ಬೆಂಗಳೂರಿಗೆ ಮತ್ತೆ ಬಂತು "ಈ ಗುಮ್ಮ" ಜನರಿಂದ ಬಿಬಿಎಂಪಿಗೆ ಹಿಡಿಶಾಪ!
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಕೆಲವು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆ ಬದಿ, ಮೇಲ್ಸೇತುವೆ ಹಾಗೂ ಅಂಡರ್ಪಾಸ್ಗಳಲ್ಲಿ ಮಳೆ ನೀರು ನಿಂತು ಜನ ಪರದಾಡುತ್ತಿದ್ದಾರೆ. ಆದರೆ, ಬೆಂಗಳೂರಿನ ಜನರಿಗೆ ಮಳೆಗಾಲ ಬಂತೆಂದರೆ ಎದುರಾಗುವ ರಸ್ತೆಗುಂಡಿ ಗುಮ್ಮ ಮತ್ತೆ ಬಂದಿದೆ. 15 ದಿನಗಳಿಂದ ಅಷ್ಟೇ ಜನ ಅಬ್ಬಾ ಕೊನೆಗೂ ಬಿಬಿಎಂಪಿ ಅವರು ರಸ್ತೆಗುಂಡಿಗಳನ್ನು ಮುಚ್ಚಿದರು ಅಂತ ಸಂತೋಷದಿಂದಿದ್ದರು. ವಾರದ ಮಳೆ ಬಿಬಿಎಂಪಿ ಕಾಮಗಾರಿಯ ಬಣ್ಣವನ್ನು ತೊಳೆದಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂದರೆ ಸಾಕು ರಸ್ತೆಗುಂಡಿಗಳದ್ದೇ ಕಾರುಬಾರು. ಬೆಂಗಳೂರಿನಲ್ಲಿ ಸೃಷ್ಟಿಯಾಗುವ ರಸ್ತೆಗುಂಡಿಗಳಿಂದ ಜನ ಹಾಗೂ ವಾಹನ ಸವಾರರು ಪರದಾಡುವುದಿದೆ. ಈಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಬೇಕು. ಕಾಲಾವಧಿಯ ಒಳಗೆ ರಸ್ತೆಗುಂಡಿಗಳನ್ನು ಮುಚ್ಚದೆ ಇದ್ದರೆ, ಕೆಲಸದಿಂದ ಕಿತ್ತುಬಿಸಾಕ್ತಿನಿ ಎಂದು ಹೇಳಿದ್ದರು. ಡಿ.ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಿಬಿಎಂಪಿಯ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಅಧಿಕಾರಿಗಳು ಎದ್ನೋಬಿದ್ನೋ ಅಂತ ಬೆಂಗಳೂರಿನಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಿದ್ದರು. ಆದರೆ, ಬಿಬಿಎಂಪಿಯ ಅಧಿಕಾರಿಗಳು ರಸ್ತೆಗುಂಡಿ ಮುಚ್ಚಿದ 15 ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಮತ್ತೆ ಸೃಷ್ಟಿಯಾಗಿವೆ.

ಕೋಟ್ಯಾಂತರ ರೂಪಾಯಿ ಖರ್ಚು: ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆಂದೇ ಬಿಬಿಎಂಪಿಯು ಪ್ರತಿ ವರ್ಷವೂ ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿದೆ. ಆದರೆ, ಈ ರೀತಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ, ಬೆಂಗಳೂರು ರಸ್ತೆ ಗುಂಡಿಯಿಂದ ಮುಕ್ತವಾಗುತ್ತಿಲ್ಲ. ಬಿಬಿಎಂಪಿಯು ತನ್ನ ವಾರ್ಷಿಕ ಬಜೆಟ್ನಲ್ಲಿ ವಾರ್ಡ್ವಾರು ಅಭಿವೃದ್ಧಿ ಹಾಗೂ ಮುಖ್ಯ ಹಾಗೂ ಅತೀ ಮುಖ್ಯ ರಸ್ತೆಗಳನ್ನು ಮುಚ್ಚುವುದು ಹಾಗೂ ನಿರ್ವಹಣೆಗೆ ಅನುದಾನ ಮೀಸಲಿಡುತ್ತದೆ. ಆದರೆ, ಪ್ರತಿ ವರ್ಷವೂ ಮಳೆಗಾಲದಲ್ಲಿ ರಸ್ತೆ ಗುಂಡಿ ಸೃಷ್ಟಿಯಾಗುವುದು ಅದರಿಂದ ವಾಹನ ಸವಾರರು ಪರದಾಡುವುದು ತಪ್ಪುತ್ತಿಲ್ಲ. ರಸ್ತೆಗುಂಡಿಗಳಿಂದ ಅಪಘಾತಗಳೂ ಸಂಭವಿಸುತ್ತಿವೆ.
14 ಸಾವಿರ ರಸ್ತೆ ಗುಂಡಿ ಮುಚ್ಚಿತ್ತು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ ತಿಂಗಳು ರಸ್ತೆಗುಂಡಿ ಮುಕ್ತ ಅಭಿಯಾನವನ್ನೇ ನಡೆಸಿತ್ತು. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಂಡಿದ್ದ ರಸ್ತೆಗಳನ್ನು ಹಗಲು - ರಾತ್ರಿ ಎನ್ನದೆ ಮುಚ್ಚಿತ್ತು. ಆದರೆ, ಒಂದೇ ಮಳೆಗೆ ಬಿಬಿಎಂಪಿ ಬಣ್ಣ ಬಯಲಾಗಿದೆ. ಈಚೆಗಷ್ಟೇ ಬರೋಬ್ಬರಿ 14,000 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿರುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.ಆದರೆ, 15 ದಿನಗಳ ಒಳಗೆ ಅದೇ ಹಳೆ ಕಥೆ ಶುರುವಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಹಾಕಿದ್ದ ಡಾಂಬರು ಕಿತ್ತು ಬಂದಿದ್ದು, ಮತ್ತೆ ರಸ್ತೆಗುಂಡಿ ನಿರ್ಮಾಣವಾಗಿದೆ.

ಕಳಪೆ ಕಾಮಗಾರಿ: ನಗರದಲ್ಲಿ ಒಂದೇ ತಿಂಗಳಲ್ಲಿ ಮತ್ತೆ ರಸ್ತೆಗುಂಡಿ ನಿರ್ಮಾಣವಾಗುತ್ತಿರುವುದನ್ನು ನೋಡಿದರೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಾಗ ಕಳಪೆ ಕಾಮಗಾರಿ ಮಾಡಲಾಗಿದೆಯೇ ಎನ್ನುವ ಅನುಮಾನ ಎದುರಾಗಿದೆ. ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ಯಾಗ್ ಮಾಡುತ್ತಿರುವ ಜನ, ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications