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಇವರ ದೈಹಿಕ ಸಕ್ರಿಯತೆ ತೀರಾ ಕಡಿಮೆಯಿತ್ತು. ಇದರಿಂದಾಗಿ ಇವರಲ್ಲಿ ರಕ್ತದೊತ್ತಡ (15%), ಮಧುಮೇಹ (18%) ಮತ್ತು ಉಸಿರಾಟದ ತೊಂದರೆಯಂತಹ (4.6%) ಸಮಸ್ಯೆಗಳು ಹೆಚ್ಚಾಗಿದ್ದವು. ಆದರೆ, ಈಗ ಕ್ಯಾಬ್ ಅಥವಾ ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋಗೆ ಬದಲಾದವರು ದೈನಂದಿನ ನಡಿಗೆಯ ಮೂಲಕ ಉತ್ತಮ ಆರೋಗ್ಯ ಹೊಂದುತ್ತಿದ್ದಾರೆ.
ಮಾಲಿನ್ಯದಿಂದ ರಕ್ಷಣೆ ಮತ್ತು ಮಾನಸಿಕ ನೆಮ್ಮದಿ
ಐಐಎಸ್ಸಿ ಪ್ರೊಫೆಸರ್ ಆಶಿಶ್ ವರ್ಮಾ ಅವರ ನೇತೃತ್ವದ ತಂಡವು 600 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ನಿವಾಸಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ಮೆಟ್ರೋ ಬಳಕೆದಾರರು ವಾಯು ಮಾಲಿನ್ಯ ಮತ್ತು ಬೇಸಿಗೆಯ ವಿಪರೀತ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಅತಿ ಹೆಚ್ಚು ಪಿಎಂ 2.5 ಮಾಲಿನ್ಯಕಾರಕಗಳಿಗೆ ತುತ್ತಾಗುತ್ತಿದ್ದರು. ಇದೀಗ ಹವಾನಿಯಂತ್ರಿತ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವವರು ಹೊಗೆ ಮತ್ತು ಧೂಳಿನ ಅಪಾಯದಿಂದ ಪಾರಾಗಿದ್ದಾರೆ.
ಇನ್ನು, ಐಟಿ ಕಾರಿಡಾರ್ನಲ್ಲಿ ಈ ಹಿಂದೆ ಟ್ರಾಫಿಕ್ನಲ್ಲಿ ಎರಡು ಗಂಟೆಗಳ ಕಾಲ ಆಯಾಸದಿಂದ ಕಳೆಯುತ್ತಿದ್ದವರು, ಈಗ ಕೇವಲ 30 ನಿಮಿಷಗಳಲ್ಲಿ ತಮ್ಮ ಕಚೇರಿ ತಲುಪುತ್ತಿದ್ದಾರೆ. ಪ್ರಯಾಣದ ಆಯಾಸ ಕಡಿಮೆಯಾಗಿರುವುದರಿಂದ, ಪ್ರಯಾಣಿಕರ ಮಾನಸಿಕ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬಂದಿದೆ. ಜನರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿದ್ದು, ಕಚೇರಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಉತ್ತಮಗೊಂಡಿದೆ.
ಮುಂದಿರುವ ಸವಾಲುಗಳು
ಮೆಟ್ರೋದಿಂದ ಇಷ್ಟೆಲ್ಲಾ ಸಕಾರಾತ್ಮಕ ಬದಲಾವಣೆಗಳಾಗುತ್ತಿದ್ದರೂ, ಶೇ. 17 ರಷ್ಟು ಜನರು ಮೆಟ್ರೋ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಟಿಕೆಟ್ ದರ ದುಬಾರಿಯಾಗಿರುವುದು, ಮೆಟ್ರೋ ನಿಲ್ದಾಣದಿಂದ ಮನೆ ಅಥವಾ ಕಚೇರಿಗೆ ತಲುಪಲು ಸೂಕ್ತ ಸಂಪರ್ಕ ಇಲ್ಲದಿರುವುದು, ಪಾದಚಾರಿ ಮಾರ್ಗಗಳ ಕೊರತೆ ಮತ್ತು ಪಾರ್ಕಿಂಗ್ ಸಮಸ್ಯೆಗಳು ಪ್ರಮುಖ ಅಡೆತಡೆಗಳಾಗಿವೆ. ಮೆಟ್ರೋದ ಸಂಪೂರ್ಣ ಪ್ರಯೋಜನ ಪಡೆಯಲು ಬಿಎಂಟಿಸಿ ಫೀಡರ್ ಬಸ್ ಸೇವೆಗಳನ್ನು ಹೆಚ್ಚಿಸಬೇಕು ಮತ್ತು ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಬಯೋಕಾನ್ ಫೌಂಡೇಶನ್ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಸಮೂಹ ಸಾರಿಗೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದು ಕೇವಲ ಸಂಚಾರದ ದೃಷ್ಟಿಯಿಂದ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಪ್ರಬಲ ಅಸ್ತ್ರವಾಗಿದೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications