ಬೆಂಗಳೂರು: ಚಾಕು ತೋರಿಸಿ ಮಹಿಳೆಗೆ ಅತ್ಯಾಚಾರ ಯತ್ನ!
ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಚಾಕುವನ್ನು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಸೆಪ್ಟೆಂಬರ್ 10ರಂದು ನಡೆದಿದೆ. ಮಹಿಳೆಯು ಹೆದರಿಕೆಯಿಂದ ಯಾರಿಗೂ ವಿಚಾರವನ್ನು ತಿಳಿಸಿರಲಿಲ್ಲ. ಇದೀಗ ಸಾಮಾಜಿಕ ಹೋರಾಟಗಾರರ ಸಹಾಯದಿಂದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನು ದಾಖಲಿಸಿದ್ದಾರೆ.
ಬೆಂಗಳೂರಿನ ಅಶೋಕನಗರದ ಶಾಂತಲಾ ನಗರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 10 ರ ರಾತ್ರಿ 9.30 ರಂದು ನಡೆದ ಘಟನೆ ನಡೆದಿದೆ ಎನ್ನಲಾಗಿದೆ. ವಿಲಿಯಮ್ ಪ್ರಕಾಶ್ ಎಂಬಾತ ಚಾಕುವನ್ನು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆಯು ಆರೋಪವನ್ನು ಮಾಡಿದ್ದಾಳೆ.
ಸೆಪ್ಟೆಂಬರ್ 10ರಂದು ಏರಿಯಾದಲ್ಲಿ ಗಣೇಶನ್ನು ಕೂರಿಸಲಾಗಿತ್ತು. ಸುಮಾರು 8.30ಕ್ಕೆ ಗಣೇಶ ವಿಸರ್ಜನೆಗೆ ತೆಗೆದುಕೊಂಡು ಹೋಗಲಾಗಿತ್ತು. ಶಾಂತಲಾ ನಗರದಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲೇ ಸಣ್ಣದೊಂದು ಚರ್ಚ್ ಕೂಡ ಇದೆ.
ಆ ಚರ್ಚ್ ಲೈಟ್ ಆಫ್ ಮಾಡಲು ಹೊರಟಿದ್ದ ಮಹಿಳೆಯ ಹಿಂದೆಯೇ ವ್ಯಕ್ತಿಯೊಬ್ಬ ಬಂದಿದ್ದಾನೆ. ಚರ್ಚ್ ಒಳಗೆ ನುಗ್ಗಿದ ಆರೋಪಿ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆಂಬ ಆರೋಪವನ್ನು ಮಹಿಳೆ ಮಾಡಿದ್ದಾಳೆ. ಅಲ್ಲದೇ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನಂತೆ ಈ ವೇಳೆ ಆರೋಪಿಯನ್ನು ತಳ್ಳಿ ಹೊರಗೆ ಓಡಿ ಬಂದ ಮಹಿಳೆ ಭಯ ಮತ್ತು ಆರೋಪಿಯಿಂದ ಹೆದರಿ ಇಷ್ಟು ದಿನ ದೂರು ಕೂಡ ನೀಡಿರಲಿಲ್ಲ ಎನ್ನಲಾಗುತ್ತಿದೆ.
ಇನ್ಸ್ ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ,ಪರಿಶೀಲನೆ
ಸಂತ್ರಸ್ತ ಮಹಿಳೆ ಅಶೋಕ್ ನಗರ ಪೊಲೀಸ್ ಠಾಣೆಗೆ ಕೆಲ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಬಂದು ದೂರನ್ನು ನೀಡಿದ್ದಾಳೆ. ಅಶೋಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ,ಪರಿಶೀಲನೆಯನ್ನು ನಡೆಸಿ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಮಹಿಳೆಯಿಂದ ಘಟನೆ ಮಾಹಿತಿ ಪಡೆದುಕೊಳ್ಳುತ್ತಿರೊ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಆರೋಪಿಯನ್ನು ಸಂತ್ರಸ್ತೆಯ ಪತಿ ಐಡೆಂಡಿಫೈ ಮಾಡಿದ್ದಾರೆ
"ಸಂತ್ರಸ್ತ ಮಹಿಳೆ ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದಾರೆ. ಆರೋಪಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಆರೋಪಿಯನ್ನು ಸಂತ್ರಸ್ತೆಯ ಪತಿ ಐಡೆಂಟಿಫೈ ಮಾಡಿದ್ದಾರೆ. ದೂರನ್ನು ಪಡೆದು ತನಿಖೆಯನ್ನು ಮುಂದುವರೆಸುತ್ತೇವೆ" ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಚಾಕು ತೋರಿಸಿ ಮೈಕೈಯನ್ನು ಮುಟ್ಟಿ ಅಸಭ್ಯ ವರ್ತನೆ
"ಮಹಿಳೆಯ ಮನೆಯ ಹತ್ತಿರ ಚಾಪಲ್ ಇರುತ್ತದೆ. ಆ ಚಾಪಲ್ ನಲ್ಲಿ ಮಹಿಳೆಯ ಪತಿ ಕೆಲಸ ಮಾಡುತ್ತಿರುತ್ತಾರೆ. ಪತಿಯು ಲೈಟ್ ಆಫ್ ಮಾಡಿ ಬರುವಂತೆ ಹೇಳುತ್ತಾರೆ. ಆಗ ಮಹಿಳೆ ಲೈಟ್ ಆಫ್ ಮಾಡಲು ಹೋದಾಗ ಒಂದು ಲೈಟ್ ಆಫ್ ಮಾಡುತ್ತಾರೆ. ವಿಲಿಯಂ ಪ್ರಕಾಶ್ ಎಂಬ ದಡಿಯಾ ಇರುತ್ತಾನೆ. ಆತ ಎರಡು ನೈಫ್ ಇಟ್ಟುಕೊಂಡಿರುತ್ತಾನೆ. ಚಾಕು ತೋರಿಸಿ ಮೈಕೈಯನ್ನು ಮುಟ್ಟಿ ಅಸಭ್ಯವಾಗಿ ವರ್ತನೆಯನ್ನು ಮಾಡಿದ್ದಾನೆ. ಆ ವೇಳೆ ಜೋರಾಗಿ ಕಿರುಚಿ ಮಹಿಳೆ ಆಚೆ ಬರುತ್ತಾಳೆ. ಆಕೆಯ ಪತಿಯು ಓಡಿಬಂದು ಆತನನ್ನು ಐಡೆಂಟಿಫೈ ಮಾಡಿ ಹಿಂಬಾಲಿಸಿ ಓಡಿಸಿಕೊಂಡು ಹೋಗಿದ್ದಾನೆ. ಈ ಸಂಬಂಧ ಮಹಿಳೆ ದೂರನ್ನು ನೀಡಿದ್ದಾರೆ. ಮಹಿಳೆಗೆ ನ್ಯಾಯಸಿಗಬೇಕು" ಎಂದು ಆಪ್ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಕೆ ಮಥಾಯಿ ತಿಳಿಸಿದ್ದಾರೆ.
ಅಶೋಕ್ ನಗರ ಪೊಲೀಸರಿಂದ ತನಿಖೆ
ಮಹಿಳೆಯು ಸವಿಸ್ತಾರವಾಗಿ ಅಶೋಕ್ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು. ಎಫ್ ಐಆರ್ ದಾಖಲನ್ನು ಮಾಡಲಾಗಿದೆ. ಮಹಿಳೆಯು ಆರೋಪಿಯ ಹೆಸರನ್ನು ನಮೂದು ಮಾಡಿರುವುದರಿಂದ ಆರೋಪಿ ವಿಲಿಯಂ ಪ್ರಕಾಶ್ ಎಂಬಾತನನ್ನು ಅಶೋಕ್ ನಗರ ಪೊಲೀಸರು ಬಂಧಿಸಿ ತನಿಖೆಯನ್ನು ನಡೆಸುವ ಸಾಧ್ಯತೆಗಳಿವೆ.