ಶಾಸಕ ಮುನಿರತ್ನ ವಿರುದ್ಧ ದಾಖಲಾಯ್ತು ಮತ್ತೊಂದು ಎಫ್ಐಆರ್..ಯಾವ ಕಾರಣಕ್ಕೆ
ಮಹಿಳೆ ಮೇಲೆ ಅತ್ಯಾಚಾರ ಹಾಗೂ ಜಾತಿನಿಂದನೆ, ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಕೇಸ್ಗಳಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಆರೋಪಗಳು ಮುನಿರತ್ನ ಅವರ ಮೇಲಿದ್ದು, ಈಗ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಕೊಲೆಗೆ ಯತ್ನ, ಸುಪಾರಿ ನೀಡಿರುವುದು ಹಾಗೂ ಮಹಿಳೆಗೆ ಮಾನಹಾನಿ ಮಾಡಿರುವ ಆರೋಪದಡಿ ಶಾಸಕ ಮುನಿರತ್ನ ಅವರ ವಿರುದ್ಧ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಎಂಬುವರು ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಶಾಸಕ ಮುನಿರತ್ನ ಸೇರಿದಂತೆ ಹಲವು ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಮುನಿರತ್ನ ಮೇಲಿರುವ ಜಾತಿ ನಿಂದನೆ ಕೇಸ್ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಇತ್ತ ಮುನಿರತ್ನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿ ಸಂಕಷ್ಟ ತಂದೊಡ್ಡಿದೆ.
ಏನಿದು ಹೊಸ ಆರೋಪ?: ದೂರಿನಲ್ಲಿ ತಿಳಿಸಿರುವಂತೆ ನಾವು ಕುಟುಂಬದೊಂದಿಗೆ ಮನೆ ದೇವರಾದ ಕದಿರಿ ನರಸಿಂಹಸ್ವಾಮಿ ದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭದಲ್ಲಿ ನಮ್ಮನ್ನು ಕೊಲ್ಲಲು ಶಾಸಕ ಮುನಿರತ್ನ ಪ್ಲ್ಯಾನ್ ಮಾಡಿದ್ದರು. ನಮ್ಮ ಕಾರನ್ನು ಫಾಲೋ ಮಾಡಿ ಮಾಹಿತಿ ನೀಡುವಂತೆ ಯುವ ಕಾಂಗ್ರೆಸ್ನ ನಾಯಕ ಸಂತೋಷ್ ಸಿದ್ದೇಗೌಡ ಎಂಬುವರನ್ನು ಬಿಟ್ಟಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ನಮ್ಮ ಪ್ರವಾಸದ ಬಗ್ಗೆ ಮಾಹಿತಿ ರವಾನಿಸಿದ್ದರು. ಇದೇ ವಿಚಾರವಾಗಿ ಸಂತೋಷ್ ತಂದೆ ಸಿದ್ದೇಗೌಡ ಅವರು ಮುನಿರತ್ನ ಜೊತೆ ಗಲಾಟೆ ಮಾಡಿದ್ದರು. ಇಂತಾ ಕೆಲಸಗಳಿಗೆ ಮಗ ಸಂತೋಷ್ನನ್ನ ಬಳಸಿಕೊಳ್ಳದಂತೆ ಹೇಳಿದ್ದರು ಎನ್ನಲಾಗಿದೆ.
2013ರಲ್ಲಿ ಡಿಸೆಂಬರ್ ತಿಂಗಳಲ್ಲಿ ಯಾವುದೋ ಕೇಸ್ ವಿಚಾರವಾಗಿ ನಾನು ಪೊಲೀಸ್ ಠಾಣೆಗೆ ಹೋಗಿದ್ದೆ. ಯಾವುದೇ ತಪ್ಪು ಮಾಡದ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೂ ಕಳಿಸಿದ್ದರು. ಮುನಿರತ್ನ ಸೂಚನೆ ಮೇರೆಗೆ ಪೊಲೀಸರು ನನ್ನನ್ನು ಮನಬಂದಂತೆ ಥಳಿಸಿದ್ದರು. ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿದ್ದರು. ಈ ಸುಳ್ಳು ಕೇಸ್ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಾಯಕ ರಮೇಶ ಜಾರಕಿಹೊಳಿ ಸಿಡಿ ಕೇಸ್ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು ನನ್ನ ಸ್ನೇಹಿತ ಅರುಣ್ ಅವರನ್ನು ಅಕ್ರಮವಾಗಿ ಬಂಧಿಸಿದ್ದರು. ಅವರು ಮುನಿರತ್ನ ಅವರಿಗೆ ನನ್ನ ಮತ್ತು ಪತ್ನಿಯ ಅಶ್ಲೀಲ ವಿಡಿಯೋಗಳನ್ನು ಡಿಮ್ಯಾಂಡ್ ಮಾಡಿದ್ದರು. ಇಲ್ಲದಿದ್ದರೆ ಈ ಕೇಸ್ನಲ್ಲಿ ಸಿಲುಕಿಸುತ್ತೇವೆ ಎಂದೂ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಮುನಿರತ್ನ ವಿರುದ್ಧ ಜಾತಿ ನಿಂದನೆಯ ಆರೋಪ ಕೇಳಿಬಂದಿತ್ತು. ಗುತ್ತಿಗೆದಾರರೊಬ್ಬರು ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಆಡಿಯೋ ರಿಲೀಸ್ ಮಾಡಿದ್ದರು. ಇದನ್ನು ಸ್ವೀಕರಿಸಿದ್ದ ಪೊಲೀಸರು ದೂರು ದಾಖಲಿಸಿಕೊಂಡು, ಈ ಆಡಿಯೋ ಅಸಲಿಯತ್ತು ತಿಳಿಯಲು ಎಫ್ಎಸ್ಎಲ್ಗೆ ಕಳಿಸಿದ್ದರು. ಇತ್ತೀಚೆಗೆ ವರದಿ ಹೊರಬಂದಿದ್ದು, ಆ ಆಡಿಯೋದಲ್ಲಿರುವ ಧ್ವನಿ ಮುನಿರತ್ನ ಅವರದ್ದೇ ಎಂದು ದೃಢಪಟ್ಟಿದೆ ಎಂದು ಹೇಳಲಾಗಿದೆ.












Click it and Unblock the Notifications