ಬಿಎಸ್ ವೈ ಊರಿನ ಚಾಲಕ 60 ಲಕ್ಷ ಎಟಿಎಂ ಹಣದೊಂದಿಗೆ ಜೂಟ್ !
ಬೆಂಗಳೂರು, ಫೆಬ್ರವರಿ 03: ಎಟಿಎಂಗೆ ತುಂಬಲು ತಂದಿದ್ದ 60 ಲಕ್ಷ ರೂ. ಹಣದ ಸಮೇತ ಸೆಕ್ಯೂರ್ ವ್ಯಾಲ್ಯೂ ಕಂಪನಿಯ ಚಾಲಕ ಎಸ್ಪೇಪ್ ಆಗಿದ್ದಾನೆ.
ಬಿಎಸ್ ಯಡಿಯೂರಪ್ಪ ಅವರ ಹುಟ್ಟೂರಾದ ಬೂಕನಕೆರೆಯ ನಿವಾಸಿ ಯೋಗೀಶ್ ಹಣ ಸಮೇತ ಪರಾರಿಯಾಗಿರುವ ಚಾಲಕ. ಈತ ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ವಿವಿಧ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಹಾಗೂ ತುಂಬಿದ ಹಣ ಪಡೆದು ಬೇರೆ ಎಟಿಎಂ ಗಳಿಗೆ ಹಾಕುವ ಗುತ್ತಿಗೆ ಪಡೆದಿರುವ ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಹಲವು ವರ್ಷಗಳಿಂದಲೂ ಯೋಗೀಶ್ ಕಾರ್ಯ ನಿರ್ವಹಿಸುತ್ತಿದ್ದ.
ಸುಬ್ರಮಣ್ಯನಗರದಲ್ಲಿ ಎಟಿಎಂ ನಿಂದ ಸುಮಾರು 60 ಲಕ್ಷ ರೂ. ಹಣವನ್ನು ಎರಡು ಬ್ಯಾಗ್ ನಲ್ಲಿ ಸಂಗ್ರಹಿಸಿದ್ದ. ಆ ಹಣವನ್ನು ಸೆಕ್ಯೂರ್ ವ್ಯಾಲ್ಯೂ ಕಂಪನಿ ಜೀಪಿನಲ್ಲಿ ಕಂಪನಿಗೆ ತಲುಪಿಸಬೇಕಿತ್ತು. ಸುಬ್ರಮಣ್ಯನಗರದಲ್ಲಿ ಮಂಗಳವಾರ ಸಂಜೆ ಮೂರು ಗಂಟೆ ಸುಮಾರಿನಲ್ಲಿ ಎಟಿಎಂ ಗಳಿಂದ ಹಣ ಸಂಗ್ರಹಿಸಿದ್ದ ಯೋಗೀಶ್ 60 ಲಕ್ಷ ಹಣದ ಸಮೇತ ಪರಾರಿಯಾಗಿದ್ದಾನೆ. ಈತನಿಗಾಗಿ ಸೆಕ್ಯೂರ್ ವ್ಯಾಲ್ಯೂ ಕಂಪನಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಬಳಿಕ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Recommended Video
ಸಾಮಾನ್ಯವಾಗಿ ಎಟಿಎಂ ಹಣ ಸಾಗಿಸುವ ವಾಹನ ಭದ್ರತೆಗೆ ಗನ್ ಮ್ಯಾನ್ ಗಳನ್ನು ನಿಯೋಜಿಸಲಾಗುತ್ತದೆ. ಆದರೆ, ಯೋಗೀಶ್ ಚಾಲನೆ ಮಾಡುತ್ತಿದ್ದ ಜೀಪ್ ಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿರಲಿಲ್ಲವೇ ? ಅವರು ಕೂಡ ಹಣ ಎಸ್ಕೇಫ್ ಮಾಡುವ ಯೋಜನೆಯಲ್ಲಿ ಭಾಗಿಯಾಗಿದ್ದಾರಾ ? ಎಂಬ ಸಂಶಯ ವ್ಯಕ್ತವಾಗಿದೆ. ಹಣ ಸಮೇತ ಎಸ್ಪೇಪ್ ಆಗಿರುವ ಚಾಲಕ ಯೋಗೀಶ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.