ಬೆಂಗಳೂರು: ಭಾರೀ ಮಳೆಗೆ ರಸ್ತೆ ಕಾಣದೆ ಡಿವೈಡರ್ಗೆ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು
ಬೆಂಗಳೂರು, ನವೆಂಬರ್ 19: ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯ ಅವಾಂತರಗಳು ಮುಂದುವರಿದಿವೆ.
ಭಾರೀ ಮಳೆ ಆರ್ಭಟಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯ ಬೆಟ್ಟಹಲಸೂರು ಕ್ರಾಸ್ ಬಳಿ ರಸ್ತೆ ಕಾಣದೆ ಡಿವೈಡರ್ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ 9 ಗಂಟೆಗೆ ನಡೆದಿದೆ.
ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಕಾರು ಬರುತ್ತಿತ್ತು. ಈ ವೇಳೆ ಬೆಟ್ಟಹಲಸೂರು ಬಳಿಯ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದೆ. ಮೂವರು ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಳೆಯಿಂದಾಗಿ ರಸ್ತೆ ಕಾಣದೆ ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿನ ಮೇಲೆ ಕಾರು ಬಿದ್ದಿದೆ.

ಮಳೆ ಹಿನ್ನೆಲೆ ಕಾರಿನಲ್ಲಿದ್ದ ಮೃತದೇಹ ತೆಗೆಯಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರೀ ಮಳೆಯಿಂದ ಇತರ ಅವಾಂತರಗಳು
ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಆದರೆ ಗುರುವಾರ ದಿನಪೂರ್ತಿ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟದ ಪರಿಣಾಮ ಕೆಲವು ಕಡೆ ರಸ್ತೆಗಳು ಕೆರೆಯಂತಾದರೆ ಮತ್ತೆ ಹಲವು ಕಡೆ ಜನರ ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಂಗಳೂರಿನಲ್ಲಿ ಸಂಜೆ ವೇಳೆ ಎಂ.ಜಿ. ರಸ್ತೆ, ಕೆ.ಜಿ. ರಸ್ತೆ, ಸಿಟಿ ಮಾರ್ಕೆಟ್, ಕಾರ್ಪೋರೇಷನ್, ಕೆ.ಆರ್. ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಪೀಣ್ಯ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗ್ರಾಹಕರಿಲ್ಲದೆ ಬೀದಿಬದಿ ವ್ಯಾಪಾರಸ್ಥರ ನೋವು
ಗ್ರಾಹಕರ ನಿರೀಕ್ಷೆಯಲ್ಲಿ ಎಂದಿನಂತೆ ಬಂಡವಾಳ ಹೂಡಿ, ತರಕಾರಿ ಮಾರಾಟಗಾರರು, ಚಾಟ್ಸ್ ವ್ಯಾಪಾರಿಗಳು ಅಗತ್ಯ ಆಹಾರ ಸಾಮಾಗ್ರಿಗಳನ್ನು ತಯಾರಿಸಿಟ್ಟುಕೊಂಡಿದ್ದಾರೆ. ಆದರೆ ಜಿಟಿಜಿಟಿ ಮಳೆಯ ಕಾರಣ ಗ್ರಾಹಕರು ಮನೆಯಿಂದ ಹೊರಗೆ ಬರುತ್ತಿಲ್ಲ. ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಒಂದೆಡೆ ಬರೆ ಎಳೆದರೆ, ಮತ್ತೊಂದೆಡೆ ನಿರಂತರವಾದ ಮಳೆ ಬದುಕನ್ನು ದುಸ್ತರವಾಗಿಸಿದೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವರ ಮನೆ ರಸ್ತೆಗಳು ಜಲಮಯ
ಸಚಿವರಾದ ಮುರುಗೇಶ್ ನಿರಾಣಿ, ಶ್ರೀರಾಮುಲು, ಡಾ.ಕೆ. ಸುಧಾಕರ್, ಸಿ.ಸಿ. ಪಾಟೀಲ್, ಎಂ.ಪಿ. ರೇಣುಕಾಚಾರ್ಯ, ಎಸ್.ಆರ್. ಪಾಟೀಲ್ ವಾಸವಾಗಿರುವ ಸ್ಯಾಂಕಿ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಬಳಿ ಕೂಡ ರಸ್ತೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಸಂಗ್ರಹವಾಗಿದೆ.

ಇದರಿಂದಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಮುಂಭಾಗದ ರಸ್ತೆ ಜಲಮಯವಾಗಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೆ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಇನ್ನು ಇಂಜಿನ್ಗೆ ನೀರು ಹೋಗಿ ಆಟೋ ಕೈಕೊಟ್ಟಿದ್ದು, ಆಟೋ ಸ್ಟಾರ್ಟ್ ಮಾಡಲು ಚಾಲಕ ಹರಸಾಹಸಪಟ್ಟಿದ್ದಾರೆ.
ಅಕಾಲಿಕ ಮಳೆಯಿಂದ ಮನೆ ಕುಸಿದು ಹೊಸಕೋಟೆ ತಾಲ್ಲೂಕಿನ ಮುಗಬಾಳ ಗ್ರಾಮದ ವೃದ್ಧೆ ಲಕ್ಕಮ್ಮ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೋಗಿಲು ಬಳಿಯ ಬೆಳ್ಳಹಳ್ಳಿ ಕೆರೆಯ ಕೋಡಿ ಹೊಡೆದು ಹಲವು ಮನೆಗಳಿಗೆ ನೀರು ನುಗ್ಗಿದೆ.
ಕೆರೆ ನೀರು ಕೋಡಿ ಮೂಲಕ ರಾಜಕಾಲುವೆಗೆ ಹೋಗಬೇಕು. ಆದರೆ ರಾಜಕಾಲುವೆ ಕಾಮಗಾರಿಯಿಂದ ಬದಲಿ ಮಾರ್ಗ ಮಾಡಿದ್ದರಿಂದ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಇನ್ನು ಶುಕ್ರವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಶುರುವಾಗಿದ್ದು, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications