ಉಪಚುನಾವಣೆ: RRನಗರದಿಂದ ಡಿ.ಕೆ.ಸುರೇಶ್ ಕೊಟ್ಟ ಬ್ರೇಕಿಂಗ್ ನ್ಯೂಸ್
ಬೆಂಗಳೂರು, ಅ 1: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಸಂಸದ ಡಿ.ಕೆ.ಸುರೇಶ್ ಆಖಾಡಕ್ಕಿಳಿದಿದ್ದಾರೆ.
ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಅಣ್ಣತಮ್ಮ ಇಬ್ಬರು ಹೇಳುತ್ತಲೇ ಬರುತ್ತಿರುವುದು, ಅದಕ್ಕೆ ಇಂದು, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೂಡಾ ಧ್ವನಿಗೂಡಿಸಿರುವುದು ಕುತೂಹಲಕ್ಕೀಡು ಮಾಡಿದೆ.
ಚುನಾವಣೆಯ ಸಂದರ್ಭದಲ್ಲಿ ಹೊಸಹೊಸ ಹೆಸರುಗಳು ಕೇಳಿಬರುವುದು ಸಾಮಾನ್ಯ. ಅದರಂತೆಯೇ ಆರ್.ಆರ್.ನಗರದ ಕಾಂಗ್ರೆಸ್ ಟಿಕೆಟ್ ಗಾಗಿ ಹಲವು ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ, ಐಪಿಎಸ್ ಅಧಿಕಾರಿ ಡಿ.ಕೆ.ರವಿ ಕುಟುಂಬ ಸದಸ್ಯರದ್ದು ಕೂಡಾ.
ಈ ನಡುವೆ, ಸಂಸದ ಸುರೇಶ್ ನೀಡಿರುವ ಹೇಳಿಕೆ, ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಪೈಸ್ ಕ್ಯಾಂಡಿಡೇಟ್ ಎನ್ನುವುದನ್ನು ಸುರೇಶ್ ಪುನರುಚ್ಚಿಸಿದ್ದಾರೆ. ಉಪಚುನಾವಣೆ, ಇದೇ ಬರುವ ನವೆಂಬರ್ ಮೂರರಂದು ನಡೆಯಲಿದೆ.

ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ.ಸುರೇಶ್
ಸ್ಥಳೀಯ ಕಾರ್ಯಕರ್ತರ ಸಭೆಯನ್ನು ನಡೆಸಿದ್ದ ಡಿ.ಕೆ.ಸುರೇಶ್, "ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಅಭಿಪ್ರಾಯವನ್ನು ಕೆಪಿಸಿಸಿ ಮುಂದಿಡುತ್ತೇನೆ. ಹಲವು ವಿಚಾರಗಳನ್ನು ಕಾರ್ಯಕರ್ತರು ಮತ್ತು ಮುಖಂಡರು ಸಭೆಯಲ್ಲಿ ವ್ಯಕ್ತ ಪಡಿಸಿದ್ದಾರೆ. ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು"ಎಂದು ಸುರೇಶ್ ಹೇಳಿದ್ದಾರೆ.

ನಾನು ಮತ್ತು ಮುನಿರತ್ನ ಸ್ನೇಹಿತರು
"ನಾನು ಮತ್ತು ಮುನಿರತ್ನ ಸ್ನೇಹಿತರು, ಆದರೆ ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ನಾನು ಅವರ ಜೊತೆ ಸಂಪರ್ಕದಲ್ಲಿಲ್ಲ. ಕ್ಷೇತ್ರದ ಬಿಜೆಪಿಯ ಕಾರ್ಯಕರ್ತರ ಪ್ರಕಾರ, ಮುನಿರತ್ನಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ"ಎನ್ನುವ ಮೂಲಕ ಸುರೇಶ್, ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದ್ದಾರೆ. (File Photo)

ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾದ ಕುಸುಮಾ
"ಚುನಾವಣೆಗೆ ಹಲವು ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಹನುಮಂತರಾಯಪ್ಪ ಅವರ ಹೆಸರೂ ಇದೆ" ಎಂದು ಡಿ.ಕೆ.ಸುರೇಶ್ ಹೇಳಿದ್ದರು. ಇದಕ್ಕೆ ಪೂರಕ ಎನ್ನುವಂತೆ, ಹನುಮಂತರಾಯಪ್ಪ ಮತ್ತು ಡಿ.ಕೆ.ರವಿ ಪತ್ನಿ ಕುಸುಮಾ, ಆದಿಚುಂಚನಗಿರಿ ಶ್ರೀಗಳನ್ನು ಗುರುವಾರ (ಅ 1) ಭೇಟಿಯಾಗಿದ್ದರು.

ತುಳಸಿ ಮುನಿರಾಜು ಗೌಡ
ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ನಡುವೆ ತೀವ್ರ ಪೈಪೋಟಿಯಿದೆ. ಒಕ್ಕಲಿಗ ಸಮುದಾಯದ ಮತಬ್ಯಾಂಕ್ ಅಲ್ಲಿ ಹೆಚ್ಚಿರುವುದರಿಂದ, ಮುನಿರತ್ನ ಅವರಿಗೆ ಟಿಕೆಟ್ ಸಿಗದೇ ಇರುವ ಸಾಧ್ಯತೆಯಿದೆಯೇ ಎನ್ನುವುದು ಪ್ರಶ್ನೆಯಾಗಿ ಮೂಡಿದೆ.

ಮುನಿರತ್ನ ಅಭ್ಯರ್ಥಿಯಾಗುತ್ತಾರಾ ಸದ್ಯದಲ್ಲೇ ಉತ್ತರ ಸಿಗಲಿದೆ
ಒಂದು ವೇಳೆ, ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಲ್ಲಿ, ಮುನಿರತ್ನ ತಮ್ಮ ಮಾತೃಪಕ್ಷ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲಿದ್ದಾರಾ? ಡಿಕೆಶಿ ಕುಟುಂಬಕ್ಕೆ ಆಪ್ತರಾಗಿರುವ ಮುನಿರತ್ನ ಇಂತಹ ನಿರ್ಧಾರ ತೆಗೆದುಕೊಳ್ಲಬಹುದಾ? ಕಾಂಗ್ರೆಸ್ ಮುಖಂಡರು ಹೇಳುತ್ತಿರುವ ಅಚ್ಚರಿಯ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. (File Photo)












Click it and Unblock the Notifications