ಹಸಿರು ಜೀವನಶೈಲಿ ನಿಮ್ಮದಾಗಲಿ : ಅನಂತ್ ಕುಮಾರ್
ಬೆಂಗಳೂರು, ಮಾ. 3 : ಭಾರತೀಯ ಸಮಾಜ ಹಸಿರು ಜೀವನಶೈಲಿಯತ್ತ ಮುನ್ನಡೆಯಬೇಕು. ಇದರಿಂದ ಜನರು ಮತ್ತು ನಿಸರ್ಗದ ನಡುವಿನ ಅಂತರ ತುಂಬಲು ಸಾಧ್ಯ. ಇದು ಸಾಧ್ಯವಾಗಬೇಕಾದರೆ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ತೀರ ಅಗತ್ಯ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಒತ್ತಿ ಹೇಳಿದ್ದಾರೆ.
"ನಾವು ಆಧುನೀಕರಣದಿಂದಾಗಿ ಹಸಿರು ಜೀವನಶೈಲಿಯಿಂದ ಬಹಳ ದೂರ ಸಾಗಿದ್ದೇವೆ. ದುರದೃಷ್ಟವಶಾತ್ ಆಧುನೀಕರಣದ ತಪ್ಪಾದ ಜೀವನಶೈಲಿ ಅಳವಡಿಸಿಕೊಂಡು ನಮ್ಮ ಜೀವನಕ್ಕೆ ಯಾವುದು ಸೂಕ್ತವೋ ಅದನ್ನು ಮರೆತಿದ್ದೇವೆ. ಇದರಿಂದ ಅನಾರೋಗ್ಯಕರ ಜೀವನಶೈಲಿ ನಮ್ಮ ಯುವಜನರಲ್ಲಿ ಸಾಮಾನ್ಯವಾಗಿದೆ. ಸೂಕ್ತ ಮೌಲ್ಯಗಳ ಅಳವಡಿಕೆ ಮೂಲಕ ನಿಸರ್ಗಕ್ಕೆ ಹತ್ತಿರವಾದ ಜೀವನಶೈಲಿ ಇಂದಿನ ಅಗತ್ಯ" ಎಂದು ಅನಂತ್ ಕುಮಾರ್ ಹೇಳಿದರು.
ಅವರು ಬೆಂಗಳೂರಿನಲ್ಲಿ ಭಾನುವಾರ, ಮಾ.2ರಂದು ಉದಯಭಾನು ಕಲಾಸಂಘದಲ್ಲಿ ಉಚಿತ 'ಹೃದಯ ಆರೋಗ್ಯ ಪರೀಕ್ಷಾ ಶಿಬಿರ'ದಲ್ಲಿ ಮಾತನಾಡುತ್ತಿದ್ದರು. ಹೃದಯದ ಆರೋಗ್ಯ ಕುರಿತು ಅರಿವನ್ನು ಹೆಚ್ಚಿಸುತ್ತಿರುವ ಸಂಸ್ಥೆಯ ಪ್ರಯತ್ನಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
"ಈ ದಿನಗಳ ಜೀವನದಲ್ಲಿ ಹಲವು ಬಗೆಯ ಅಸಮತೋಲನಗಳಿವೆ. ಜನರು 60-70 ವರ್ಷ ದಾಟುವುದನ್ನು ನಾವು ಕಾಣುವುದಿಲ್ಲ. ಅದಕ್ಕೆ ಕಾರಣಗಳನ್ನು ನಾವು ಅನ್ವೇಷಿಸಬೇಕು. ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಬೇಕು. ಈ ಸ್ವಯಂ ಸೇವಾ ಸಂಸ್ಥೆ ಹಸಿರು ಜೀವನಶೈಲಿ ಪ್ರತಿಪಾದನೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮುಂಚೂಣಿಯಲ್ಲಿರಲಿ" ಎಂದು ಅನಂತ್ ಕುಮಾರ್ ಆಶಿಸಿದರು.
"ನಮ್ಮ ದೇಶದ ಬದುಕುವ ರೀತಿಯಲ್ಲೇ ದೊಡ್ಡ ತಪ್ಪಾಗಿದೆ. ಮಧುಮೇಹ, ರಕ್ತದೊತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಣ್ಣು, ಕಿಡ್ನಿ ಸಮಸ್ಯೆಗಳಿಗೆ ಜೀವನಶೈಲಿ ಕಾರಣ. ನಮ್ಮದು ಶಿಸ್ತಿನ ಜೀವನಶೈಲಿಯಲ್ಲ. ಅದು ಪ್ರಕೃತಿಗೆ ಹತ್ತಿರವಾಗಿಲ್ಲ. ಪ್ರಕೃತಿ ಮತ್ತು ನಮ್ಮ ಜೀವನಶೈಲಿ ಪರಸ್ಪರ ಹೊಂದಿಕೊಂಡಿವೆ. ನಿಸರ್ಗವನ್ನು ಮತ್ತು ಜೀವನಶೈಲಿಯನ್ನು ಹತ್ತಿರಕ್ಕೆ ತೆಗೆದುಕೊಂಡು ಬಂದರೆ ನಮ್ಮ ತೊಂಬತ್ತು ಪರ್ಸೆಂಟ್ ರೋಗಗಳು ವಾಸಿಯಾಗುತ್ತವೆ" ಎಂದು ಅವರು ಪ್ರತಿಪಾದಿಸಿದರು.
"ದೇಶದ ಮತ್ತು ಜಗತ್ತಿನ ಯಾವುದೇ ಅಭಿವೃದ್ಧಿ ಹಸಿರು ಜೀವನಶೈಲಿಯಾಗಬೇಕು. ಹಸಿರು ನಾಶ ಮಾಡಿ ಮಾಡುವ ಯಾವುದೇ ಅಭಿವೃದ್ಧಿ ಮನುಕುಲಕ್ಕೆ ಮಾರಕ. ಜನರನ್ನು ಕಾಡುತ್ತಿರುವ ಹಲವಾರು ರೋಗಗಳಿಗೆ ನೈಸರ್ಗಿಕ ಪರಿಹಾರಗಳಿವೆ. ಆದರೆ ನಮ್ಮ ಆಹಾರಪದ್ಧತಿ ಮತ್ತು ರೂಢಿಗಳಿಂದ ನಾವು ಅವುಗಳಿಂದ ದೂರವಾಗಿದ್ದೇವೆ" ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮತ್ತು ಸ್ಥಳೀಯ ಕಾರ್ಪೊರೇಟರ್ ಸದಾಶಿವ ಹಾಜರಿದ್ದರು. ಈ ಸಂದರ್ಭದಲ್ಲಿ ಉದಯಭಾನು 'ವೈದ್ಯರತ್ನ' ಪ್ರಶಸ್ತಿಯನ್ನು ಡಾ.ನಾಗರತ್ನ ಬೇಲಿ ಅವರಿಗೆ ಪ್ರದಾನ ಮಾಡಲಾಯಿತು.