ಬಿಬಿಎಂಪಿ: ನೀವು ಯಾರ ಪರ? ಕೇರಳದಿಂದ ಪಕ್ಷೇತರರು ನೀಡಿದ ಸ್ಪಷ್ಟನೆ
ಬೆಂಗಳೂರು, ಸೆ 5: ಮೇಯರ್ ಚುನಾವಣೆಗೆ ನಿಗದಿಯಾಗಿರುವ ಸೆಪ್ಟಂಬರ್ 11ರ ದಿನಾಂಕದೊಳಗೆ ಏನೇನು ಬೆಳವಣಿಗೆಗಳು ನಡೆಯಲಿವೆಯೋ, ಏನೇನು ರಾಜಕೀಯ ಮೇಲಾಟಕ್ಕೆ ರಾಜ್ಯ ಸಾಕ್ಷಿಯಾಗಲಿವೆಯೋ?
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಬಿಎಂಪಿ ಮೇಯರ್ ಚುನಾವಣೆಯಂತೂ ಭಾರೀ ಕುತೂಹಲವನ್ನಂತೂ ಹುಟ್ಟು ಹಾಕಿದೆ. ಕ್ಷಣಕ್ಷಣಕ್ಕೆ ತಿರುವು ಪಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ, ಪ್ರತಿತಂತ್ರ ಹಣೆಯುತ್ತಿದೆ.
ಗಾಡ್ಸ್ ಓನ್ ಕಂಟ್ರಿಯಲ್ಲಿ ಕುಟುಂಬದಿಂದ ದೂರವಾಗಿ ರೆಸಾರ್ಟಿನ ರಾಜಕೀಯ ಜೀವನವನ್ನು ಅನುಭವಿಸುತ್ತಿರುವ 6 ಮಂದಿ ಪಕ್ಷೇತರ ಅಭ್ಯರ್ಥಿಗಳು ಈ ಕ್ಷಣದವರೆಗೂ ತಮ್ಮ ನಿರ್ಧಾರ ಅಚಲ ಎಂದಿದ್ದಾರೆ. (ಗುಪ್ತಚರ ವರದಿಗೆ ಕಾಂಗ್ರೆಸ್ ಸುಸ್ತು)
ಮೇಯರ್ ಚುನಾವಣೆಗೆ ನಿರ್ಣಾಯಕ ಸ್ಥಾನದಲ್ಲಿರುವ ಆರು ಮಂದಿ ಚುನಾಯಿತ ಪಕ್ಷೇತರ ಬಿಬಿಎಂಪಿ ಸದಸ್ಯರಲ್ಲಿ (ಒಟ್ಟು 8, ತಲಾ ಒಬ್ಬರು ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದಾರೆ) ಹೆಚ್ಚಿನವರು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕ್ಷೇತ್ರದ ಜನಮನ್ನಣೆಗಳಿಸಿ ಆಯ್ಕೆಯಾದವರು.
ಇವರಲ್ಲಿ ಹೆಚ್ಚಿನವರ ಅಭಿಪ್ರಾಯ ಬಿಜೆಪಿಯವರು ಕೈಎತ್ತಿದ್ರು ಅನ್ನೋದು, ಕೇರಳದಿಂದ ಪಕ್ಷೇತರ ಅಭ್ಯರ್ಥಿಗಳು ಶ್ರಾವಣ ಶುಕ್ರವಾರದ (ಸೆ 4) ದಿನ ಹೇಳಿದ್ದೇನು?
ಚಂದ್ರಪ್ಪ ರೆಡ್ಡಿ
ನಾನು ಬಿಜೆಪಿಗೆ ನಿಷ್ಟಾವಂತನಾಗಿದ್ದೆ, ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಸಕರಿಂದಾಗಿ ನನಗೆ ಟಿಕೆಟ್ ಸಿಗಲಿಲ್ಲ. ಪಕ್ಷೇತರನಾಗಿ ಕಣಕ್ಕಿಳಿದೆ, ಮತದಾರರು ನನಗೆ ಆಶೀವರ್ದಿಸಿದರು. ಚುನಾವಣೆ ಗೆದ್ದ ಮೇಲೂ ಬಿಜೆಪಿಗೆ ಸೇರುತ್ತೇನೆಂದು ಪಕ್ಷದ ಕಚೇರಿಗೆ ಹೋಗಿದ್ದೆ. ಶಾಸಕರಾದ (ಸಿವಿ ರಾಮನ್ ನಗರ, ಅಸೆಂಬ್ಲಿ ಕ್ಷೇತ್ರ) ಎಸ್ ರಘು ಅವರ ಕುಯೋಕ್ತಿಯಿಂದ ಬಿಜೆಪಿಯವರು ನನ್ನನ್ನು ಕಡೆಗಣಿಸಿದರು. ಮೇಯರ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದು ನಿಶ್ಚಿತ - ಕೊನೇನ ಅಗ್ರಹಾರ ವಾರ್ಡಿನಿಂದ ಗೆದ್ದ ಚಂದ್ರಪ್ಪ ರೆಡ್ಡಿ. (ಚಿತ್ರದಲ್ಲಿ ಶಾಸಕ ರಘು, ಸಂಗ್ರಹ ಚಿತ್ರ)
ಎಂ.ಗಾಯತ್ರಿ
ಪಕ್ಷಕ್ಕಿಂತ ಹೆಚ್ಚಾಗಿ ಅಭ್ಯರ್ಥಿಯಾಗಿ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ದಿ ನನಗೆ ಮೊದಲ ಆದ್ಯತೆ, ಅಭಿವೃದ್ದಿ ಕೆಲಸ ಮಾಡಿ ಜನರ ವಿಶ್ವಾಸಗಳಿಸ ಬೇಕು, ಮೇಯರ್ ಚುನಾವಣೆಯಲ್ಲಿ ನನ್ನ ಮತ ಕಾಂಗ್ರೆಸ್ಸಿಗೆ ಎಂದು ಕೆಂಪಾಪುರ ವಾರ್ಡಿನ ಚುನಾಯಿತ ಅಭ್ಯರ್ಥಿ ಎಂ ಗಾಯತ್ರಿ ಕೇರಳದಿಂದ ಪ್ರತಿಕ್ರಿಯಿಸಿದ್ದಾರೆ, ಇದು ವಿಜಯನಗರ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. (ಚಿತ್ರದಲ್ಲಿ ಶಾಸಕ ಕೃಷ್ಣಪ್ಪ, ಸಂಗ್ರಹ ಚಿತ್ರ)
ಸಿ ಆರ್ ಲಕ್ಷ್ಮೀನಾರಾಯಣ್
ವಾರ್ಡಿನಲ್ಲಿ ಜನಮನ್ನಣೆಗಳಿಸಿದ ಲಕ್ಷ್ಮೀನಾರಾಯಣ್ ದೊಮ್ಮಲೂರು ವಾರ್ಡಿನಿಂದ ಪಪಕ್ಷೇತರ ಕ್ಷೇತ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ಇವರಿಗೆ ಯಾರ ಮೇಲೂ ಸಿಟ್ಟು ಇಲ್ಲ, ಮೇಯರ್ ಚುನಾವಣೆಯಲ್ಲಿ ಇವರ ಆಯ್ಕೆ ಕಾಂಗ್ರೆಸ್. ಇದು ಶಾಂತಿನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಬರುವಂತದ್ದು. (ಚಿತ್ರದಲ್ಲಿ ಶಾಸಕ ಹ್ಯಾರಿಸ್, ಸಂಗ್ರಹ ಚಿತ್ರ)
ಏಳುಮಲೈ
ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರುವ ಸಗಾಯ್ ಪುರ ವಾರ್ಡಿನ ಪಕ್ಷೇತರ ಅಭ್ಯರ್ಥಿ ಏಳುಮಲೈ ಕೂಡಾ ಕೇರಳದ ರಿಸಾರ್ಟಿನಲ್ಲಿದ್ದಾರೆ. ಇದು ಪುಲಿಕೇಶಿನಗರ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್. ಮಗುದೊಮ್ಮೆ ಅವರು ಉದ್ಘರಿಸಿದ್ದು ನನ್ನ ಬೆಂಬಲ ಕಾಂಗ್ರೆಸ್ - ಜೆಡಿಎಸ್ ಮೈತ್ರಿಗೆ. (ಚಿತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್, ಸಂಗ್ರಹ ಚಿತ್ರ)
ಎಸ್.ರಮೇಶ್ (ಮಾರತಹಳ್ಳಿ ವಾರ್ಡ್)
ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದ ಎಸ್ ರಮೇಶ್, ಶಾಸಕರ ಜೊತೆಗಿನ ಭಿನ್ನಾಭಿಪ್ರಾಯದಿಂದ ಬೇಸತ್ತು ಪಕ್ಷೇತರರಾಗಿ ಕಣಕ್ಕಿಳಿದರು, ಮತದಾರ ಬೆನ್ನುತಟ್ಟಿದ್ದರು. ಅರವಿಂದ್ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಅಸೆಂಬ್ಲಿ ವ್ಯಾಪ್ತಿಗೆ ಬರುವ ರಮೇಶ್ ಮತ್ತು ಲಿಂಬಾವಳಿ ನಡುವೆ ಅಷ್ಟಕಷ್ಟೇ. ಇವರು ನನ್ನ ನಿರ್ಧಾರ ಅಚಲ, ಇದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ನಾನು ಬಿಜೆಪಿ ವಿರುದ್ದ ಮತಚಲಾಯಿಸಲಿದ್ದೇನೆಂದು ಕೇರಳದಿಂದ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. (ಚಿತ್ರದಲ್ಲಿ ಶಾಸಕ ಲಿಂಬಾವಳಿ, ಸಂಗ್ರಹ ಚಿತ್ರ)
ಆನಂದ್ ಕುಮಾರ್
ಹೊಯ್ಸಳ ನಗರ ವಾರ್ಡಿನಿಂದ ಆಯ್ಕೆಯಾಗಿದ್ದ ಆನಂದ ಕುಮಾರ್ ಕೂಡಾ ಮೂಲ ಬಿಜೆಪಿ ಸದಸ್ಯರು. ಇವರದ್ದೂ ನನ್ನನ್ನು ಬಿಜೆಪಿಯವರು ಕಡೆಗಣಿಸಿದರು ಎನ್ನುವ ಸಿಟ್ಟು. ಈ ವಾರ್ಡ್ ಸಿ ವಿ ರಾಮನ್ ನಗರ ಅಸೆಂಬ್ಲಿ ಕ್ಷೇತ್ರಕ್ಕೆ ಬರುತ್ತದೆ. ಬಿಜೆಪಿಯ ಯಾವುದೇ ಆಮಿಷಕ್ಕೆ ನಾನು ಒಳಗಾಗುವುದಿಲ್ಲ, ನನ್ನ ಮತ ಕಾಂಗ್ರೆಸ್ಸಿಗೆ. ಆಡಳಿತ ಪಕ್ಷದ ಜೊತೆಗಿದ್ದರೆ ಅಭಿವೃದ್ದಿ ಕೆಲಸಕ್ಕೆ ಸುಲಭವಾಗುತ್ತೆ ಎನ್ನುತ್ತಾರೆ ಆನಂದ್ ಕುಮಾರ್. (ಚಿತ್ರದಲ್ಲಿ ಶಾಸಕ ರಘು, ಸಂಗ್ರಹ ಚಿತ್ರ)