RCB IPL 2026 Final: ಆರ್ಸಿಬಿ ಗೆದ್ದರೂ ಅಭಿಮಾನಿಗಳಿಗಿಲ್ಲ ಈ ಭಾಗ್ಯ.. ಸಂಭ್ರಮಾಚರಣೆಯಂದು ಹೊರಬರುವವರೇ ಎಚ್ಚರ
RCB IPL 2026 Final: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆಯುವ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯ ಅಹಮದಾಬಾದ್ನಲ್ಲಿದ್ದರೂ ಸಹ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ಕಳೆದ ವರ್ಷ 2025ರಲ್ಲಿ ಆರ್ಸಿಬಿ ಟ್ರೋಫಿ ಗೆದ್ದ ಮಾರನೆ ದಿನ ಮೇ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿತ್ತು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡಿದ್ದರು. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಬಾರಿ ಮುನ್ನೆಚ್ಚರಿಕೆಯಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಪೊಲೀಸರು ಜಾರಿಗೊಳಿಸಿರುವ ಪ್ರಮುಖ ನಿಯಮಗಳು
ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಿಷೇಧ: ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ ಸಾರ್ವಜನಿಕ ರಸ್ತೆಗಳು ಅಥವಾ ಮೈದಾನಗಳಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ವಿಜಯೋತ್ಸವ ಆಚರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಂದ್ಯ ಪ್ರದರ್ಶನ ನಿಷೇಧ: ಮಾಲ್ಗಳು, ಪಬ್ಗಳು ಅಥವಾ ಇತರ ವಾಣಿಜ್ಯ ಮಳಿಗೆಗಳ ಹೊರಗೆ ಸಾರ್ವಜನಿಕರಿಗೆ ಕಾಣಿಸುವಂತೆ ಎಲ್ಇಡಿ ಪರದೆಗಳನ್ನು ಹಾಕಿ ಲೈವ್ ಮ್ಯಾಚ್ ಸ್ಕ್ರೀನಿಂಗ್ ಮಾಡುವಂತಿಲ್ಲ. ಸಂಬಂಧಪಟ್ಟ ಇಲಾಖೆಗಳ ಮುನ್ಸೂಚನೆ ಹಾಗೂ ಅನುಮತಿ ಇಲ್ಲದೆ ರಸ್ತೆಗಳಲ್ಲಿ ಸ್ಕ್ರೀನ್ ಅಳವಡಿಸುವುದನ್ನು ಬ್ಯಾನ್ ಮಾಡಲಾಗಿದೆ.
ಪಟಾಕಿ ಮತ್ತು ಅಪಾಯಕಾರಿ ವಸ್ತುಗಳ ಬಳಕೆಗೆ ನಿಷೇಧ: ವಿಜಯೋತ್ಸವದ ನೆಪದಲ್ಲಿ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದು ಅಥವಾ ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬೈಕ್ ರ್ಯಾಲಿ, ಸ್ಟಂಟ್ಗಳಿಗೆ ನಿಷೇಧ: ಅಭಿಮಾನಿಗಳು ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡುವುದು, ಅತಿ ವೇಗವಾಗಿ ಚಾಲನೆ ಮಾಡುವುದು, ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದು, ಅನಗತ್ಯವಾಗಿ ಹಾರ್ನ್ ಮಾಡುವುದು ಮತ್ತು ರಸ್ತೆ ತಡೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಸಾರ್ವಜನಿಕವಾಗಿ ಮದ್ಯಪಾನ ಮಾಡುವಂತಿಲ್ಲ: ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಮದ್ಯಪಾನ ಮಾಡುವುದು, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು, ಗಲಾಟೆ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ: ಸೋಶಿಯಲ್ ಮೀಡಿಯಾಗಳಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಪೋಸ್ಟ್ಗಳು, ದ್ವೇಷಪೂರಿತ ಸಂದೇಶಗಳು ಅಥವಾ ವದಂತಿಗಳನ್ನು ಹರಡಬಾರದು. ಎದುರಾಳಿ ತಂಡದ ಅಭಿಮಾನಿಗಳನ್ನು ಹೀಯಾಳಿಸುವುದು ಅಥವಾ ಪ್ರಚೋದಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಾದ್ಯಂತ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು
* ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ ಬ್ರೇಕ್
* ರಸ್ತೆಗಳ ಬಳಿ ಎಲ್ಇಡಿ ಅಳವಡಿಕೆಗೆ ಪೊಲೀಸರ ಅನುಮತಿ ಕಡ್ಡಾಯ
* ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳ ಬಳಕೆಗೆ ನಿಷೇಧ
* ಜನದಟ್ಟಣೆ ಇರುವ ಸ್ಥಖಗಳಲ್ಲಿ ದುರ್ವರ್ತನೆ ತೀರಿದರೆ ಕಠಿಣ ಕ್ರಮ
* ಬೈಕ್ ರ್ಯಾಲಿ, ಸ್ಟಂಟ್ಗಳನ್ನು ಮಾಡುವಂತಿಲ್ಲ, ರಸ್ತೆಗಳನ್ನ ಬ್ಲಾಕ್ ಮಾಡುವಂತಿಲ್ಲ
* ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕಠಿಣ ಕ್ರಮ
* ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಸುದ್ದಿಗಳು, ಪ್ರಚೋದನಾಕಾರಿ ಪೋಸ್ಟ್ ಮಾಡುವಂತಿಲ್ಲ.
* ಟ್ರೋಫಿ ಗೆದ್ದ ಖುಷಿಯಲ್ಲಿ ಬೇರೆ ತಂಡದ ಅಭಿಮಾನಿಗಳನ್ನು ಹೀಯಾಳಿಸುವುವಂತಿಲ್ಲ.












Click it and Unblock the Notifications