ಮಾಸ್ತಿಗುಡಿ ದುರಂತ: ಇಬ್ಬರು ನಟರ ಶವಕ್ಕಾಗಿ ತೀವ್ರ ಶೋಧ
ನಟ ದುನಿಯ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಗೆ ಶೂಟಿಂಗ್ ವೇಳೆ ಭಾರಿ ಅನಾಹುತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ ಇಬ್ಬರು ಸಹ ಕಲಾವಿದರು ದುರಂತ ಸಾವನ್ನಪ್ಪಿದ್ದಾರೆ
ಬೆಂಗಳೂರು, ನವೆಂಬರ್ 07: ನಟ ದುನಿಯ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಗೆ ಶೂಟಿಂಗ್ ವೇಳೆ ಭಾರಿ ಅನಾಹುತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ ಇಬ್ಬರು ಸಹ ಕಲಾವಿದರು ದುರಂತ ಸಾವನ್ನಪ್ಪಿದ್ದಾರೆ. ನಟ ದುನಿಯಾ ವಿಜಯ್ ಅವರು ಈಜಿಕೊಂಡು ಪಾರಾಗಿರುವ ಸುದ್ದಿ ಬಂದಿದೆ.
ಇಲ್ಲಿ ಇರುವುದು ಆಸಿಡ್ ನೀರು, ಕೆಟ್ಟ ವಾಸನೆ, ದನ ಕರುಗಳೇ ನೀರು ಕುಡಿಯಲ್ಲ, ಇನ್ನು ಇಲ್ಲಿ ಮುಳುಗಿದರೆ ಹೇಗೆ ಮೇಲಕ್ಕೆ ಬರಲು ಸಾಧ್ಯ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.[ಮಾಸ್ತಿಗುಡಿ ದುರಂತ: ಒಂದು ಶವ ಕೊನೆಗೂ ಪತ್ತೆ]

ಭಜರಂಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಖಳನಟ ಉದಯ್ ಹಾಗೂ ಅನಿಲ್ ಎಂಬುವರು ಮಧ್ಯಾಹ್ನ 2.50ರ ಸುಮಾರಿಗೆ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ್ದಾರೆ. ಆದರೆ, ನಂತರ ನೀರಿನಿಂದ ಮೇಲಕ್ಕೆ ಬಂದಿಲ್ಲ. ದುನಿಯಾ ವಿಜಯ್ ಕೂಡಾ ಕೆರೆಗೆ ಹಾರಿದ್ದರು ಆದರೆ, ಈಜಿಕ್ಕೊಂಡು ದಡ ಸೇರಿ ಪಾರಾಗಿದ್ದಾರೆ.[ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಂಧನ]
ಘಟನೆ ನಡೆದಿದ್ದು ಹೇಗೆ?: ಮಾಸ್ತಿ ಗುಡಿ ಚಿತ್ರದ ಅಂತಿಮ ಹಂತದ ಚಿತ್ರೀಕರಣವನ್ನು ಬೆಂಗಳೂರು ಹೊರವಲಯದಲ್ಲಿರುವ ರಾಮನಗರ ಜಿಲ್ಲೆ ತಿಪ್ಪಗೊಂಡನಹಳ್ಳಿ ಕೆರೆ ಬಳಿ ಸೋಮವಾರ ಬೆಳಗ್ಗಿನಿಂದಲೂ ನಡೆದಿತ್ತು. ಮಧ್ಯಾಹ್ನದ ವೇಳೆ ಕೆರೆಯ ಮಧ್ಯ ಭಾಗದಲ್ಲಿ ಹೆಲಿಕಾಪ್ಟರ್ ನಿಂದ ನೀರಿಗೆ ಹಾರುವ ದೃಶ್ಯದ ಶೂಟಿಂಗ್ ನಡೆಯುವಾಗ ಈ ದುರಂತ ಸಂಭವಿಸಿದೆ.[ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್ ಐಆರ್]

ಸುಮಾರು 100 ಅಡಿ ಎತ್ತರದಿಂದ ಕೆಳಗೆ ಬೀಳುವ ದೃಶ್ಯದಲ್ಲಿ ದುನಿಯಾ ವಿಜಯ್, ಉದಯ್ ಹಾಗೂ ಅನಿಲ್ ಅವರು ಕೆರೆಗೆ ಹಾರಿದ್ದಾರೆ. ಈ ಪೈಕಿ ದುನಿಯಾ ವಿಜಯ್ ಅವರು ಈಜಿಕೊಂಡು ಬಂದು ಬಂದಿದ್ದಾರೆ. ಅವರನ್ನು ತೆಪ್ಪದಲ್ಲಿ ಕರೆದುಕೊಂಡು ಬರಲಾಗಿದೆ. ಆದರೆ, ಕೆರೆಗೆ ಬಿದ್ದ ಇಬ್ಬರು ನಟರು ಮೃತಪಟ್ಟಿದ್ದಾರೆ ಎಂದು ತಾವರೆಕೆರೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ದೃಢಪಡಿಸಿದ್ದಾರೆ.
10 ಜನ ತಜ್ಞ ಈಜುಗಾರರ ತಂಡ ಈಗ ಇಬ್ಬರ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹೂಳು, ಕಲುಷಿತ ನೀರಿನಿಂದ ತುಂಬಿರುವ ಕೆರೆಯಲ್ಲಿ ಹೆಣ ಹುಡುಕಾಟ ಕೂಡಾ ಕಷ್ಟವಾಗುವ ಸಾಧ್ಯತೆಯಿದೆ. ಕೆರೆಯಲ್ಲಿ ಮೀನು ಹಿಡಿಯಲು ಸ್ಥಳೀಯ ಮೀನುಗಾರರು ಬಲೆಗಳನ್ನು ಹರಡಿರುತ್ತಾರೆ. ಈ ಬಲೆಗಳು ಎಲ್ಲೆಲ್ಲಿ ಇವೆ ಎಂಬುದು ಅವರಿಗೆ ಮಾತ್ರ ತಿಳಿದಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.












Click it and Unblock the Notifications