Get Updates
Get notified of breaking news, exclusive insights, and must-see stories!

ಅಪಘಾತ, ತುರ್ತು ಪರಿಸ್ಥಿತಿ: ಸಾರ್ವಜನಿಕ ಸಹಾಯಕ್ಕೆ ಧಾವಿಸುವವರು ಸಾವಿರಕ್ಕೊಬ್ಬರು, ಸೋಷಿಯಲ್ ಮೀಡಿಯಾ ಚರ್ಚೆ

ಬೆಂಗಳೂರು: ಬೆಂಗಳೂರಿನಲ್ಲಿ ಈಚೆಗೆ ಸಂಭವಿಸಿದ ಹೃದಯವಿದ್ರಾವಕ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸಾವು - ಬದುಕಿನ ನಡುವೆ ಹೋರಾಟ ಮಾಡಿ, ಸಾವನ್ನಪ್ಪುವುದು ಎಷ್ಟು ನಾಚಿಕೆಗೇಡಿನ ಹಾಗೂ ಅಮಾನವೀಯ ಸಂಗತಿ ಎಂದು ಹಲವರು ಕಳವಳ ವ್ಯಕ್ತಪಡಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯವೂ ಒಂದಿಲ್ಲೊಂದು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಅಲ್ಲದೇ ಕೆಲವೊಮ್ಮೆ ರಸ್ತೆಯಲ್ಲಿ ಕೆಲವರು ಮೂರ್ಛೆ ಹೋಗುವುದು ಇದೆ. ಈ ರೀತಿ ಆದಾಗೆಲ್ಲ ಜನ ಓಡೋಡಿ ಬಂದು ಬಿದ್ದವರಿಗೆ ಸಹಾಯ ಮಾಡುವುದಿದೆ. ಆದರೆ ಮಂಗಳವಾರ ನಡೆದಿರುವ ಘಟನೆ ಅಪಮಾನ ಮಾತ್ರವಲ್ಲ, ಮಹಾನಗರಗಳಲ್ಲಿ ಮಾನವೀಯತೆ ಕಣ್ಮರೆ ಆಗುತ್ತಿರುವ ಮುನ್ಸೂಚನೆಯಂತಿದೆ. ಬೆಂಗಳೂರಿನ ವೆಂಕಟರಮಣನ್ ಅವರು ನಿರ್ಣಾಯಕ 15 ನಿಮಿಷಗಳಲ್ಲಿ ಯಾರ ಸಹಾಯವೂ ಸಿಗದೆ ನಡು ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ.

Bengaluru Heart Attack Case Viral Why Don t People Step In During Accidents Social Media Asks

ಸಾರ್ವಜನಿಕ ಸಹಾಯಕ್ಕೆ ಧಾವಿಸುವವರು ಸಾವಿರಕ್ಕೊಬ್ಬರು ಎನ್ನುವ ಶೀರ್ಷಿಕೆಯೊಂದಿಗೆ ಪತ್ರಕರ್ತರಾದ ಶಿವಸುಬ್ರಹ್ಮಣ್ಯ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಅಪಘಾತ ಸಮಯದಲ್ಲಿನ ವಿಷಯಗಳನ್ನು ಹಂಚಿಕೊಂಡಿದ್ದಾರೆ. "ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನನಗೆ ಸಣ್ಣ ಅಪಘಾತವಾಗಿತ್ತು. ಪಾದಕ್ಕೆ ಗಾಯವಾಗಿ ತೀವ್ರ ರಕ್ತ ಸ್ರಾವ ಆಗುತ್ತಿದ್ದಂತೆ ಸಮೀಪದ ಬಿಬಿಎಂಪಿ ಆಸ್ಪತ್ರೆಗೆ ಹೋಗಿ, ತುರ್ತು ಚಿಕಿತ್ಸಾ ಘಟಕ ಹುಡುಕಿದೆ. (ಉಚಿತ ಅಥವಾ ಕಡಿಮೆ ಖರ್ಚು ಎಂಬ ಕಾರಣಕ್ಕೆ) . ಜತೆಗಿದ್ದ ನನ್ನ ಮಿತ್ರರೊಬ್ಬರು ಒಳಗೆ ಓಡಿ ಹೋದರೂ ಸ್ಪಂದನೆ ಸಿಗಲಿಲ್ಲ.

ಪಕ್ಕದ ಕೊಠಡಿಗೆ ಹೋಗಿ ಎಂದು ಒಬ್ಬ ಸಿಬ್ಬಂದಿ ಹೇಳಿದರು. ಅಲ್ಲಿ ಕರ್ತವ್ಯದಲ್ಲಿ ಇದ್ದ ಸಿಬ್ಬಂದಿ ಊಟಕ್ಕೆ ಹೋಗಿದ್ದರು. ಕರೆ ಮಾಡಿ ಕರಿಸ್ತೀವಿ ಎಂದರಷ್ಟೇ. ಕಂಪೌಂಡ್ ಒಳಗೆ ನಿಂತುಕೊಂಡಿದ್ದ ನನಗೆ ರಕ್ತ ಸ್ರಾವದಿಂದ ನಿತ್ರಾಣವಾಗಿ ಕುಸಿದು ಬಿದ್ದೆ. ರಕ್ತದೊತ್ತಡ ಪ್ರಮಾಣ ಇಳಿಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ರೋಗಿಗಳ ಜತೆಗೆ ಬಂದಿದ್ದ ಸುಮಾರು 20 ಜನರೂ ಅಲ್ಲಿದ್ದರು. ಯಾರಾದರೂ ತುರ್ತು ಘಟಕಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಎಂದು ನಾನು ಗೋಗರೆದರೂ ಆತಂಕದಿಂದ ನೋಡುತ್ತ ದೂರ ನಿಂತು ನೋಡುತ್ತಿದ್ದರೇ ಹೊರತು ಯಾರೊಬ್ಬನೂ ಸ್ಪಂದಿಸಲಿಲ್ಲ. ಏನಾಯ್ತು ಎಂದು ಕೇಳಲಿಲ್ಲ. ಒಳಗೆ ಹೋಗಿದ್ದ ಮಿತ್ರರು ಹೊರಗೆ ಓಡೋಡಿ ಬಂದು , ನನ್ನನ್ನು ಖಾಸಗಿ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಮುಂದಿನ ಮೂರು ತಿಂಗಳು ಕಾಲ ನನಗೆ ಆಸ್ಪತ್ರೆ ಓಡಾಟ ಇತ್ತು" ಎಂದು ಬರೆದುಕೊಂಡಿದ್ದು, ರೋಗಿಗಳಿಗೆ ತುರ್ತು ಸೇವೆ ಮತ್ತು ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

25 ವರ್ಷಗಳ ಹಿಂದೆ ನಡೆದ ಘಟನೆಯ ಮೆಲುಕು....

ಇದೇ ಪೋಸ್ಟ್‌ನಲ್ಲಿ 25 ವರ್ಷಗಳ ಹಿಂದೆ ನಡೆದ ಘಟನೆಯನ್ನೂ ಶಿವಸುಬ್ರಹ್ಮಣ್ಯ ಅವರು ಮೆಲುಕು ಹಾಕಿದ್ದಾರೆ. " ಸುಮಾರು 25 ವರ್ಷಗಳ ಹಿಂದೆ ವಿಜಯನಗರ ಬಳಿ ಹಿಟ್ ಅಂಡ್ ರನ್ ಘಟನೆಯಲ್ಲಿ ಬೈಕ್ ಸವಾರರೊಬ್ಬರು ಗಾಯಗೊಂಡಿದ್ದರು. ಅವರ ಹಿಂದೆಯೇ ನಾನು ಬೈಕ್ ಓಡಿಸುತ್ತಿದ್ದೆ. ಕೆಳಗೆ ಬಿದ್ದು ನರಳಾಡುತ್ತಿದ್ದ ಅವರನ್ನು ತಕ್ಷಣ ಎತ್ತಿಕೊಂಡು, ರಿಕ್ಷಾದಲ್ಲಿ ಕುಳ್ಳಿರಿಸಿ ಹತ್ತಿರವೇ ಇದ್ದ ಖಾಸಗಿ ಆಸ್ಪತ್ರೆಗೆ ಸೇರಿಸಿದೆ.

ಸ್ವಲ್ಪ ಚೇತರಿಸಿದ ನಂತರ ಅವರ ಮನೆಯ ಲ್ಯಾಂಡ್ ಲೈನ್ ನಂಬರ್ ಪಡೆದು ಕರೆ ಮಾಡಿ ತಿಳಿಸಿದೆ. ಕುಟುಂಬ ಸದಸ್ಯರು ಬಂದ ನಂತರ ನಾನು ಹೊರಟೆ. ನನ್ನ ಮನೆಗೆ ಹೋಗಿ ಬಾಗಿಲು ತಟ್ಟಿದ ತಕ್ಷಣ ಪತ್ನಿ ಹೊರಬಂದು ನನ್ನ ನೋಡಿ ಗಾಬರಿಗೊಂಡಳು. ನನ್ನ ಬಿಳಿ ಶರ್ಟ್ ರಕ್ತದ ಕಲೆಗಳಿಂದ ಕೆಂಪಾಗಿತ್ತು. ಘಟನೆ ವಿವರಿಸಿದ ನಂತರ ನಿಟ್ಟುಸಿರು ಬಿಟ್ಟಳು. ಮರುದಿನ ಸಂಜೆ ಆಸ್ಪತ್ರೆಗೆ ಹೋಗಿ , ಗಾಯಗೊಂಡು ಅಡ್ಮಿಟ್ ಆದವರನ್ನು ಹುಡುಕಿದೆ. ಅವರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ ಎಂದರು. ತನ್ನನ್ನು ಆಸ್ಪತ್ರೆಗೆ ಸೇರಿಸಿದವರಾರು ಎಂದು ವಿಚಾರಿಸುವ ಗೋಜಿಗೂ ಹೋಗಲಿಲ್ಲ ಆ ಪುಣ್ಯಾತ್ಮ! ಜನ ಹೀಗೂ ಇರುತ್ತಾರೆ!" ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪತ್ರಕರ್ತರಾದ ಬಿ.ಎಂ ಹನೀಫ್ ಅವರು, ಇದು ಬೆಂಗಳೂರು ಐಟಿ ರಾಜಧಾನಿ. ಅತ್ಯುತ್ತಮ ಆಸ್ಪತ್ರೆಗಳಿವೆ. ಆದರೆ ವೈದ್ಯರಿಲ್ಲ. ಬೇಕಾದಷ್ಟು ಆ್ಯಂಬುಲೆನ್ಸ್ ಗಳಿವೆ. ಆದರೆ ಅಗತ್ಯಕ್ಕೆ ತಕ್ಷಣ ಸಿಗೋದಿಲ್ಲ. 1.40 ಕೋಟಿ ಜನರಿದ್ದಾರೆ. ಜನಸಂಖ್ಯೆ ಜಾಸ್ತಿ ಆಗ್ತಾ ಇದೆ. ಮನುಷ್ಯರ ಸಂಖ್ಯೆ ಕಡಿಮೆ ಆಗ್ತಾ ಇದೆ. ಯಾರಿಗೂ ಪುರುಸೊತ್ತಿಲ್ಲ. ಪುರುಸೊತ್ತಿದ್ದರೂ ಹೃದಯವಿಲ್ಲ. ಹೃದಯ ಇದ್ದರೂ ದಯವಿಲ್ಲ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಘಟನೆಯ ಹಿನ್ನೆಲೆ ಏನು ?

ಬೆಂಗಳೂರಿನ ಬನಶಂಕರಿಯ ಇಟ್ಟುಮಡು ಬಳಿ ಬೈಕ್‌ನಲ್ಲಿ ಹೋಗುವಾಗ ವ್ಯಕ್ತಿಯೊಬ್ಬರು ಮಾರ್ಗಮಧ್ಯಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಮಂಗಳವಾರ (ಡಿಸೆಂಬರ್ 16) ಮುಂಜಾನೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಪತ್ನಿ ಜೊತೆ ವೆಂಕಟರಮಣನ್ ಸ್ಕೂಟರ್ ಚಲಾಯಿಸಿಕೊಂಡು ಕತ್ರಿಗುಪ್ಪೆಯ ಆಸ್ಪತ್ರೆಗೆ ಹೋಗಿದ್ದರು, ದಾರಿಯಲ್ಲೇ ಅವರಿಗೆ ಲಘು ಹೃದಯಾಘಾತವಾಗಿತ್ತು. ಆಸ್ಪತ್ರೆ ತಲುಪಿದರೆ ಅಲ್ಲಿ ವೈದ್ಯರು ಇರಲಿಲ್ಲ.

ಸಕಾಲದಲ್ಲಿ ಆಂಬುಲೆನ್ಸ್ ಸೇವೆಯೂ ಸಿಗಲಿಲ್ಲ. ಸ್ಕೂಟರ್‌ನಲ್ಲೇ ವೆಂಕಟರಮಣನ್ ಹಾಗೂ ಅವರ ಪತ್ನಿ ರೂಪಾ ಅವರು ಜಯದೇವ ಆಸ್ಪತ್ರೆಗೆ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ವೆಂಕಟರಮಣನ್ ರಸ್ತೆ ಮಧ್ಯೆ ಕುಸಿದು ಬಿದ್ದಿದ್ದು, ನೋವಿನಿಂದ ಒದ್ದಾಡಿದ್ದಾರೆ. ಈ ಸಮಯದಲ್ಲಿ ಅವರ ಪತ್ನಿ ರೂಪಾ ಅವರು ಅಂಗಲಾಚಿದರೂ ಯಾರೂ ಸಹಾಯ ಮಾಡಿಲ್ಲ. 34ರ ಹರೆಯದ ವೆಂಕಟರಮಣನ್ ರಸ್ತೆಯಲ್ಲೇ ಮೃತಪಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಜನರ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+