Bengaluru Suburban Rail: ಸೋಲದೇವನಹಳ್ಳಿ ಡಿಪೋ ನಿರ್ಮಾಣದ ಅಪ್ಡೇಟ್
ಬೆಂಗಳೂರು, ಡಿಸೆಂಬರ್ 14: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ. 2026ರಲ್ಲಿ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ರೈಲುಗಳನ್ನು ಸೋಲದೇವನಹಳ್ಳಿ ಡಿಪೋದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಈ ಡಿಪೋ ನಿರ್ಮಾಣಕ್ಕೆ ಕೆ-ರೈಡ್ ಟೆಂಡರ್ ಕರೆದಿತ್ತು. ಸೋಮವಾರ ಟೆಂಡರ್ ತೆರೆಯಲಾಗಿದ್ದು, ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್, ಯುಆರ್ಸಿ ಕನ್ಸ್ಟ್ರಕ್ಷನ್ ಪ್ರೈ. ಲಿಮಿಟೆಡ್ ಮಾತ್ರ ಬಿಡ್ ಸಲ್ಲಿಕೆ ಮಾಡಿವೆ.

ಸೋಲದೇವನಹಳ್ಳಿ ಡಿಪೋದಲ್ಲಿ 24.86 ಕಿ. ಮೀ. ಮಲ್ಲಿಗೆ ಕಾರಿಡಾರ್ (ಬೈಯಪ್ಪನಹಳ್ಳಿ-ಚಿಕ್ಕಬಣಾವರ) ನಡುವಿನ ಮಾರ್ಗದ ರೈಲುಗಳನ್ನು ನಿರ್ವಹಣೆ ಮಾಡಲಾಗುತ್ತದೆ. 14 ನಿಲ್ದಾಣಗಳ ರೈಲುಗಳು ಇಲ್ಲಿಗೆ ಆಗಮಿಸಲಿವೆ ಎಂದು ಯೋಜನೆ ರೂಪಿಸಲಾಗಿದೆ. ಈ ಡಿಪೋ ನಿರ್ಮಾಣಕ್ಕೆ ತಾಂತ್ರಿಕ ಬಿಡ್ ಅನ್ನು ಕೆ-ರೈಡ್ ಆಹ್ವಾನಿಸಿತ್ತು.
ಟೆಂಡರ್ನ ಅಪ್ಡೇಟ್ ಮಾಹಿತಿ: ಸೋಲದೇವನಹಳ್ಳಿ ಡಿಪೋ ನಿರ್ಮಾಣದ ಟೆಂಡರ್ ಪಡೆಯುವವರು ಒಂದು ಕಿ. ಮೀ. ಗ್ರೇಡ್ ಸೆಕ್ಷನ್ ಸಹ ನಿರ್ಮಾಣ ಮಾಡಬೇಕಿದೆ. ಇದು ಚಿಕ್ಕಬಣಾವರದಿಂದ ಡಿಪೋಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಸೆಪ್ಟೆಂಬರ್ 2024ರಲ್ಲಿ ಕೆ-ರೈಡ್ ಈ ಟೆಂಡರ್ ಕರೆದಿತ್ತು. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 170 ಕೋಟಿ ರೂ.ಗಳು. 24 ತಿಂಗಳಿನಲ್ಲಿ ಕಾಮಗಾರಿ ಮುಗಿಸಬೇಕು ಎಂದು ಟೆಂಡರ್ನಲ್ಲಿ ಷರತ್ತು ಹಾಕಲಾಗಿತ್ತು. ಆಡಳಿತ ಕಛೇರಿ, ವರ್ಕ್ ಶಾಪ್ ಅನ್ನು ನಿರ್ಮಾಣ ಮಾಡಬೇಕಿತ್ತು.
ಸಿವಿಲ್ ಕೆಲಸಗಳು, ರೂಫಿಂಗ್, ನಿಲ್ದಾಣದ ವಿನ್ಯಾಸ, ನಿಲ್ದಾಣದ ಆವರಣ ನಿರ್ಮಾಣ, ಡಿಪೋ ಕಾಪೌಂಡ್ ನಿರ್ಮಾಣ ಇದರ ಜೊತೆಗೆ ಚಿಕ್ಕಬಣಾವರ ನಿಲ್ದಾಣಕ್ಕೆ ಹೊಂದಿಕೊಂಡ ಇತರ ಕಾಮಗಾರಿಯನ್ನು ನಡೆಸಬೇಕು ಎಂದು ಟೆಂಡರ್ನಲ್ಲಿ ಸೂಚಿಸಲಾಗಿತ್ತು.
ಈಗ ಎರಡು ಕಂಪನಿಗಳು ಬಿಡ್ ಸಲ್ಲಿಕೆ ಮಾಡಿದ್ದರು ಇದನ್ನು ತಾಂತ್ರಿಕ ಬಿಡ್ ಪರಿಶೀಲನಾ ಸಮಿತಿಗೆ ಕಳಿಸಲಾಗಿದೆ. ಇದನ್ನು ಅಂತಿಮಗೊಳಿಸಲು ಕೆಲವು ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ. ಈ ಕಂಪನಿಗಳು ಸಲ್ಲಿಕೆ ಮಾಡಿರುವ ಆರ್ಥಿಕ ಬಿಡ್ ಇನ್ನೂ ತೆರೆದಿಲ್ಲ. ಯಾವ ಕಂಪನಿ ಕಡಿಮೆ ಮೊತ್ತವನ್ನು ಉಲ್ಲೇಖಿಸಿದೆ ಎಂಬುದು ಬಳಿಕ ತಿಳಿಯಲಿದೆ.
ಸೋಲದೇವನಹಳ್ಳಿ ಡಿಪೋ ಮಾದರಿಯಲ್ಲಿ ದೇವನಹಳ್ಳಿಯ ಅಕ್ಕುಪೇಟ್ ಬಳಿ ಮತ್ತೊಂದು ಡಿಪೋ ನಿರ್ಮಾಣವಾಗಲಿದೆ. ಈ ಡಿಪೋ ನಿರ್ಮಾಣದ ಟೆಂಡರ್ ನೋಟಿಸ್ ಪ್ರಕ್ರಿಯೆ ನಡೆಯುತ್ತಿದೆ. ಈ ಡಿಪೋ ನಿರ್ಮಾಣದ ಷರತ್ತು, ಗಡುವು ಮುಂತಾದ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ.
ಸಬ್ ಅರ್ಬನ್ ರೈಲು ಯೋಜನೆಯಲ್ಲಿ ನಾಲ್ಕು ಕಾರಿಡಾರ್ಗಳಿವೆ. ಇವುಗಳಲ್ಲಿ ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಣಾವರ ಸಂಪರ್ಕಿಸುವ 'ಮಲ್ಲಿಗೆ' ಕಾರಿಡಾರ್ ನಿರ್ಮಾಣವೇ ವೇಗದಿಂದ ಸಾಗಿದ್ದು, ಮೊದಲು ಈ ಮಾರ್ಗದಲ್ಲಿಯೇ ರೈಲು ಸಂಚಾರ ಆರಂಭ ನಿರೀಕ್ಷೆ ಮಾಡಲಾಗಿದೆ.
ಕೆ-ರೈಡ್ ಈಗಾಗಲೇ ಈ ಮಾರ್ಗದಲ್ಲಿ ಒಟ್ಟು 8 ಸಬ್ ಅರ್ಬನ್ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಹ ಟೆಂಡರ್ ಕರೆದಿದೆ. ಈ ನಿಲ್ದಾಣದ ನಿರ್ಮಾಣವನ್ನು ಸಹ 24 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಮಲ್ಲಿಗೆ ಕಾರಿಡಾರ್ ನಿರ್ಮಾಣಕ್ಕೆ ನೈಋತ್ಯ ರೈಲ್ವೆ 157 ಎಕರೆ ಭೂಮಿಯನ್ನು ಕೆ-ರೈಡ್ಗೆ ಹಸ್ತಾಂತರಿಸಿದೆ. ಈ ಕಾರಿಡಾರ್ ಕಾಮಗಾರಿಯನ್ನು ಎಲ್ & ಟಿ ಕಂಪನಿ ನಡೆಸುತ್ತಿದೆ. 'ಮಲ್ಲಿಗೆ' ಕಾರಿಡಾರ್ನಲ್ಲಿ ರೈಲು ಬೈಯಪ್ಪನಹಳ್ಳಿ, ಬಾಣಸವಾಡಿ, ನಾಗವಾರ, ಹೆಬ್ಬಾಳ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ ಮೂಲಕ ಚಿಕ್ಕಬಣಾವರ ತಲುಪಲಿದೆ.











Click it and Unblock the Notifications