Private Bus Fare Hike: ಯುಗಾದಿ - ರಂಜಾನ್ ಸಾಲು ಸಾಲು ರಜೆ; ಖಾಸಗಿ ಬಸ್ಗಳ ಪ್ರಯಾಣ ದರ ದುಬಾರಿ, ಎಷ್ಟಾಗಿದೆ
Private Bus Fare Hike: ಬೆಂಗಳೂರಿನಿಂದ ಕರ್ನಾಟಕದ ವಿವಿಧ ನಗರ ಹಾಗೂ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಯುಗಾದಿ ಹಾಗೂ ರಂಜಾನ್ ಸೇರಿದಂತೆ ಈ ಬಾರಿ ಕರ್ನಾಟಕದಲ್ಲಿ ಸಾಲು - ಸಾಲು ರಜೆಗಳು ಬಂದಿವೆ. ಮಾರ್ಚ್ 19ರಿಂದ ಪ್ರಾರಂಭವಾಗಿ ಮಾರ್ಚ್ 23ರ ವರೆಗೂ ಸರ್ಕಾರಿ ರಜೆಗಳು ಇವೆ. ಸಾಲು - ಸಾಲು ರಜೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಜನ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಎಂದಿನಂತೆ ಈ ಬಾರಿಯೂ ಖಾಸಗಿ ಬಸ್ಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ದುಬಾರಿ ಪ್ರಯಾಣ ದರವನ್ನು ನಿಗದಿ ಮಾಡಿವೆ. ಹಬ್ಬದ ಸೀಸನ್ನಲ್ಲಿ ಕೆಲವು ಖಾಸಗಿ ಬಸ್ಗಳ / ಬಸ್ ಮಾಲೀಕರ ಹಗಲು ದರೋಡೆ ಶುರುವಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಸತತ ಐದು ದಿನಗಳ ವಾರದೆ ರಜೆ ಹಾಗೂ ವಾರಾಂತ್ಯವೂ ಸಹ ಇರುವುದರಿಂದ ಹಲವರು ತಮ್ಮ ಊರುಗಳಿಗೆ ಹಾಗೂ ಸಣ್ಣ ಪ್ರಯಾಣದ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಇದೀಗ ಖಾಸಗಿ ಬಸ್ಗಳ ಮಾಲೀಕರು ಏಕಾಏಕಿ ಬಸ್ಗಳ ಪ್ರಯಾಣ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಇನ್ನೂ ಆರ್ಸಿಟಿಸಿಯಲ್ಲಿಯೂ ವೈಟಿಂಗ್ ಲಿಸ್ಟ್ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ರೈಲುಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಸಿಗುತ್ತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್ಗಳ ಸೇವೆ ನೀಡಲಾಗಿದೆ ಎಂದು ಹೇಳಲಾಗಿದ್ದರೂ, ಪರಿಸ್ಥಿತಿ ಸುಧಾರಿಸುತ್ತಿಲ್ಲ.

ಹಬ್ಬದ ರಜೆ ದಿನಗಳು
ಮಾರ್ಚ್ 19: ಯುಗಾದಿ ಹಬ್ಬ
ಮಾರ್ಚ್ 20: ರಂಜಾನ್ (ಆರ್ಎಚ್)
ಮಾರ್ಚ್ 21: ರಂಜಾನ್
ಮಾರ್ಚ್ 22: ಭಾನುವಾರ
ಮಾರ್ಚ್ 23: ದೇವರ ದಾಸೀಮಯ್ಯ ಜಯಂತಿ (ಆರ್ಎಚ್) ಇರುವುದರಿಂದ ಬೆಂಗಳೂರಿನಲ್ಲಿ ಇರುವವರು ದೂರದ ಊರುಗಳಿಗೆ ಪ್ರಯಾಣಿಸಲು ಖಾಸಗಿ ಬಸ್ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳ ಪ್ರಯಾಣ ದರವು ಏಕಾಏಕಿ ಹೆಚ್ಚಳವಾಗಿದೆ. ಖಾಸಗಿ ಬಸ್ಗಳ ಪ್ರಯಾಣ ದರ ಈ ಹಿಂದೆ ಎಷ್ಟಿತ್ತು ಹಾಗೂ ಈಗ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
| ಮಾರ್ಗ | ಹಳೆಯ ದರ | ಹೊಸ ದರ |
|---|---|---|
| ಬೆಂಗಳೂರು - ಮಂಗಳೂರು | ₹600 | ₹ 3000 |
| ಬೆಂಗಳೂರು - ಧಾರವಾಡ / ಹುಬ್ಬಳ್ಳಿ | ₹400 - ₹1,300 | ₹4,500 |
| ಬೆಂಗಳೂರು - ಶಿವಮೊಗ್ಗ | ₹400 | ₹2,799 |
| ಬೆಂಗಳೂರು - ಧರ್ಮಸ್ಥಳ | ₹500 | ₹3,600 |
| ಬೆಂಗಳೂರು - ಮೈಸೂರು | ₹350 | ₹2,500 |
2,000 ಹೆಚ್ಚುವರಿ ಬಸ್ ಸೇವೆ
ಇನ್ನು ಕರ್ನಾಟಕ ಸರ್ಕಾರವು ಹಬ್ಬದ ಸೀಸನ್ ಹಿನ್ನೆಲೆಯಲ್ಲಿ 2,000 ಹೆಚ್ಚುವರಿ ಬಸ್ಗಳ ಸೇವೆಯನ್ನು ಕಲ್ಪಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಿಂದ ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನ ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಸ್ಯಾಟಲೈಟ್ ಹಾಗೂ ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ 2,000 ಹೆಚ್ಚುವರಿ ಬಸ್ಗಳ ಸೇವೆ ಕಲ್ಪಿಸಲಾಗಿದೆ.












Click it and Unblock the Notifications