ನನ್ನದು ಅಕ್ಷರಶಃ ಸ್ವಚ್ಛ ರಾಜಕಾರಣ - ಎಂಎಲ್ಎ
"ಚಿಕ್ಕಮಗಳೂರಿನಲ್ಲಿ ಜಮೀನು ನೋಡಿಕೊಂಡು ಉಳಿದ ಜೀವನ ಕಳೆಯಬೇಕೆಂದು ಮನಸು ಸದಾ ಹಂಬಲಿಸುತ್ತಿರುತ್ತದೆ. ಈ ರಾಜಕೀಯ ಸಾಕಾಗಿ ಹೋಗಿದೆ. ಅಕ್ಷರಶಃ ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದವನು. ಒಂದೇ ಒಂದು ಸೈಟಿಗಾಗಿ ಕೈಯೊಡ್ಡಿದವನಲ್ಲ. ಎಂಟಾಣಿಯಷ್ಟು ಅಕ್ರಮ ಆಸ್ತಿ ಮಾಡಿದ್ದೇನೆಂದು ಯಾರಾದ್ರೂ ಪ್ರೂವ್ ಮಾಡಿದರೆ ರಾಜಕೀಯಕ್ಕೇ ಗುಡ್ ಬೈ ಹೇಳಿ ಹಳ್ಳಿಗೆ ಮರಳಿಬಿಡುತ್ತೇನೆ..."
ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆ, ಮಾಸ್ತಿ, ನಿಸಾರ್, ಡಿವಿಜಿ, ಅನಕೃ, ಲಂಕೇಶ್ ಮುಂತಾದ ಸಾರಸ್ವತ ಲೋಕದ ದಿಗ್ಗಜ ಸಾಹಿತಿಗಳು ಜೀವಿಸಿದಂಥ ಪ್ರದೇಶ, ಗಲ್ಲಿಗಲ್ಲಿಗಳಲ್ಲಿ ಗುಡಿಗಳನ್ನು ಹೊಂದಿರುವಂಥ, ಹೆಚ್ಚಾಗಿ ಕನ್ನಡಿಗರು ಮತ್ತು ಅಕ್ಷರಸ್ಥರು ವಾಸಿಸುವ, ಬೆಂಗಳೂರಿನ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಬಸವನಗುಡಿ ವಿಧಾನಸಭೆ ಕ್ಷೇತ್ರವನ್ನು ಸತತ ಎರಡು ಅವಧಿಗಳಿಂದ ಪ್ರತಿನಿಧಿಸುತ್ತಿರುವ 56 ವರ್ಷದ ರವಿ ಸುಬ್ರಮಣ್ಯ ಅವರ ಮನದಾಳದ ಮಾತುಗಳಿವು.
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಅತ್ಲಾಗಿರಲಿ, ಚುನಾವಣೆಗೆ ಟಿಕೆಟ್ ಸಿಕ್ರೆ ಸಾಕು ಅಂತ ಕಾಯೋರು ಸಹಸ್ರ ಜನರಿರುವಾಗ, ರವಿ ಸುಬ್ರಮಣ್ಯರವರು ಹಳ್ಳಿಗೆ ಹೋಗುವ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಹುರುಳು ಇಲ್ಲದಿಲ್ಲ. ಬೆಂಗಳೂರನ್ನು ನಿಭಾಯಿಸಲು ಬಿಬಿಎಂಪಿ, ಬಿಡಿಎ, ಪೊಲೀಸ್ ಇಲಾಖೆ, ನೂರಾಎಂಟು ಟಾಸ್ಕ್ ಫೋರ್ಸ್ ಗಳಿರುವಾಗ ಎಂಎಲ್ಎಗೆ ಏನು ಕೆಲಸ? ಹೋಗಲಿ, ಅವರ ಮಾತನ್ನಾದರೂ ಯಾರು ಕೇಳ್ತಾರೆ? ಶಾಸಕರಾಗಿ 18 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಒನ್ಇಂಡಿಯಾ ಜೊತೆ ಮಾತು ಆಡಾಡುತ್ತಲೇ ರವಿ ಸುಬ್ರಮಣ್ಯ ಆತ್ಮವಿಮರ್ಶೆಯಲ್ಲಿ ಮುಳುಗಿದರು.
ಬೆಂಗಳೂರಿನ ಹೊರಗಿರುವ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕನಿಗೆ ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಕಂದಾಯ ಇಲಾಖೆಗಳ ಮೇಲೆ ಹಿಡಿತವಿರುತ್ತದೆ, ತನ್ನ ಮಾತು ಇವರು ಕೇಳುತ್ತಾರೆ ಎಂಬ ನಂಬಿಕೆಯಿರುತ್ತದೆ. ಆದರೆ, ಇಂಥ ಅದೃಷ್ಟ ಬೆಂಗಳೂರಿನ ಶಾಸಕನಿಗೆ ಇರುತ್ತದಾ? ಬೆಂಗಳೂರಿನಲ್ಲಿ 28 ಎಂಎಲ್ಎಗಳಿದ್ದಾರೆ. ಅವರು ಸ್ವತಂತ್ರವಾಗಿ, ಬಿಬಿಎಂಪಿ, ಬಿಡಿಎಗಳ ಹಂಗಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದಾ ಎಂದು ಪ್ರಶ್ನಿಸುತ್ತಾರೆ ರವಿ.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಧುರೀಣ, ಮಾಜಿ ಮೇಯರ್ ಕೆ ಚಂದ್ರಶೇಖರ್ ಅವರನ್ನು, 2013ರಲ್ಲಿ ಜೆಡಿಎಸ್ ಅಭ್ಯರ್ಥಿ ಬಾಗೇಗೌಡ ಅವರನ್ನು 19 ಸಾವಿರ ಮತಗಳಿಂದ ಸೋಲಿಸಿ, ಕಾಂಗ್ರೆಸ್ ನ ಬಿಕೆ ಚಂದ್ರಶೇಖರ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ ರವಿ ಸುಬ್ರಮಣ್ಯ, ರಾಜ್ಯ ಕಂಡಿರುವ ಜನಾನುರಾಗಿ ರಾಜಕಾರಣಿಗಳಲ್ಲಿ ಒಬ್ಬರು. ಸದಾ ಬಸವನಗುಡಿ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಜಪಿಸುತ್ತಲೇ ಇರುವ ಅವರು, ತಮ್ಮ ಕನಸಿನ ಯೋಜನೆಗಳಾದ ನೀರು ಸರಬರಾಜು ಪೈಲಟ್ ಪ್ರಾಜೆಕ್ಟ್, ಸರಕಾರಿ ಶಾಲೆಗಳ ಉನ್ನತೀಕರಣ, ಬಸವನಗುಡಿ ಹೆರಿಟೇಜ್ ಕಾರಿಡಾರ್ ಮುಂತಾದ ಯೋಜನೆ ಮತ್ತು ಸವಾಲುಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. [ಬಸವನಗುಡಿಯಲ್ಲಿ ಗೆದ್ದವರು ಸೋತವರು]