ಮತದಾನ ಪ್ರಮಾಣ ಇಳಿಕೆ ಕಾರಣ ಬಿಚ್ಚಿಟ್ಟ ಎಚ್ಡಿಕೆ
ಬೆಂಗಳೂರು, ಆಗಸ್ಟ್ 23: ಬೆಂಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ಮೂಲ ನಿವಾಸಿಗಳಿಗಿಂತ ಹೊರಗಿನವರೇ ಜಾಸ್ತಿ ಇದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ. ಬಿಬಿಎಂಪಿ ವಿಭಜನೆ ಮಾಡಿದರೆ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಕನ್ನಡೇತರರು ಮತದಾನ ಮಾಡದಿರುವುದು ಸೇರಿದಂತೆ ಯುವ ಜನತೆ ತಮ್ಮ ಹಕ್ಕು ಚಲಾಯಿಸಲು ಹಿಂದೇಟು ಹಾಕಿರುವುದು ಶೇಕಡಾವಾರು ಮತದಾನ ಪ್ರಮಾಣ ಇಳಿಕೆಗೆ ಕಾರಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಭಾರತೀಯರು, ಆಂಧ್ರದವರು, ತಮಿಳುನಾಡಿನವರು ಎಲ್ಲರಿಗೂ ಮತದಾನದ ಹಕ್ಕು ಇಲ್ಲಿಯೇ ಇದ್ದರೂ ಅದು ಕೇವಲ ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಎಂದಂತಾಗಿದ್ದು ಬೆಂಗಳೂರಿನ ದುರ್ದೈವ ಎಂಬ ಸಂಗತಿ ಕುಮಾರಸ್ವಾಮಿ ಅವರಿಗೆ ಅರಿವಾಗಿದೆ. [ಮತದಾನ ಕಡಿಮೆಯಾಗಲು ಕಾರಣವೇನು?]

ಬೆಂಗಳೂರಿನಲ್ಲಿ ನೆಲೆಸಿರುವ ಶೇ.60ಕ್ಕೂ ಹೆಚ್ಚು ಸಂಖ್ಯೆಯ ಕನ್ನಡೇತರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ ಎಂದು ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡೇತರರಿಗೆ ಎಲ್ಲಾ ಸೌಲಭ್ಯಗಳು ಬೇಕು. ಆದರೆ ಮತದಾನ ಮಾತ್ರ ಬೇಡ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿಯೂ ಸಹ ಕಡಿಮೆ ಮತದಾನವಾಗಿತ್ತು. ಮತ ಹಕ್ಕು ಚಲಾವಣೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅದು ಈ ಬಾರಿಯೂ ಫಲ ನೀಡಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಸಮೀಕ್ಷೆ: ಸಮೀಕ್ಷೆಗಳ ಬಗ್ಗೆ ನನಗೆ ಅಷ್ಟಾಗಿ ತಿಳಿದಿಲ್ಲ. ಅಂತಿಮವಾಗಿ ಜನರು ನೀಡುವ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಬೆಂಗಳೂರಿನ ಹೊರ ವಲಯದ ವಾರ್ಡ್ ಗಳಲ್ಲಿ ಜೆಡಿಎಸ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಮೈತ್ರಿ ಬಗ್ಗೆ ಯೋಚಿಸೋಣ. ಬೇರೆ ಪಕ್ಷಗಳ ಜೊತೆ ಮೈತ್ರಿ ಬಗ್ಗೆ ಈಗಲೇ ಪ್ರತಿಕ್ರಿಯಿಸಲಾರೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications