ಬಿಬಿಎಂಪಿ ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ನವೆಂಬರ್ 25: ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವ ಸಂಬಂಧ ಸಲ್ಲಿಸಿದ್ದ ಅರ್ಜಿ ಕುರಿತ ವಾದ ಮತ್ತು ಪ್ರತಿವಾದ ಆಲಿಸಿರುವ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ. ಅರ್ಜಿದಾರರ ವಾದ ಮತ್ತು ಪ್ರತಿವಾದವನ್ನು ಆಲಿಸಿದ ಪೀಠ ತೀರ್ಪನ್ನು ಮುಂದೂಡಿದೆ.
Recommended Video
ಬೆಂಗಳೂರು ಮಹಾ ನಗರ ಪಾಲಿಕೆಗೆ ಚುನಾವಣೆ ಮಾಡಬೇಕು. ಸದಸ್ಯರ ಅವಧಿ ಮುಗಿದಿದೆ. ಸಂವಿಧಾನ ಬದ್ಧವಾಗಿ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸಬೇಕು. ವಾರ್ಡ್ ಪುನರ್ ವಿಂಗಡಣೆ ನೆಪದಲ್ಲಿ ಚುನಾವಣೆ ಮುಂದೂಡುವ ದುರುದ್ದೇಶ ಹೊಂದಿದೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವರಾಜ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಚುನಾವಣೆ ಆಯೋಗ ಕೂಡ ಪ್ರಮಾಣ ಪತ್ರ ಸಲ್ಲಿಸಿದ್ದು, ಆಯೋಗ ಸಹ ಚುನಾವಣೆ ನಡೆಸಲು ಸಿದ್ಧವಿದೆ. ಈಗಾಗಲೇ ಪರಿಷ್ಕೃತ ಮತದಾರರ ಪಟ್ಟಿ ತಯಾರಿ ಮಾಡಲಾಗಿದೆ. ಇದಕ್ಕಾಗಿ ಮೂರು ಕೋಟಿ ರೂಪಾಯಿ ಕೂಡ ಆಯೋಗ ವೆಚ್ಚ ಮಾಡಿದೆ. ಚುನಾವಣೆ ಮುಂದೂಡಿದರೆ ಸಾರ್ವಜನಿಕ ಹಣ ವ್ಯರ್ಥವಾಗಲಿದೆ. ಆಡಳಿತಾತ್ಮಕ ದೃಷ್ಟಿಯಿಂದ ತ್ವರಿತವಾಗಿ ಚುನಾವಣೆ ನಡೆಸುವುದು ಸೂಕ್ತ ಎಂದು ರಾಜ್ಯ ಚುನಾವಣಾ ಆಯೋಗ ಕೂಡ ತನ್ನ ವಾದ ಮಂಡಿಸಿದೆ.

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಬೆಂಗಳೂರು ಮೊದಲಿಗಿಂತಲೂ ಬೃಹದಾಕಾರವಾಗಿ ಬೆಳೆದು ನಿಂತಿದೆ. ಹೀಗಾಗಿ ಮೊದಲಿಗಿಂತಲೂ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹೀಗಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಶೀಘ್ರವಾಗಿ ಚುನಾವಣೆ ನಡೆಸಲಗುವುದು ಎಂದು ವಾದ ಮಂಡಿಸಿದರು. ಎರಡೂ ಕಡೆ ವಾದಗಳು ಪೂರ್ಣಗೊಂಡಿದ್ದು, ಮುಖ್ಯ ನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಬೆಂಗಳೂರಿನ ಬೃಹತ್ ಮಹಾ ನಗರ ಪಾಲಿಕೆ ಸದ್ಯ 198 ವಾರ್ಡ್ ಒಳಗೊಂಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ಮಾಡಿ 250 ವಾರ್ಡ್ ಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಬಿಜೆಪಿ ಶಾಸಕ ರಘು ಅವರ ಅಧ್ಯಕ್ತತೆಯಲ್ಲಿ ರಚಿಸಿದ್ದ ಕಮಿಟಿ ಬೆಂಗಳೂರಿನ ಜನ ಸಂಖ್ಯೆಗೆ ಅನುಗುಣವಾಗಿ ವಾರ್ಡ್ ಗಳನ್ನು ಹೆಚ್ಚಿಸುವ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರಿಗೆ ವರದಿ ನೀಡಿದ್ದರು. ವರದಿಯಲ್ಲಿ ಬೆಂಗಳೂರಿನಲ್ಲಿ ಜನ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ 250 ವಾರ್ಡ್ ಸೃಜಿಸಲು ಸಮಿತಿ ಅಭಿಪ್ರಾಯ ಪಟ್ಟಿತ್ತು. ಇದೇ ವಿಚಾರವಾಗಿ ಚುನಾವಣೆ ಮುಂದೂಡಲಾಗಿತ್ತು.












Click it and Unblock the Notifications