ದೂರು ವಾಪಸ್ ಪಡೆ ಇಲ್ಲಾಂದ್ರೆ ಅಷ್ಟೇ..!

ಅತ್ಯಾಚಾರ ಸಂಬಂಧ ಇನ್ಸ್ಪೆಕ್ಟರ್ ವಿರುದ್ಧ ನೀಡಲಾಗಿರುವ ದೂರು ವಾಪಸ್ ಪಡೆಯಿರಿ, ಇಲ್ಲದಿದ್ರೆ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ದುಷ್ಕರ್ಮಿಗಳು ಬೆದರಿಸಿ ತಮಗೆ ಕರೆ ಮಾಡುತ್ತಿದ್ದಾರೆ ಎಂದು ಯುವತಿ ಮತ್ತು ಸ್ನೇಹಿತ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಭೇಟಿ ಮಾಡಿ ನಮಗೆ ಮತ್ತು ಕುಟುಂಬದವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ದೂರನ್ನು ಪುಲಿಕೇಶಿನಗರ ಎಸಿಪಿ ನೂರುಲ್ಲಾ ಷರೀಫ್ ಅವರ ಸುಪರ್ದಿಗೆ ಆಯುಕ್ತರು ವರ್ಗಾಯಿಸಿದ್ದಾರೆ. ಯುವತಿಯ ಕುಟುಂಬಕ್ಕೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದ್ದು, ಬೆದರಿಕೆ ಕರೆಗಳು ಬಂದಿರುವ ದೂರವಾಣಿ ಸಂಖ್ಯೆಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.[ಪೊಲೀಸರಿಗೆ ಯುವತಿ ನೀಡಿದ ದೂರಿನಲ್ಲಿ ಏನಿದೆ?]
ಅಮಾನತು ಹಿಂಪಡೆಯುವಂತೆ ಪ್ರತಿಭಟನೆ: ಪುಲಿಕೇಶಿನಗರದ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಪುಲಿಕೇಶಿನಗರ ಠಾಣೆಯ ಎದುರು ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ಮಾಡಿದರು. ರಫೀಕ್ ಅವರು ಬಂದ ಮೇಲೆ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ, ದಕ್ಷ ಅಧಿಕಾರಿಯನ್ನು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡು ಅಮಾನತುಗೊಳಿಸಲಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.[ಅತ್ಯಾಚಾರ ಪ್ರಕರಣ : ಯಾರು, ಏನು ಹೇಳಿದರು?]
ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಎಸ್ಐ: ದೂರು ದಾಖಲಾಗಿ ಆರೋಪಿಯನ್ನು ಬಂಧಿಸಿದ್ದರೂ, ಎಸ್ಐ ರಫೀಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಮಾಧ್ಯಮಗಳಲ್ಲಿ ಮಂಗಳವಾರ ವರದಿ ಪ್ರಕಟಗೊಂಡ ಬಳಿಕವಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಘಟನೆ ವಿವರ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications