ಪಾದರಾಯನಪುರ ಪುಂಡರಿಗೆ ಜಮೀರ್ ಅದ್ದೂರಿ ಸ್ವಾಗತ: ಕಾಂಗ್ರೆಸ್ ನಲ್ಲೇ ವ್ಯಾಪಕ ಆಕ್ರೋಶ
ಬೆಂಗಳೂರು, ಜೂನ್ 4: ಸದಾ ಒಂದಲ್ಲಾ ಒಂದು ವಿವಾದದಲ್ಲಿ ಗುರುತಿಸಿಕೊಳ್ಳುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ ಖಾನ್ ಮತ್ತೊಮ್ಮೆ ತಪ್ಪು ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಬಾರಿ, ಸ್ವಪಕ್ಷೀಯ ಮುಖಂಡರೇ ಜಮೀರ್ ವಿರುದ್ದ ತಿರುಗಿಬಿದ್ದಿದ್ದಾರೆ.
Recommended Video
ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಠಾಣೆ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿದ್ದ ಪಾದರಾಯನಪುರದ ಪುಂಡರಿಗೆ, ಬುಧವಾರ (ಜೂ 3) ಜಾಮೀನು ಸಿಕ್ಕ ವೇಳೆ, ಜಮೀರ್ ಖುದ್ದು ತಾನೇ ನಿಂತು, ಅವರಿಗೆಲ್ಲಾ ದುಡ್ಡು ಕೊಟ್ಟು ಕಳುಹಿಸಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕೂಡಾ, ಬೆಂಗಳೂರಿನ ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ದಾಳಿಯ ಹೇಯ ಕೃತ್ಯಕ್ಕೆ ರಾಜ್ಯದೆಲ್ಲಡೆ ಆಕ್ರೋಶ ವ್ಯಕ್ತವಾಗಿದ್ದರೆ, ಜಮೀರ್ ಅಹ್ಮದ್ ಖಾನ್, "ಜನರು ತಪ್ಪು ಕಲ್ಪನೆಯಿಂದ ಹಾಗೆ ಮಾಡಿರಬಹುದು" ಎಂದು ಹೇಳಿದ್ದರು.
ಇದಲ್ಲದೇ, ದೆಹಲಿಯ ಜಮಾತ್ನಲ್ಲಿ ಭಾಗವಹಿಸಿದ್ದ 19 ತಬ್ಲಿಘಿಗಳಿಗೆ ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ಕಾನೂನು ಬಾಹಿರವಾಗಿ ಆಶ್ರಯ ಕೊಟ್ಟಿದ್ದರು ಎಂದು ಆರೋಪಿಸಿ ಜಮೀರ್ ವಿರುದ್ದ ದೂರು ದಾಖಲಾಗಿತ್ತು. ಇವೆಲ್ಲಾ ಘಟನೆಗಳು ಕಾಂಗ್ರೆಸ್ ಪಕ್ಷದ ಇಮೇಜಿಗೆ ಸಾಕಷ್ಟು ಡ್ಯಾಮೇಜ್ ಮಾಡಿತ್ತು.

ಪಾದರಾಯನಪುರದಲ್ಲಿ ಪುಂಡಾಟಿಕೆ
ಲಾಕ್ ಡೌನ್ ವೇಳೆ, ಪಾದರಾಯನಪುರದಲ್ಲಿ ಪುಂಡಾಟಿಕೆ ನಡೆಸಿ, ಜೆ.ಜೆ.ನಗರ ಪೊಲೀಸ್ ಠಾಣೆಯ ಶೆಡ್ ಅನ್ನು ಧ್ವಂಸಗೊಳಿ, ಜೈಲು ಪಾಲಾಗಿದ್ದ 126 ಜನರಿಗೆ ಬೇಲ್ ಸಿಕ್ಕಿತ್ತು. ಇವರನ್ನು ಕೊರೊನಾ ವಾರಿಯರ್ಸ್ ರೀತಿಯಲ್ಲಿ ಸ್ವಾಗತ ಮಾಡಲು ಜಮೀರ್ ಹೋಗಿದ್ದರು.

ಜಮೀರ್ ತನ್ನದೇ ಒಡೆತನದ ಬಸ್ ನಲ್ಲಿ ಕಳುಹಿಸಿಕೊಟ್ಟಿದ್ದರು
1.26 ಕೋಟಿ ರೂಪಾಯಿ ಶ್ಯೂರಿಟಿ ಬಾಂಡ್ ಮೇಲೆ ಇವರಿಗೆ ಷರತ್ತುಬದ್ದ ಜಾಮೀನು ಸಿಕ್ಕಿತ್ತು. ಹಜ್ ಭವನದಲ್ಲಿ ಇವರನ್ನು ಶಾಸಕ ಜಮೀರ್ ಅಹ್ಮದ್ ಮತ್ತು ಪಾಲಿಕೆ ಸದಸ್ಯ ಅಲ್ತಾಫ್ ಖಾನ್ ಖುದ್ದಾಗಿ ಸ್ವಾಗತಿಸಿದ್ದರು. ಅಲ್ಲದೇ, ಎಲ್ಲರಿಗೂ ಹತ್ತು ಸಾವಿರ ರೂಪಾಯಿ ನೀಡಿ, ತನ್ನದೇ ಒಡೆತನದ ಬಸ್ ನಲ್ಲಿ ಕಳುಹಿಸಿಕೊಟ್ಟಿದ್ದರು.

ಕಾಂಗ್ರೆಸ್ ನಲ್ಲೇ ತೀವ್ರ ವಿರೋಧ
ಸಾಮಾಜಿಕ ಅಂತರ ಯಾವುದನ್ನೂ ಕ್ಯಾರ್ ಮಾಡದ ಜಮೀರ್ ನಡವಳಿಕೆಯ ವಿರುದ್ದ ಕಾಂಗ್ರೆಸ್ ನಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಪುಂಡರು ಯಾವ ಕಾರಣಕ್ಕಾಗಿ ಜೈಲು ಸೇರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂಥವರನ್ನು ಸ್ವಾಗತಿಸಲು ಹೊರಟರೆ ಪಕ್ಷದ ಇಮೇಜಿಗೆ ಏನಾಗ ಬೇಡ ಎಂದು ಯುವ ಕಾಂಗ್ರೆಸ್ ಘಟಕದಲ್ಲಿ ಅಸಮಾಧಾನ ಎದ್ದಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಹಿರಿಯರು ಕರೆದು ಬುದ್ದಿ ಹೇಳಬೇಕು
ಕಾಂಗ್ರೆಸ್ ವಿರುದ್ದ ಟೀಕೆ ಮಾಡಲು ವಿರೋಧಿಗಳಿಗೆ ನಾವೇ ಆಹಾರ ನೀಡಿದಂತಾಗಿದೆ. ಜಮೀರ್ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಈ ಹಿಂದೆಯೂ ಹಲವು ಬಾರಿ ಜಮೀರ್ ಪಕ್ಷಕ್ಕೆ ಮುಜುಗರ ತರುವ ನಡೆ ಮತ್ತು ಹೇಳಿಕೆಯನ್ನು ನೀಡಿದ್ದಾರೆ. ಅವರನ್ನು ಪಕ್ಷದ ಹಿರಿಯರು ಕರೆದು ಬುದ್ದಿ ಹೇಳಬೇಕು ಎನ್ನುವ ಒತ್ತಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.












Click it and Unblock the Notifications