African Cheetahs: ಬೆಂಗಳೂರಿಗೆ ಬಂದಿಳಿದ ನಾಲ್ಕು ಆಫ್ರಿಕನ್ ಚೀತಾಗಳು: ವಿಮಾನ ನಿಲ್ದಾಣದಲ್ಲಿ ಅರಣ್ಯ ಸಚಿವರಿಂದ ಸ್ವಾಗತ
ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ವಿದೇಶದಿಂದ ಆಗಮಿಸಿರುವ ನಾಲ್ಕು ಚೀತಾಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ನಗರಕ್ಕೆ ಬಂದಿಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ವಿಮಾನ ನಿಲ್ದಾಣದ ಸರಕು ಸಾಗಣೆ (ಕಾರ್ಗೋ) ವಿಭಾಗಕ್ಕೆ ಭೇಟಿ ನೀಡಿ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡರು.
ಬನ್ನೇರುಘಟ್ಟ ಮೃಗಾಲಯಕ್ಕೆ ಸ್ಥಳಾಂತರ
ಈ ಚೀತಾಗಳಿಗೆ ಕರ್ನಾಟಕದ ಹವಾಮಾನ ಮತ್ತು ವಾತಾವರಣದ ಬದಲಾವಣೆಯಿಂದ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಮುಂದಿನ 30 ದಿನಗಳ ಕಾಲ ಇವುಗಳಿಗೆ ವಿಶೇಷ ಕ್ವಾರಂಟೈನ್ ವ್ಯವಸ್ಥೆ, ನಿಯೋಜಿತ ಆಹಾರ ಕ್ರಮ ಮತ್ತು ನಿರಂತರ ಆರೋಗ್ಯ ಪರೀಕ್ಷೆಗಳನ್ನು ನಡೆಸಲು ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕರ್ನಾಟಕದಲ್ಲಿ ತಗ್ಗಿದ ಚೀತಾಗಳು
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, "ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಚೀತಾಗಳು ಕಾಣಿಸಿಕೊಳ್ಳುತ್ತಿದ್ದವು, ಆದರೆ ಇಂದು ಅವುಗಳ ಸಂಖ್ಯೆ ಇಲ್ಲದಂತಾಗಿದೆ. ಕನಿಷ್ಠ ನಮ್ಮ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ಸಿಗಬೇಕು ಎನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಚೀತಾಗಳ ಸುರಕ್ಷತೆ ಮತ್ತು ಸಂರಕ್ಷಣೆಗೆ ಅತ್ಯಂತ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಹೇಳಿದ್ದಾರೆ. ಚೀತಾಗಳನ್ನು ವಿಮಾನ ನಿಲ್ದಾಣದಿಂದ ಬನ್ನೇರುಘಟ್ಟಕ್ಕೆ ಅತ್ಯಂತ ಸುರಕ್ಷಿತವಾಗಿ ಸಾಗಿಸುವ ವ್ಯವಸ್ಥೆಯನ್ನು ಸಚಿವರು ವೈಯಕ್ತಿಕವಾಗಿ ಪರಿಶೀಲಿಸಿದರು. ಈ ಹೊಸ ಸೇರ್ಪಡೆಯಿಂದಾಗಿ ಬನ್ನೇರುಘಟ್ಟ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದ್ದು, ಪ್ರಾಣಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
'ಪ್ರಾಜೆಕ್ಟ್ ಚೀತಾ' ಯೋಜನೆ
ಭಾರತಕ್ಕೆ ಆಫ್ರಿಕನ್ ಚೀತಾಗಳನ್ನು ಕರೆತರುವ ಪ್ರಯತ್ನ ಹೊಸದೇನಲ್ಲ. 2022ರಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಪ್ರಾಜೆಕ್ಟ್ ಚೀತಾ' ಯೋಜನೆಯಡಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಆದರೆ, ಈ ಯೋಜನೆಯು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ರೇಡಿಯೋ ಕಾಲರ್ಗಳಿಂದ ಉಂಟಾದ ಚರ್ಮದ ಸೋಂಕು (ಸೆಪ್ಟಿಸೀಮಿಯಾ), ಅತಿಯಾದ ಉಷ್ಣಾಂಶ, ಹವಾಮಾನ ಬದಲಾವಣೆ ಹಾಗೂ ಚೀತಾಗಳ ನಡುವಿನ ಪರಸ್ಪರ ಕಾಳಗದಂತಹ ಕಾರಣಗಳಿಂದಾಗಿ ಮರಿಗಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಚೀತಾಗಳು ಮೃತಪಟ್ಟಿದ್ದವು.

ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಎದುರಾದ ಈ ಕಹಿ ಅನುಭವಗಳು ಮತ್ತು ವೈಫಲ್ಯಗಳನ್ನು ಕರ್ನಾಟಕ ಅರಣ್ಯ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆ ಘಟನೆಗಳಿಂದ ಪಾಠ ಕಲಿತಿರುವ ಇಲಾಖೆಯು, ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿರುವ ನಾಲ್ಕು ಚೀತಾಗಳ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿದೆ. ಇಲ್ಲಿನ ಹವಾಮಾನಕ್ಕೆ ಅವು ಹೊಂದಿಕೊಳ್ಳುವಂತೆ ಮಾಡುವುದು, ಸೋಂಕು ತಗುಲದಂತೆ ನಿರಂತರ ನಿಗಾ ಇಡುವುದು ಮತ್ತು ಅವುಗಳ ಆರೋಗ್ಯ ರಕ್ಷಣೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಇಲಾಖೆಯ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ.













Click it and Unblock the Notifications