ಕೆಂಪೇಗೌಡ ಬಡಾವಣೆ: ತಾತ್ಕಾಲಿಕ ಪಟ್ಟಿ ಪ್ರಕಟಿಸಲು ಬಿಡಿಎ ಸಿದ್ಧತೆ
ಬೆಂಗಳೂರು, ಮೇ 19: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೈಟು ಹಂಚಿಕೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದ್ದು,ಎರಡನೇ ಹಂತದಲ್ಲಿ ಐದು ಸಾವಿರ ನಿವೇಶನ ಹಂಚಲು ಈ ತಿಂಗಳೊಳಗೆ ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲು ಬಿಡಿಎ ಸಿದ್ಧತೆ ನಡೆಸಿದೆ.
2017ರ ಮಾರ್ಚ್ನಲ್ಲೇ ತಾತ್ಕಾಲಿಕ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದರೂ, ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಈಗ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರಾಧಿಕಾರ ತನ್ನ ಪ್ರಕ್ರಿಯೆಗೆ ಮರು ಚಾಲನೆ ನೀಡಿದೆ. ಬಾಕಿ ಉಳಿದಿರುವ ಕೆಲಸವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ತಿಂಗಳೊಳಗೆ ಅರ್ಹ ಸೈಟ್ ಆಕಾಂಕ್ಷಿಗಳ ಹೆಸರು ಹೊರಬೀಳಲಿದೆ.
ಅರ್ಕಾವತಿ ಬಡಾವಣೆ: ಅನುಷ್ಠಾನ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
ನೀತಿ ಸಂಹಿತೆ ಮುನ್ನ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ನಿವೇಶನದ ಅಳತೆವಾರು ವಿಂಗಡಿಸಲಾಗಿದೆ. ಆಯಾ ವರ್ಗದ ಜನರಿಗೆ ಇಂತಿಷ್ಟು ನಿವೇಶನ ವಿತರಿಸಲು ಮೀಸಲು ನಿಯಮವನ್ನು ಅನುಸರಿಸಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದ ವೇಳೆ ಸಂಹಿತೆಯ ಬಿಸಿ ತಟ್ಟಿತ್ತು.
ಚುನಾವಣೆಗೆ ನಿಯೋಜನೆಯಾಗಿದ್ದ ಅಧಿಕಾರಿ, ಸಿಬ್ಬಂದಿ ವಾಪಸ್ ತಮ್ಮ ಕಚೇರಿಯಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಾಕಿ ಉಳಿದಿರುವ ಪ್ರಕ್ರಿಯೆ ಪೂರ್ಣಗೊಳಸಿಲು ಕೆಲ ದಿನಗಳು ಹಿಡಿಯಲಿದೆ.
ಅಂತಿಮ ಒಟ್ಟಿ ಬಳಿಕ ಠೇವಣಿ ವಾಪಸ್: ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ಹಂಚಿಕೆ ಲಭ್ಯವಾಗದಿದ್ದಲ್ಲಿ ಅಂತವರಿಗೆ ತಾವು ಪಾವತಿಸಿರುವ ಠೇವಣಿ ಹಣವನ್ನು ವಾಪಸ್ ಮಾಡಲಾಗುತ್ತದೆ. ಇದು ಅಂತಿಮ ಪಟ್ಟಿ ಪ್ರಕಟವಾದ ನಂತರವಷ್ಟೇ ಅವರವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಮೊದಲ ಹಂತದ ಸೈಟ್ ಹಂಚಿಕೆ ವೇಳೆ ಠೇವಣಿ ಹಣ ವಾಪಸ್ ತಡವಾಗಿತ್ತು. ಹೆಚ್ಚಿನ ಮಂದಿಯ ಬ್ಯಾಂಕ್ ಖಾತೆಯ ಐಎಫ್ಎಸ್ಸಿ ಸಂಖ್ಯೆ ನಮೂದಿಸದ ಕಾರಣ ಹಣ ಜಮೆಗೆ ಅಡ್ಡಿಯಾಗಿತ್ತು. ಈ ಬಾರಿ ಗೊಂದಲ ಆಗದಿರಲು ಐಎಫ್ಎಸ್ಸಿ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಿಕೊಳ್ಳಲಾಗಿದೆ.