ಬೆಂಗಳೂರು ಸ್ಪೋಟದ ರೂವಾರಿ ಮದನಿಗೆ 11 ದಿನಗಳ ಪೆರೋಲ್
ಬೆಂಗಳೂರು, ಅಕ್ಟೋಬರ್ 29: ಕಳೆದ 2008ರ ಬೆಂಗಳೂರು ಸರಣಿ ಸ್ಪೋಟದ ಪ್ರಮುಖ ಆರೋಪಿ ಹಾಗೂ ಕೇರಳದ ಪಿಡಿಪಿ ಪಕ್ಷದ ಮುಖ್ಯಸ್ಥ ಅಬ್ದುಲ್ ನಜೀರ್ ಮದನಿಗೆ ಹೈಕೋರ್ಟ್ ಸೋಮವಾರ 11 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಮದನಿ ತಾಯಿಗೆ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಪೆರೋಲ್ ನೀಡಿದ್ದು, ಇಂದೇ ರಾತ್ರಿ ಕೇರಳಕ್ಕೆ ತೆರಳಲಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಮದನಿ ಈಗಾಗಲೇ ಸುಪ್ರಿಂಕೋರ್ಟ್ ನಿರ್ದೇಶನದ ಮೇರೆಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮನೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಆತನನ್ನು ಪರಪ್ಪನ ಅಗ್ರಹಾರ ಜೈಲು ವಾಸದಿಂದ ವಿನಾಯ್ತಿ ನೀಡಿ, ಗೃಹಬಂಧನದಲ್ಲಿ ಇರಿಸಲಾಗಿದೆ. ಇದೀಗ ಪೆರೋಲ್ ಸಿಕ್ಕ ಹಿನ್ನೆಲೆಯಲ್ಲಿ ಮನೆಯಿಂದಲೇ ಕೇರಳಕ್ಕೆ ತೆರಳಲಿದ್ದಾನೆ. 11 ದಿನಗಳ ಬಳಿಕ ಬೆಂಗಳೂರು ಪೊಲೀಸರು ಮದನಿಯನ್ನು ವಾಪಸ್ ಕರೆ ತರಲಿದ್ದಾರೆ.

ಈ ಹಿಂದೆ 2013ರ ಮಾರ್ಚ್ 7ರಂದು ಪುತ್ರನ ಮದುವೆಗಾಗಿ ಐದು ದಿನಗಳ ಪೆರೋಲ್ ನೀಡಲಾಗಿತ್ತು. 2017ರಲ್ಲಿ ಮತ್ತೊಬ್ಬ ಪುತ್ರನ ಮದುವೆಗೆ ಪೆರೋಲ್ಗೆ ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ. ಈ ಮಧ್ಯೆ 2015 ಮತ್ತು 16ರಲ್ಲಿ ಮದನಿ ತನ್ನ ತಂದೆ ಹಾಗೂ ತಾಯಿಗೆ ಅನಾರೋಗ್ಯದ ಕಾರಣಕ್ಕಾಗಿ ಕೇರಳಕ್ಕೆ ಭೇಟಿ ನೀಡಲು ಪೆರೋಲ್ ಪಡೆದಿದ್ದ.












Click it and Unblock the Notifications