ಚಳಿಗಾಲದ ಸಮೃದ್ಧ ಬೆಳೆ: ಅವರೆ ಸೊಗಡನ್ನು ಸವಿದವರೇ ಬಲ್ಲರು!
ಬೆಂಗಳೂರು, ಜನವರಿ 04 : ಚುಮು ಚುಮು ಚಳಿ ಬೆಂಗಳೂರಿಗರನ್ನು ಆವರಿಸುತ್ತಿರುವ ಸಮಯದಲ್ಲಿ ಬೆಚ್ಚನೆ ಕುಳಿತು ತಿನ್ನುವ ಅವರೇ ಕಾಯಿ ಮೇಳ ಪ್ರಾರಂಭವಾಗಿದೆ.
ಮಾಗಡಿ, ಕೋಲಾರ, ಚಿಂತಾಮಣಿ, ಚಿಕ್ಕ ಬಳ್ಳಾಪುರ, ದೊಡ್ಡ ಬಳ್ಳಾಪುರದಿಂದ ಬಂದು ಸೇರುವ ಅವರೆಕಾಯಿ ನಗರದ ಜನರ ಬಾಯಲ್ಲಿ ವಿವಿಧ ಭಕ್ಷ್ಯಗಳು ಸೇರಿ ನೀರೂರಲಿದೆ.
In Pics: ಅವರೆ ಮೇಳ ಮತ್ತೆ ಬಂತು...ವಿ.ವಿ.ಪುರಂಗೆ ಬನ್ನಿ
ಚಳಿಗಾಲದ ಮಂಜಿನಲ್ಲಿ ಸಮೃದ್ಧವಾಗಿ ಬೆಳೆಯುವ ಅವರೆಕಾಯಿ ಹಳೆ ಮೈಸೂರು ಪ್ರಾಂತ್ಯದ ಬಹುಮುಖ್ಯ ಬೆಳೆ. ಅವರೆ ಸೊಗಡನ್ನು ಸವಿದವರೆ ಬಲ್ಲರು. ಅವರೆ ಬೇಳೆ ಮೇಳ ಜನವರಿ 4 ರಂದು ಪ್ರಾರಂಭವಾಗಿದ್ದು ಜನವರಿ 15 ರವರೆಗೆ ನಡೆಯಲಿದೆ. ಬೆಳಗ್ಗೆ 11 ರಿಂದ ರಾತ್ರಿ 10 ರವರೆಗೆ ನಡೆಯಲಿದೆ.
ವಿವಿಧ ಬಗೆಯ ಸಿಹಿ ತಿಂಡಿಗಳು ಒಂದೆಡೆಯಾದರೆ ನಾನಾ ಬಗೆಯ ಅವರೆ ಸಾರು, ಕಜ್ಜಾಯಗಳೂ ರುಚಿಮೊಗ್ಗು ಅರಳಿಸುತ್ತಿದೆ. ನಗರದ ಸಜ್ಜನ್ ರಾವ್ ವೃತ್ತದ ಶ್ರೀ ವಾಸವಿ ಕಾಂಡಿಮೆಂಟ್ಸ್ ಅವರೆಕಾಳು ಮತ್ತು ಬೇಳೆಯಲ್ಲಿ ತಯಾರಿಸಿದ ನೂರಾರು ಭಕ್ಷ್ಯಗಳನ್ನೊಳಗೊಂಡ 17 ನೇ ವರ್ಷದ ಅವರೆ ಬೇಳೆ ಮೇಳಕ್ಕೆ ಗುರುವಾರ ವಿಧಾನ ಪರಿಷತ್ ಸದಸ್ಯರಾದ ತಾರಾ ಅನುರಾಧ, ಟಿ.ಎ. ಶರವಣ ಮೇಳಕ್ಕೆ ಚಾಲನೆ ನೀಡಿದರು. ಅದಮ್ಯಚೇತನದ ತೇಜಸ್ವಿನಿ ಅನಂತಕುಮಾರ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಟಿ ಮಯ್ಯೂರಿ ಪಾಲ್ಗೊಂಡಿದ್ದರು.

ಮೇಳದಲ್ಲಿ ಪ್ರಮುಖ ತಿನಿಸುಗಳೇನೇನಿದೆ?
ಅವರೆ ಕಾಯಿಯಿಂದ ಹೋಳಿಗೆ, ನಿಪ್ಪಟ್ಟು, ಕೋಡುಬಳೆ, ಜಾಮೂನು, ಪಾಯಸ ವಡೆಗಳಷ್ಟೇ ಅಲ್ಲದೆ ಹಿತರಕ ಬೇಳೆ ಹೋಲಿಗೆ, ದೋಸೆ, ಉಪ್ಪಿಟ್ಟು, ಜಿಲೇಬಿ, ಅವರೆಕಾಳು ಚಿತ್ರಾನ್ನ, ಮೊಸರು ಕೋಡುಬಳೆ, ಖಾರ ಹಿತಕಬೇಳೆ, ಪುದೀನ ಹಿತಕಬೇಳೆ, ಬೆಳ್ಳುಳ್ಳಿ ಹಿತಕಬೇಳೆ, ಗೋಡಂಬಿ ಹಿತಕಬೇಳೆ, ಅವಲಕ್ಕಿ ಮಿಕ್ಸ್, ಬೆಣ್ಣೆ ಉಂಡೆ ಹಿತಕಬೇಳೆ, ಕಾಂಗ್ರೆಸ್ ಮಿಕ್ಸ್, ಹಲ್ವ, ಪೂರಿ, ಒತ್ತು ಶಾವಿಗೆ ಅವರೆಕಾಳಿನಿಂದ ತಯಾರಿಸಲಾದ ವಿವಿಧ ಭಕ್ಷ್ಯಗಳು ಗ್ರಾಹಕರನ್ನು ಬರಸೆಳೆಯುತ್ತಿದೆ.

ಅವರೆ ಮೇಳದ ಈ ಬಾರಿಯ ಸ್ಪೆಷಲ್
ಕಳೆದ ೧೮ ವರ್ಷದಿಂದ ಅವರೆ ಮೇಳವನ್ನು ಆಯೋಜಿ ಸುತ್ತಿರುವ ವಾಸವಿ ಕಾಂಡಿಮೆಂಟ್ಸ್ನ ಗೀತಾ ಶಿವಕುಮಾರ್ ಪ್ರತಿ ಬಾರಿಯೂ ಗ್ರಾಹಕರಿಗೆ ಒಂದಿಲ್ಲೊಂದು ಬಗೆಯ ಹೊಸ ರೆಸಿಪಿ ಪರಿಚಯ ಮಾಡಿಸುವ ಉಮೇದಿನಲ್ಲಿರುತ್ತಾರೆ. ಕಳೆದ ಪ್ರಯೋಗಿಸಿದ್ದ ಹನಿ ಜಿಲೇಬಿ ಗೆ ಉತ್ತಮ ಪ್ರತಿಕ್ರಿಯೆ ದೊರೆತ ಸಂಭ್ರಮದಲ್ಲಿರುವ ಅವರು ಈ ಬಾರಿ ಅವರೆಕಾಯಿ ಜಹಾಂಗೀರ್ , ಹಿತಕಬೇಳೆ ಹಲ್ವಾ, ಅವರೆಕಾಯಿ ಕಾಜು ಬರ್ಫಿ, ಸ್ವೀಟ್ ಬೂಂದಿ ಹಾಗೂ ಕಟ್ಲೆಟ್ಗಳನ್ನು ಪರಿಚಯಿಸಿದ್ದರು. ಈ ಬಾರಿ 'ಅವರೆ ಸ್ಟಿಕ್ಸ್' ಹಾಗೂ 'ಅವರೆ ಕಟ್ಲೆಟ್' ಎನ್ನುವ ವಿಶೇಷ ರೆಸಿಪಿಯನ್ನು ಪರಿಷಯಿಸಿದ್ದಾರೆ.

ಗೀತಾ ಶಿವಕುಮಾರ್ ಅವರು ನಡೆದು ಬಂದ ಕಠಿಣ ದಾರಿ
ಗೀತಾ ಶಿವಕುಮಾರ್ ಅವರು ಮೊದಲು ತಮ್ಮ ಮನೆಯಲ್ಲಿಯೇ ಚಿಕ್ಕದಾಗಿ ಅವರೆಕಾಯಿ ತಿಂಡಿಗಳ ವ್ಯಾಪಾರ ಪ್ರಾರಂಭಿಸಿದರು. ಪರಿಚಯದವರಿಂದ ಸಾಲ ಪಡೆದು ಕೋಲಾರದ ಸ್ನೇಹಿರೊಬ್ಬರಿಂದ ಮಿಕ್ಸ್ ಚರ್ ಮಾಡುವುದುನ್ನು ಕಲಿತು, ತಾವೇ ಅಂಗಡಿಗಳಿಗೆ ಹೋಗಿ ಮಾರಾಟ ಮಾಡಲು ಪ್ರಾರಂಭಿಸಿದರು.
ಈ ಮೊದಲು ರೈತರು ತಮ್ಮ ಜಮೀನಿನಲ್ಲಿ ಎಲ್ಲೋ ಖಾಲಿ ಇರುವ ಸ್ವಲ್ಪ ಜಾಗದಲ್ಲಿ ಅವರೆಯನ್ನು ಬೆಳೆಯುತ್ತಿದ್ದರು. ಆದರೆ ನಮ್ಮ ಮೇಳ ಪ್ರಾರಂಭವಾದಾಗಿನಿಂದ ಜಮೀನಿನಲ್ಲಿ ಸಂಪೂರ್ಣವಾಗಿ ಅವರೆ ಕಾಳುಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಗೀತಾ ಶಿವಕುಮಾರ್.
ದಿನೇ ದಿನೇ ಅವರೆಕಾಳಿನಿಂದ ಮಾಡಿದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿದ ಅವರು ಅವರೆಕಾಯಿ ಮೇಳವನ್ನು ಆರಂಭಿಸಿದರು. ಸುಮಾರು 200ಕ್ಕೂ ಹೆಚ್ಚಿನ ಜನರು ಈ ಮೇಳ ಆಯೋಜನೆಗಾಗಿ ಕೆಲಸ ಮಾಡುತ್ತಾರೆ. ಅದೂ ಅಲ್ಲದೆ ನಾನು ವಾಸವಿ ಕಾಂಡಿಮೆಂಟ್ಸ್ ಪ್ರಾರಂಭಿಸಿದಾಗಿನಿಂದ ಇರುವ ಕೆಲಸಗಾರರೇ ಇಂದಿಗೂ ಇದ್ದಾರೆ.
ಅದೇ ನಮ್ಮೆಲ್ಲಾ ಯಶಸ್ಸಿಗೆ ಕಾರಣ. ಎಲ್ಲಾ ಕೆಲಸಗಳ ಕುರಿತು ಅವರಿಗೆ ಚೆನ್ನಾಗಿ ಅರಿವಿರುವುದರಿಂದ ಪ್ರತಿ ಬಾರಿಯೂ ಮಾಹಿತಿ ನೀಡಬೇಕಾದ ಹೊಣೆ ನನ್ನ ಮೇಲೆ ಬೀಳುವುದಿಲ್ಲ. ಅವರ ಜವಾಬ್ದಾರಿಯನ್ನು ಅರಿತುಕೊಂಡು ಅವರೇ ಕೆಲಸ ಮಾಡುತ್ತಾರೆ.

ಮಾಗಡಿ ಅವರೆಗೆ ಹೆಚ್ಚಿನ ಬೇಡಿಕೆ
ಅವರೆ ಬೇಳೆ ದೋಸೆ, ಹೋಳಿಗೆ 60 ರೂ. ಅವರೆಕಾಳು ಉಪ್ಪಿಟ್ಟು-30 ರೂ., ಅವರೆ ಕಾಳು ಚಿತ್ರಾನ್ನ-40 ರೂ., ಹಿತಕಬೇಳೆ ಮಸಾಲೆ ವಡೆ-20 ರೂ. ಕರಿದ ಬೇಳೆ ಕೆಜಿಗೆ 600 ರಿಂದ 800 ರೂ., ಹಸಿ ಅವರೆ ಬೇಳೆ 100 ರಿಂದ 160 ರೂ. ಅವರೆ ಬೇಳೆ ರೊಮಾಲಿ ರೋಟಿ-50 ರೂ. ಅವರೆ ಬೇಳೆ ರೋಲ್-50ರೂ. ಒತ್ತು ಶಾವಿಗೆ- 40 ರೂ.ಗಳಲ್ಲಿ ಲಭ್ಯವಿದೆ.

ರೈತರ ಪ್ರಮುಖ ಬೆಳೆ
ಮೇಳಕ್ಕೆ ಬರುವ ಅವರೆಯನ್ನು ಸಂಪೂರ್ಣವಾಗಿ ಮಾಗಡಿ ರೈತರು ಬೆಳೆದಿದ್ದು, ಚಳಿಗಾಲದಲ್ಲಿ ದಬ್ಬೆ ಅವರೆ, ಚಿತ್ ಗಲವರೆ ಮಾಗಡಿ ತಾಲೂಕಿನ ರೈತರ ಪ್ರಮುಖ ಬೆಳೆ. ಈ ಅವರೆಗಳು ರುಚಿಯಲ್ಲಿ ಗುಣಮಟ್ಟದ್ದಾಗಿದ್ದು, ಕಾಳುಗಳೂ ಉತ್ತಮವಾಗಿರುತ್ತದೆ. ತಾಲೂಕಿನ ತಗಚಗುಪ್ಪೆ, ಬೆಗುಂಬ ಸೇರಿದಂತೆ ಹತ್ತಾರು ಹಳ್ಳಿಯ ರೈತರು ಪ್ರತಿ ವರ್ಷ ಇಲ್ಲಿನ ಮೇಳಕ್ಕೆ ಅವರೆ ಪೂರೈಸುತ್ತಾರೆ. ಉಳಿದೆಲ್ಲಾ ಅವರೆಗಳಿಗಿಂತಲೂ ಮಾಗಡಿ ಅವರೆಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಮಾಗಡಿಯಿಂದ ಕೇವಲ ಮೂರು ತಿಂಗಳುಗಳು ಮಾತ್ರ ಅವರೆಕಾಳುಗಳು ಲಭ್ಯವಾಗುವ ಕಾರಣ ವಾಸವಿ ಕಾಂಡಿಮೆಂಟ್ಸ್ ನವರು ವರ್ಷಪೂರ್ತಿ ಅದನ್ನು ಸಂರಕ್ಷಿಸಿಟ್ಟು ಉಪಯೋಗಿಸುತ್ತಾರೆ.

ಬೆಂಗಳೂರಿನ ಆಹಾರ ಸಂಸ್ಕೃತಿಯನ್ನೂ ಬೆಳೆಸುವ ಅವರೆ ಮೇಳ
ಅವರೆ ಮೇಳ ಬೆಂಗಳೂರಿನ ಸಂಸ್ಕೃತಿಯಲ್ಲಿ ಒಂದು ಎನ್ನುವ ಮಟ್ಟಿಗೆ ಬೆಳೆದು ನಿಂತಿದೆ. ಅವರೆ ಮೇಳ ಪ್ರಾರಂಭವಾಗಿ17 ವರ್ಷ ಕಳೆದಿದೆ. ಮೊದಲ ವರ್ಷದಿಂದಲೇ ಅವರೆ ಮೇಳದಲ್ಲಿ ಭಾಗವಹಿಸುತ್ತೀದ್ದೇನೆ. ಗೀತಾ ಶಿವಕುಮಾರ್ ಅವರು ಬಹಳ ಕಷ್ಟ ಪಟ್ಟು ಒಬ್ಬ ಹೆಣ್ಣು ಮಗಳು ಒಳ್ಳೆಯ ರೀತಿಯಲ್ಲಿ ಹೇಗೆ ಬೆಳೆದು ನಿಲ್ಲಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ಗೀತಾ ವಾರು ಅವರೆ ಕಾಯಿಯಿಂದ ಇಷ್ಟೆಲ್ಲಾ ತಿಂಡಿಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಮಹಿಳೆ.- ತಾರಾ ಅನುರಾಧ, ವಿಧಾನ ಪರಿಷತ್ ಸದಸ್ಯೆ.

ರೈತರ ಬದುಕಿನ ದಿಕ್ಕು ಬದಲಿಸುವ ಅವರೆ ಮೇಳ
ಅವರೆ ಬೇಳೆ ಮೇಳ ಮಾಡುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.ಬಹಳಷ್ಟು ಜನ ಇಲ್ಲಿಗೆ ಬಂದು ಅವರು ಬೆಳೆದಿರುವ ಬೆಳೆಗಳನ್ನು ಮಾರಾಟ ಮಾಡುತ್ತಾರೆ. ಅವರೆಕಾಯಿಗಳಿಂದ ಇಂತಹ ಪದಾರ್ಥಗಳನ್ನು ಮಾಡಬಹುದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.- ಟಿ.ಎ. ಶರವಣ, ವಿಧಾನ ಪರಿಷತ್ ಸದಸ್ಯ

ಸರ್ಕಾರ ಅವರೆ ಬೆಳಗಾರರಿಗೆ ಉತ್ತೇಜನ ನೀಡಬೇಕು
ಅವರೆ ಮತ್ತು ರಾಗಿ ಕರ್ನಾಟಕದ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ರಾಗಿ ಬೆಳೆಯುವ ಕಡೆಗಳಲ್ಲಿ ಅವರೆಯನ್ನು ಸಾಮಾನ್ಯವಾಗಿ ಬೆಳೆಯುತ್ತಾರೆ. ಅವರೆ ಮತ್ತು ರಾಗಿ ಇದು ಬಾಲ್ಯದಲ್ಲಿರುವಾಗ ಅವರೆ ಕಾಳು ಸೊಪ್ಪು ಸಾರು, ಹಿತಕಲ ಅವರೆಯನ್ನೇ ಬೇಯಿಸಿ ತಿನ್ನುತ್ತಿದ್ದೆವು. ಅವರೆಯಲ್ಲಿ ಪೋಷಕಾಂಶ ಹೆಚ್ಚಿರುತ್ತದೆ. ಈ ಉತ್ಪನ್ನಗಳನ್ನು ಮಾರುವ ದಿಕ್ಕಿನಲ್ಲಿ ಸರ್ಕಾರ ಪ್ರೋತ್ಸಾಹಿಸಬೇಕು. ರೈತರ ಉತ್ಪನ್ನಕ್ಕೆ ಹೆಚ್ಚು ಉತ್ತೇಜನ ನೀಡಬೇಕು. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ.

ಜನರು ಹೆಚ್ಚು ಸ್ಥಳೀಯ ಆಹಾರವನ್ನು ಸೇವಿಸಬೇಕು
ಅವರೆ ಬೇಳೆ ಮೇಳದಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಿದೆ. ಸ್ಥಳೀಯರು ಪಿಜ್ಜಾ, ಬರ್ಗರ್ ಇಂತಹ ಆಹಾರಗಳಿಗೆ ಮಾರುಹೋಗಿದ್ದಾರೆ. ಅಂಥವರನ್ನು ಸ್ಥಳೀಯ ಆಹಾರಗಳೆಡೆಗೆ ಸೆಳೆಯಲು ಇಂತಹ ಮೇಳಗಳು ಅಗತ್ಯ. ಆಹಾರದೊಂದಿಗೆ ನಾವು ಕ್ರಮಿಸುವ ದೂರವನ್ನು ನಾವು ಗಮನಿಸಬೇಕಿದೆ. ತೇಜಸ್ವಿನಿ ಅನಂತ ಕುಮಾರ್, ಮುಖ್ಯಸ್ಥೆ, ಅದಮ್ಯ ಚೇತನ












Click it and Unblock the Notifications