ಬೆಂಗಳೂರು ಹಿಂಸಾಚಾರದ ಬಗ್ಗೆ ಇಬ್ಬರು ಕಾರ್ಪೋರೇಟರ್ಸ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್.18: ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗ ಪೊಲೀಸರು ಇಬ್ಬರು ಕಾರ್ಪೋರೇಟರ್ ಗಳನ್ನು ವಿಚಾರಣೆಗೆ ಒಳಪಡಿಸಿದರು.
Recommended Video
ಸಿಸಿಬಿ ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆ ಕಾರ್ಪೋರೇಟರ್ ಸಂಪತ್ ರಾಜ್ ಮತ್ತು ಜಾಕೀರ್ ಹುಸೇನ್ ಬೆಳಗ್ಗೆ 10.30ಕ್ಕೆ ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಹಾಜರಾದರು. ಸಂಜೆ ಐದು ಗಂಟೆವರೆಗೂ ಇಬ್ಬರು ಕಾರ್ಪೋರೇಟರ್ಸ್ ನ್ನು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಕಾಂಗ್ರೆಸ್ ಕಾರ್ಪೋರೇಟರ್ ವಿಚಾರಣೆ ಬಗ್ಗೆ ಸಚಿವ ಡಾ.ಸುಧಾಕರ್ ಟ್ವೀಟ್
ಸಿಸಿಬಿ ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿದ ಇಬ್ಬರು ಬಿಬಿಎಂಪಿ ಸದಸ್ಯರು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಕ್ಕೆ ವಿಚಾರಣೆಗೆ ಹಾಜರಾಗಿದ್ದೇವು. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇವೆಯಷ್ಟೇ ಎಂದು ಹೇಳಿದರು.
ಕಾರ್ಪೋರೇಟರ್ ಸಂಪತ್ ರಾಜ್ ಹೇಳಿದ್ದೇನು:
"ಮಂಗಳವಾರ ಬೆಳಗ್ಗೆ 10.30ಕ್ಕೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಇಂದು ಬೆಳಗ್ಗೆ 10.20 ಗಂಟೆಗೆ ಸರಿಯಾಗಿ ವಿಚಾರಣೆಗೆ ಹಾಜರಾಗಿದ್ದೇನೆ. ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ವಿಚಾರಣೆ ಹಂತದಲ್ಲಿ ಇರುವ ಹಿನ್ನೆಲೆ ಆ ಬಗ್ಗೆ ಏನನ್ನೂ ಹೇಳುವುದಕ್ಕೆ ಬಯಸುವುದಿಲ್ಲ. ಸದ್ಯದ ಮಟ್ಟಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಯಾವುದೇ ಸೂಚನೆಗಳನ್ನು ನೀಡಿಲ್ಲ. ಮತ್ತೆ ಕರೆದರೆ ಖಂಡಿತವಾಗಿಯೂ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಕಾರ್ಪೋರೇಟರ್ ಸಂಪತ್ ರಾಜ್ ತಿಳಿಸಿದರು.
ಕಾರ್ಪೋರೇಟರ್ ಜಾಕೀರ್ ಹುಸೇನ್ ಸ್ಪಷ್ಟನೆ:
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ತಮ್ಮ ನಡುವಿನ ಬಾಂಧವ್ಯ ಉತ್ತಮವಾಗಿಯೇ ಇದೆ. ನಮ್ಮದು ಫ್ರೆಜರ್ ಟೌನ್ ವಾರ್ಡ್ ಆಗಿದ್ದು, ಅಲ್ಲಿ ಯಾವುದೇ ಗಲಾಟೆಗಳು ನಡೆದಿಲ್ಲ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ಗಲಭೆಯಲ್ಲಿ ನನ್ನ ಹೆಸರು ಹೇಗೆ ಕೇಳಿ ಬಂದಿತು ಎನ್ನುವುದೇ ನನಗೆ ಗೊತ್ತಿಲ್ಲ. ಸದ್ಯದ ಮಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಕ್ಕೆ ವಿಚಾರಣೆಗೆ ಹಾಜರಾಗಿದ್ದೆನು. ಮುಂದೆ ಮತ್ತೆ ವಿಚಾರಣೆಗೆ ಕರೆದರೆ, ವಿಚಾರಣೆಗೆ ಹಾಜರಾಗಲು ನಾನು ಸಿದ್ಧನಿದ್ದೇನೆ ಎಂದು ಕಾರ್ಪೋರೇಟರ್ ಜಾಕೀರ್ ಹುಸೇನ್ ತಿಳಿಸಿದ್ದಾರೆ.