ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ 5 ವರ್ಷದಲ್ಲಿ 70 ಸಾವು, ಅಂಕಿ ಅಂಶ ವಿವರ ಇಲ್ಲಿದೆ
ಬೆಂಗಳೂರು, ನವೆಂಬರ್ 21: ಇತ್ತೀಚಿಗೆ ಬೆಂಗಳೂರಿನಲ್ಲಿ ಯಾರದ್ದೋ ನಿರ್ಲಕ್ಷ್ಯಕ್ಕೆ ತಾಯಿ ಮಗು ಸುಟ್ಟು ಕರಕಲಾಗಿ ಹೋದರು. ಬೆಸ್ಕಾಂ ಬೇಜವಾಬ್ದಾರಿಗೆ ಎರಡು ಜೀವಗಳ ದಾರುಣ ಸಾವನ್ನಪ್ಪಿದ್ದರು. ಈ ತಪ್ಪಿಗೆ ಅಧಿಕಾರಿಗಳ ಅಮಾನತ್ತು ಆಗಿದೆ. ಆದರೆ ಇದೇ ಮೊದಲ ಘಟನೆಯಲ್ಲ. ಈ ಹಿಂದೆಯೂ ಈ ರೀತಿಯ ಘಟನೆಯಾಗಿದ್ದು, ಈ ಬಗ್ಗೆ ವಿವರ ಇಲ್ಲಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ 11 ಕೆವಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಸ್ಥಳದಲ್ಲಿಯೇ ದಾರುಣವಾಗಿ ಸಾವನಪ್ಪಿದ್ದರು. ಇಂತಹ ಪ್ರಕರಣ ನಡೆಯಲು ಪ್ರಮುಖ ಕಾರಣವಾಗಿದ್ದು ಬೆಸ್ಕಾಂನ ಬೇಜವಾಬ್ದಾರಿತನ. ಇನ್ನು ಈ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳ ತೀವ್ರ ನಿರ್ಲಕ್ಷದಿಂದಲೇ ಈ ಘಟನೆ ನಡೆದಿದೆ ಎನ್ನುವುದು ಗೊತ್ತಾಗ್ತಿದ್ದಂತೆ, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಐವರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಘಟನೆ ಸಂಬಂಧ ಇಬ್ಬರು ಅಧಿಕಾರಿಗಳ ಅಮಾನತ್ತು ಮಾಡಿದ್ದು, ಉಳಿದ ಮೂವರಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ. ಆದರೆ ಇಷ್ಟು ದಾರುಣ ಘಟನೆಗೆ ಕಾರಣವಾದವರ ವಿರುದ್ಧ ನಿರ್ಲಕ್ಷ್ಯ ಆರೋಪಡಿ ಕೇಸ್ ದಾಖಲಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯೇ ಎಲ್ಲರೂ ಸ್ಟೇಷನ್ ಬೇಲ್ ಪಡೆದು ಬಿಡುಗಡೆಯಾಗಿರುವುದು ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಐದು ಲಕ್ಷ ಪರಿಹಾರದ ಹಣವನ್ನು ಹೆಚ್ಚಿಸಬೇಕು, ಪತಿ ಸಂತೋಷ್ಗೆ ಸರ್ಕಾರಿ ಉದ್ಯೋಗ ಕೊಡಬೇಕು ಎನ್ನುವ ಆಗ್ರಹ ಜೋರಾಗಿಯೇ ಕೇಳಿ ಬರುತ್ತಿದೆ.
ಇನ್ನು ಈ ಕುರಿತಾಗಿ ಬೆಸ್ಕಾಂ ಗುಣಮಟ್ಟ, ಪ್ರಮಾಣಿತ, ಸುರಕ್ಷಣಾ ಪ್ರಧಾನ ವ್ಯವಸ್ಥಾಪಕರಾದ ಎಸ್ ಟಿ ಶಾಂತಮಲ್ಲಪ್ಪ ಮಾತನಾಡಿ ತಪ್ಪಾಗಿದೆ. ಈಗಾಗಲೇ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಜರುಗುಸಲಾಗುತ್ತದೆ. ಘಟನಾ ಸ್ಥಳದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ನಡೆಯುತ್ತಿದ್ದರಿಂದ ಸರಿಯಾಗಿ ಗ್ರೌಂಡ್ನಲ್ಲಿ ಕೆಲಸ ಮಾಡಲು ಆಗಿರಲಿಲ್ಲ.
ಈ ಘಟನೆ ನಮ್ಮ ಗಮನಕ್ಕೆ ಬಂದ ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗುವ ಮೊದಲೇ ದುರಂತವಾಗಿದೆ. ಬೆಳಗ್ಗೆ 3.50 ಕ್ಕೆ ಡ್ರಿಪ್ ಆಗಿ ಕೇಬಲ್ ಕಟ್ಟಾಗಿದೆ. ಡ್ರಿಪ್ ಆಗದೇ ಇರುವುದು ಸಮಸ್ಯೆಗೆ ಮೂಲ ಕಾರಣ ಎಂದು ವಿವರಿಸಿದ್ದಾರೆ.
ಇನ್ನೊಂದು ಶಾಕಿಂಗ್ ವಿಚಾರ ಅಂದರೆ ಕಳೆದ ಐದು ವರ್ಷಗಳಿಂದ ಕಾಡುಗೋಡಿಯಲ್ಲಿ ದುರಂತದ ರೀತಿ ಒಟ್ಟು 80 ಪ್ರಕರಣಗಳು ಕಂಡುಬಂದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ ವಹಿಸಿದ್ದಾರೆ. ಹಾಗಾದರೆ ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ಪ್ರಕರಣಗಳು ನಡೆದಿವೆ ಬಗ್ಗೆ ವಿವರ ಇಲ್ಲಿದೆ.
2018 ರಿಂದ ಇಲ್ಲಿಯವರೆಗೆ ತಂತಿ ಬಿದ್ದು ಬೆಸ್ಕಾಂ ವ್ಯಾಪ್ತಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು..?
1. 2018-19 ರಲ್ಲಿ ತಂತಿ ಬಿದ್ದು 11 ಜನ ಸಾಮಾನ್ಯರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದರು.
2. 2019-20 ರಲ್ಲಿ 10 ಜನ ಸಾವನ್ನಪ್ಪಿದ್ದು, 3 ಜನರಿಗೆ ಗಾಯಗೊಂಡಿದ್ದರು.
3. 2020-21 ರಲ್ಲಿ 9 ಜನ ಸಾವನ್ನಪ್ಪಿದ್ದು, 3 ಜನರಿಗೆ ಗಾಯಗೊಂಡಿದ್ದರು.
4. 2021-22 ರಲ್ಲಿ 13 ಜನ ಸಾವನ್ನಪ್ಪಿದ್ದು, 2 ಗಾಯಗೊಂಡಿದ್ದರು.
5. 2022-23 ರಲ್ಲಿ 19 ಜನ ಸಾವನ್ನಪ್ಪಿದ್ದು, 2 ಗಾಯಗೊಂಡಿದ್ದರು.
6. 2023-24(ಅಕ್ಟೋಬರ್ 2023 ರವರೆಗೆ) 8 ಜನ ಸಾವನ್ನಪ್ಪಿದ್ದಾರೆ.
ಕಳೆದ 5 ವರ್ಷದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜನರು ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದು, ಅದರಲ್ಲಿ ಒಟ್ಟು 70 ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಎಲ್ಲಿ ನೋಡಿದರೂ ವಿದ್ಯುತ್ ತಂತಿಗಳು, ಹೈಟೆನ್ಶನ್ ವಯರ್ಗಳು ಹಾಗೂ ಕೇಬಲ್ ವಯರ್ಗಳು ಕಾಣಿಸುತ್ತಿದೆ. ಇವುಗಳನ್ನು ಆದಷ್ಟು ಬೇಗ ತೆರವುಗೊಳಿಸಿ ದುರಂತ ನಡೆಯದಂತೆ ಅಧಿಕಾರಿಗಳು ಕ್ರಮ ತೆಗದುಕೊಳ್ಳಬೇಕಿದೆ.












Click it and Unblock the Notifications