ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ರಾಜಧಾನಿಯಾದ್ಯಂತ ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಬಂದ್!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರ ಹಸಿವು ನೀಗಿಸುವ ಹಾಗೂ ನಗರದ ಬೆನ್ನೆಲುಬಾಗಿರುವ ಸಣ್ಣ ವ್ಯಾಪಾರಿಗಳು ಇದೀಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೀದಿಗಿಳಿದಿದ್ದಾರೆ. ನಗರದಾದ್ಯಂತ ಇರುವ ಸುಮಾರು 58 ಸಾವಿರಕ್ಕೂ ಅಧಿಕ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ ಅಂಗಡಿಗಳು, ವೀಳ್ಯದೆಲೆ ಅಂಗಡಿಗಳು ಹಾಗೂ ಸಣ್ಣ ಪುಟ್ಟ ಬೀದಿಬದಿ ವ್ಯಾಪಾರಿಗಳು ಇಂದು (ಜೂನ್ 18) ಅನಿರ್ದಿಷ್ಟಾವಧಿ ಬೆಂಗಳೂರು ಬೇಕರಿ ಬಂದ್ ನಡೆಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕ ಕಾರ್ಮಿಕ ಪರಿಷತ್ ಈ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದು, ಇದು ನಗರದ ಜನಜೀವನದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆಯಿದೆ. ಉದ್ಯೋಗ ಅರಸಿ ಬರುವ ಲಕ್ಷಾಂತರ ಯುವಕರು, ಐಟಿ ಉದ್ಯೋಗಿಗಳು, ಕೂಲಿ ಕಾರ್ಮಿಕರು ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿ ಊಟದ ತನಕ ಈ ಸಣ್ಣ ಅಂಗಡಿಗಳನ್ನೇ ನಂಬಿಕೊಂಡಿದ್ದಾರೆ. ಆದರೆ ಇಂದಿನ ಈ ದಿಢೀರ್ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಹಾಲು, ಟೀ, ಕಾಫಿ ಮತ್ತು ದಿನನಿತ್ಯದ ತಿಂಡಿ ಸಿಗುವುದು ತೀರಾ ಕಷ್ಟಕರವಾಗಲಿದೆ.

ಕಾಂಡಿಮೆಂಟ್ಸ್ ಮುಷ್ಕರ: ಬಂದ್ಗೆ ಪ್ರಮುಖ ಕಾರಣಗಳು
ನಗರದಲ್ಲಿ ಪ್ರಾಮಾಣಿಕವಾಗಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ನಿರಂತರ ಕಿರುಕುಳವೇ ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ. ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳ ಕಿರುಕುಳ, ಪ್ಲಾಸ್ಟಿಕ್ ನಿಷೇಧ ಮತ್ತು ಕೋಟ್ಪಾ (COTPA) ಕಾಯ್ದೆಯ ನೆಪದಲ್ಲಿ ಅಧಿಕಾರಿಗಳು ನೀಡುತ್ತಿರುವ ಅನಗತ್ಯ ತೊಂದರೆ ಹಾಗೂ ಸ್ಥಳೀಯ ಪುಡಿ ರೌಡಿಗಳ ಹಫ್ತಾ ವಸೂಲಿಯಿಂದ ವ್ಯಾಪಾರಿಗಳು ಸಂಪೂರ್ಣವಾಗಿ ರೋಸಿಹೋಗಿದ್ದಾರೆ.
ಈ ಪ್ರತಿಭಟನೆಯು ಇಂದು ಮುಂಜಾನೆ 5 ಗಂಟೆಯಿಂದಲೇ ಆರಂಭವಾಗಿದ್ದು, ಸಾವಿರಾರು ವ್ಯಾಪಾರಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೇರಿ ತಡರಾತ್ರಿ 11 ಗಂಟೆಯವರೆಗೂ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ವ್ಯಾಪಾರಿಗಳು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ
ಒಂದೇ ಪರವಾನಗಿಗೆ ಆಗ್ರಹ: ಪ್ರಸ್ತುತ, ಬೇಕರಿ ಮತ್ತು ಕಾಂಡಿಮೆಂಟ್ಸ್ಗಳಲ್ಲಿ ಸಿಗರೇಟ್, ಆಹಾರ ಪದಾರ್ಥ, ಟೀ ಮತ್ತು ಕಾಫಿ ಮುಂತಾದ ವಸ್ತುಗಳನ್ನು ಮಾರಾಟ ಮಾಡಲು ಪ್ರತ್ಯೇಕ ಲೈಸೆನ್ಸ್ (ಪರವಾನಗಿ) ಪಡೆಯುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಇದರ ಬದಲಾಗಿ, ಈ ಎಲ್ಲಾ ರೀತಿಯ ವ್ಯಾಪಾರಗಳನ್ನು ಸುಲಲಿತವಾಗಿ ನಡೆಸಲು ಅನುಕೂಲವಾಗುವಂತೆ ಕೇವಲ ಒಂದೇ ಪರವಾನಗಿ ನೀಡಬೇಕು ಎಂದು ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ರೌಡಿಗಳ ಹಾವಳಿ ನಿಯಂತ್ರಣ: ಪ್ರತಿನಿತ್ಯ ಬೆಳಗಾಗುವಷ್ಟರಲ್ಲಿ ಅಂಗಡಿ ಮಾಲೀಕರಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಮತ್ತು ಹಣ ನೀಡದಿದ್ದರೆ ಬೆದರಿಕೆ ಹಾಕುವ ಪುಡಿ ರೌಡಿಗಳಿಂದ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ. ಈ ಹಫ್ತಾ ವಸೂಲಿ ದಬ್ಬಾಳಿಕೆಗೆ ಪೊಲೀಸ್ ಇಲಾಖೆ ಕೂಡಲೇ ಬ್ರೇಕ್ ಹಾಕಬೇಕು ಎಂದು ಒಕ್ಕೂಟ ಕಟ್ಟುನಿಟ್ಟಾಗಿ ಒತ್ತಾಯಿಸಿದೆ.
ತಂಬಾಕು ಉತ್ಪನ್ನಗಳ ಜಪ್ತಿ ನಿಲ್ಲಿಸಿ: ಕೋಟ್ಪಾ ಕಾಯ್ದೆ ಉಲ್ಲಂಘನೆಯ ನೆಪದಲ್ಲಿ ಕೆಲವು ಅಧಿಕಾರಿಗಳು ಏಕಾಏಕಿ ಅಂಗಡಿಗಳಿಗೆ ನುಗ್ಗಿ, ವ್ಯಾಪಾರಿಗಳು ತಮ್ಮ ಸ್ವಂತ ಹಣ ಕೊಟ್ಟು ಖರೀದಿಸಿದ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಜಪ್ತಿ ಮಾಡುತ್ತಿದ್ದಾರೆ. ಅತ್ಯಂತ ಸಣ್ಣ ಲಾಭಾಂಶದಲ್ಲಿ ದಿನದೂಡುವ ವ್ಯಾಪಾರಿಗಳಿಗೆ ಇದರಿಂದ ಭಾರಿ ಆರ್ಥಿಕ ನಷ್ಟ ಉಂಟಾಗುತ್ತಿದೆ. ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಕಾನೂನಿನಡಿ ಅವಕಾಶ ನೀಡಬೇಕು, ಇಲ್ಲವಾದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂಬುದು ವ್ಯಾಪಾರಿಗಳ ಪ್ರಮುಖ ಬೇಡಿಕೆಯಾಗಿದೆ.
ಕೇವಲ ಸಣ್ಣ ಲಾಭದಲ್ಲಿ ತಮ್ಮ ಕುಟುಂಬದ ಜೀವನ ಸಾಗಿಸುವ ಈ ಬಡ ವ್ಯಾಪಾರಿಗಳ ಮೇಲೆ ಕಾನೂನಿನ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಒಂದು ವೇಳೆ ಸರ್ಕಾರ ತಮ್ಮ ಈ ನ್ಯಾಯಬದ್ಧ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂಬರುವ ದಿನಗಳಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳ ಮನೆ ಹಾಗೂ ಕಚೇರಿಗಳ ಎದುರು ಉಗ್ರ ಹೋರಾಟ ನಡೆಸುವುದಾಗಿ ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.














Click it and Unblock the Notifications